Latest Videos

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವ ಹಾಗೆ ಕಾಣ್ತಿಲ್ಲ: ರಾಮಲಿಂಗಾರೆಡ್ಡಿ

By Kannadaprabha NewsFirst Published May 24, 2024, 11:43 AM IST
Highlights

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಆ ತರಹದ್ದು ಅವಕಾಶ ಇಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಎಲ್ಲಿಯವರೆಗೆ ಮುಂದುವರಿಯುತ್ತಾರೆ ಎಂಬುವುದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬೆಳಗಾವಿ (ಮೇ.24): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಆ ತರಹದ್ದು ಅವಕಾಶ ಇಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಎಲ್ಲಿಯವರೆಗೆ ಮುಂದುವರಿಯುತ್ತಾರೆ ಎಂಬುವುದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಫಲಿತಾಂಶದ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು. ಬಳಿಕ ಸಚಿವ ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿ, ಅದೆಲ್ಲ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ತಿಳಿಸಿದರು.

 

ಸಂಪುಟ ಪುನರ್ ರಚನೆ ಸಿಎಂಗೆ ಬಿಟ್ಟ ವಿಚಾರ: ಸಚಿವ ರಾಮಲಿಂಗಾರೆಡ್ಡಿ

ಫಲಿತಾಂಶ ಬಳಿಕ ಬಿಜೆಪಿಯವರೇ ಬರ್ತಾರೆ:

ಚುನಾವಣೆ ಫಲಿತಾಂಶ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಇರುತ್ತಾರೆ ಎಂಬುವುದನ್ನು ಅವರು (ಬಿಜೆಪಿ) ನೋಡಿಕೊಳ್ಳಬೇಕು. ಫಲಿತಾಂಶ ಆದಮೇಲೆ ಅವರ ಪಕ್ಷದಲ್ಲಿ ಎಷ್ಟು ಜನ ಪಕ್ಷಾಂತರ ಮಾಡುತ್ತಾರೆ ಅವರು ಬಂದೋಬಸ್ತ್ ಮಾಡಿಕೊಳ್ಳಬೇಕು. ನಾವು ಮಾಡುವುದಿಲ್ಲ ಮತ್ತು ನಮಗೆ ಅವಶ್ಯಕತೆ ಇಲ್ಲ. ಅವರು ಸೋತರೆ, ಓಡಿಹೋಗುತ್ತಾರೆ. ನಮ್ಮವರು ಯಾರು ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಬಹಳ ದಿನ ಉಳಿಯಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪಾಪ ಅವರು ಹಗಲು ಕನಸು ಕಾಣುತ್ತಿದ್ದಾರೆ. ಕಾಣಲಿ ಬಿಡಿ. ಹಗಲು ಕನಸು ಕಂಡವರಿಗೆ ನಾವು ಬೇಡ ಎನ್ನುವುದಕ್ಕೆ ಆಗುತ್ತಾ? ಅವರು ಕನಸು ಕಾಣಲಿ ಬಿಡಿ. ನೀವು ಟಿವಿ, ಪೇಪರ್‌ನಲ್ಲಿ ತೋರಿಸುತ್ತೀರಿ. ಅದಕ್ಕೆ ಅವರು ಹೇಳುತ್ತಾರೆ. ನೀವು ತೋರಿಸುವುದರಿಂದ ಅವರು ಹೇಳುತ್ತಿರುತ್ತಾರೆ ಎಂದು ತಿರುಗೇಟು ನೀಡಿದರು.

ಮಹಾರಾಷ್ಟ್ರ ಸರ್ಕಾರ ಮಾದರಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಚಿವರು, ಅವರು ಹೇಳುವ ಮಾತಿಗೆ ಯಾಕೆ ಬೆಲೆ ಕೊಡ್ತೀರಾ? ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ. ಏನೂ ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿಕೊಂಡು ಸರ್ಕಾರ ಮಾಡುತ್ತಿವೆ. ನಮ್ಮಲ್ಲಿ ಒಂದೇ ಪಕ್ಷ ಸರ್ಕಾರ ಮಾಡುತ್ತಿದ್ದು ನಮ್ಮಲ್ಲಿ ಒಗ್ಗಟ್ಟು ಇದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವ ಹಾಗೇ ಕಾಣಿಸುತ್ತಿಲ್ಲ. ಸರ್ಕಾರ ಬದಲಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗೆ ಎಷ್ಟು ಸೀಟುಗಳು ಬರುತ್ತವೆ ಎಂಬುವುದು ಗೊತ್ತಾಗುತ್ತೆ. ಬಿಜೆಪಿಯವರದ್ದು ಸಿಂಗಲ್ ಡಿಜಿಟ್ ಬರುತ್ತೆ. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಬರುವ ಹಾಗೆ ಕಾಣುತ್ತಿಲ್ಲ. ಕೇಂದ್ರದಲ್ಲಿ ಸರ್ಕಾರ ಬದಲಾಗುತ್ತದೆ. ಲೋಕಸಭಾ ಸದಸ್ಯರನ್ನು ಬಿಜೆಪಿಯವರು ಪಕ್ಷಾಂತರ ಮಾಡುತ್ತಿದ್ದರು. ಅದೇ ಅವರಿಗೆ ತಿರುಗುಬಾಣ ಆಗಲಿದೆ. ರಾಜ್ಯದಲ್ಲಿ ಬಿಜೆಪಿಗೆ 10ಸ್ಥಾನ ಬರಲ್ಲ ಎಂದು ಲೇವಡಿ ಮಾಡಿದರು.ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ವಿಚಾರಕ್ಕೆ ಉತ್ತರಿಸಿದರ ಅವರು, ನಮ್ಮ ಸರ್ಕಾರಕ್ಕೂ ನಮ್ಮ ಪಕ್ಷಕ್ಕೂ ಹಾಗೂ ಪೆನ್‌ಡ್ರೈವ್‌ಗೂ ಯಾವ ಸಂಬಂಧವೂ ಇಲ್ಲ. ಪ್ರಜ್ವಲ್ ರೇವಣ್ಣ ಕರೆತರುವ ಬಗ್ಗೆ ಗೃಹಮಂತ್ರಿ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ದೇಶದಲ್ಲಿರುವ ಭ್ರಷ್ಟರೆಲ್ಲ ಬಿಜೆಪಿಯಲ್ಲಿದ್ದಾರೆ: ರಾಮಲಿಂಗಾರೆಡ್ಡಿ ಆರೋಪ

ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದಿರುವ ಪಕ್ಷ. ಸ್ವಾತಂತ್ರ್ಯ ಬಂದಾಗ ಬಿಜೆಪಿ ಇರಲಿಲ್ಲ. ಆರ್‌ಎಸ್‌ಎಸ್ ಸೇರಿ ಇವರಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರಿಂದ ನಾವೇನೂ ಕಲಿಯೋದು ಬೇಕಿಲ್ಲ. ನರೇಂದ್ರ ಮೋದಿ ಒಬ್ಬರೇ ₹130 ಲಕ್ಷ ಕೋಟಿ ಸಾಲ ಮಾಡುವ ಮೂಲಕ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಮೋದಿ ಹರಿಶ್ಚಂದ್ರನ ಹಾಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ಇರುವ ಭ್ರಷ್ಟಾಚಾರಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಎಲ್ಲ ಕೆಟ್ಟ ಜನರೆಲ್ಲರೂ ಬಿಜೆಪಿ ಪಕ್ಷದಲ್ಲಿದ್ದು, ನಮ್ಮ ಪಕ್ಷ ಶುದ್ಧೀಕರಣವಾಗಿದೆ ಎಂದು ತಿರುಗೇಟು ನೀಡಿದರು.

click me!