Council Election Karnataka : ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದ ರಮೇಶ್‌ ಜಾರಕಿಹೊಳಿ ?

By Kannadaprabha NewsFirst Published Dec 15, 2021, 8:28 AM IST
Highlights
  • ಬಿಜೆಪಿಗರ ಕೆಂಗಣ್ಣಿಗೆ ರಮೇಶ್‌ ಜಾರಕಿಹೊಳಿ ? 
  •  ರಮೇಶ್‌ ಜಾರಕಿಹೊಳಿ ಪಟ್ಟು ಹಿಡಿದು ಲಖನ್‌ ಕಣಕ್ಕಿಳಿಸಿದ್ದರು
  •  ಕವಟಗಿ ಮಠ, ಲಖನ್‌ ಇಬ್ಬರನ್ನೂ ಗೆಲ್ಲಿಸುವ ಭರವಸೆ ಕೊಟ್ಟಿದ್ದರು
  •  ಈಗ ಅಧಿಕೃತ ಅಭ್ಯರ್ಥಿ ಸೋಲಿನಿಂದ ಬಿಜೆಪಿಗೆ ಭಾರೀ ಮುಖಭಂಗ

 ಬೆಳಗಾವಿ (ಡಿ.15):   ಬೆಳಗಾವಿ ವಿಧಾನ ಪರಿಷತ್‌ ದ್ವಿ ಸದಸ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ (Belagavi MLC Election) ಸೋದರ ಲಖನ್‌ ಜಾರಕಿಹೊಳಿ ಗೆಲುವು ಸಾಧಿಸಿದ್ದರೂ, ಬಿಜೆಪಿಯ (BJP) ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿ ಮಠ ಅವರ ಸೋಲು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh jarkiholi) ಅವರಿಗೆ ಸಂಕಷ್ಟ ತಂದಿಟ್ಟಿದೆ.  ಹೇಳಿ ಕೇಳಿ ಲಖನ್‌ ಜಾರಕಿಹೊಳಿ (Lakhan Jarkiholi) ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇ ರಮೇಶ್‌ ಜಾರಕಿಹೊಳಿ. ತನ್ನ ರಾಜಕೀಯ (Politics) ವೈರಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಸೋದರ, ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿ ಹೊಳಿಯನ್ನು ಸೋಲಿಸಿ ಬಿಜೆಪಿಯನ್ನು (BJP) ಗೆಲ್ಲಿಸುವುದು ಮತ್ತು ತನ್ನ ಸೋದರ ಲಖನ್‌ ಜಾರಕಿಹೊಳಿಯನ್ನೂ ಪರಿಷತ್‌ ಸದಸ್ಯನನ್ನಾಗಿ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವುದು ರಮೇಶ್‌ ಲೆಕ್ಕಾಚಾರ ಆಗಿತ್ತು.

ಆದರೆ ಇಂಥ ದುಸ್ಸಾಹಸ ಬಿಜೆಪಿಯ ಯಾವೊಬ್ಬ ನಾಯಕರಿಗೂ ಬೇಕಿರಲಿಲ್ಲ. ಆದರೂ, ಸ್ಥಳೀಯ ರಾಜಕಾರಣದ (Politics) ಮೇಲೆ ತನ್ನದೇ ಆದ ಹಿಡಿತಹೊಂದಿರುವ ರಮೇಶ್‌ ಜಾರಕಿಹೊಳಿ  ಪಟ್ಟು ಹಿಡಿದು, ಪದೇ ಪದೆ ದೆಹಲಿಗೆ (Delhi) ತೆರಳಿ ವರಿಷ್ಠರ ಮುಂದೆ ಇಬ್ಬರನ್ನೂ ಗೆಲ್ಲಿಸಿ ತರುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲ್ಲಬೇಕು, ಆ ನಂತರವೇ ಲಖನ್‌ ಸರದಿ ಎಂದು ವರಿಷ್ಠರು ಸ್ಪಷ್ಟವಾಗಿ ಸೂಚಿಸಿದ್ದರು. ಒಂದು ವೇಳೆ ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೋಲಾದರೆ ಪರಿಣಾಮ ಎದುರಿಸಬೇಕಾದೀತು ಎಂದು ಕೇಂದ್ರ ಸಚಿವರೊಬ್ಬರ ಮೂಲಕ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದರು.

ಪರಿಷತ್‌ ಚುನಾವಣೆ ಪ್ರಚಾರಕ್ಕೆ ಬೆಳಗಾವಿಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ (CM basavaraja Bommai) ಕೂಡ ರಮೇಶ್‌ ಜಾರಕಿಹೊಳಿ ಸೇರಿ ಸ್ಥಳೀಯ ಮುಖಂಡರಿಗೆ ಕವಟಗಿ ಮಠ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲ್ಲುವಂತೆ ನೋಡಿಕೊಳ್ಳಿ ಎಂದು ಸ್ಪಷ್ಟವಾಗಿ ಸೂಚಿಸಿ ಹೋಗಿದ್ದರು. ರಮೇಶ್‌ ಜಾರಕಿಹೊಳಿ ಕೂಡ ಮೊದಲ ವೋಟು ಕವಟಗಿ ಮಠ ಅವರಿಗೆ, ಎರಡನೇ ವೋಟು ಕಾಂಗ್ರೆಸ್‌ (Congress) ಸೋಲಿಸಲು ಎಂದು ಪ್ರಚಾರವನ್ನೂ ನಡೆಸಿದ್ದರು. ಆದರೆ, ಇದೀಗ ಪಕ್ಷದ ಅಧಿಕೃತ ಅಭ್ಯರ್ಥಿ ಸೋತು ಲಖನ್‌ ಗೆದ್ದಿದ್ದಾರೆ. ಇದರಿಂದ ಬಿಜೆಪಿಗೆ ಮುಖಭಂಗವಾದಂತಾಗಿದ್ದು, ಇದರ ಹೊಣೆಯನ್ನು ರಮೇಶ್‌ ಜಾರಕಿಹೊಳಿ ಅವರೇ ಹೊರಬೇಕಿದೆ. ಹೀಗಾಗಿ ರಮೇಶ್‌ ಜಾರಕಿಹೊಳಿ ಅವರು ಬಿಜೆಪಿ ಹೈಕಮಾಂಡ್‌ ಅವಕೃಪೆಗೆ ಒಳಗಾಗಲಿದ್ದಾರೆಯೇ ಎನ್ನುವ ಕುತೂಹಲ ಮೂಡಿದೆ.

ಆದರೆ, ಕೆಲವರ ಪ್ರಕಾರ ರಮೇಶ ಜಾರಕಿಹೊಳಿ ಅವರ ತಂತ್ರಗಾರಿಕೆಯೂ ಅಡಗಿದೆ ಎನ್ನಲಾಗಿದೆ. ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಮೂಲಕ 2023ರ ಚುನಾವಣೆಯಲ್ಲಿ ತಮ್ಮ ಅನುಪಸ್ಥಿತಿ ಯಾವ ರೀತಿ ಪರಿಣಾಮ ಬೀರಬುಹುದು ಎಂಬ ಸಂದೇಶವನ್ನು ರಮೇಶ್‌ ಜಾರಕಿಹೊಳಿ ಈ ಮೂಲಕ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜಾರಕಿಹೊಳಿ ಕುಟುಂಬದಲ್ಲಿ ನಾಲ್ವರು ಶಾಸಕರು:  

ಬೆಳಗಾವಿಯಲ್ಲಿ (Belagavi) ಜಾರಕಿಹೊಳಿ (Jarkiholi) ಕುಟುಂಬ ರಾಜಕೀಯದಲ್ಲಿ ಬಹಳ ಪ್ರಬಲ ಮತ್ತು ಬಲಿಷ್ಠವಾಗಿದೆ. ಈಗ ಅವರ ಕುಟುಂಬದ ಮತ್ತೊಬ್ಬ ಸದಸ್ಯರು ಈಗ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ರಾಜಕೀಯ (Politics) ಪ್ರವೇಶಿಸಿದ್ದಾರೆ. ಇದರೊಂದಿಗೆ ಜಾರಕಿಹೊಳಿ ಕುಟುಂಬದ ನಾಲ್ವರು ಶಾಸಕರಾದಂತೆ ಆಗಿದೆ. ಈ ಹಿಂದೆ ಗೋಕಾಕ ವಿಧಾನಸಭೆ (Assembly) ಉಪ ಚುನಾವಣೆಯಲ್ಲಿ ಅಣ್ಣನ ವಿರುದ್ಧವೇ ಸ್ಪರ್ಧೆ ಮಾಡುವ ಮೂಲಕ ಸೋಲು ಕಂಡಿದ್ದ ಉದ್ಯಮಿ ಲಖನ್‌ ಜಾರಕಿಹೊಳಿಯನ್ನು ವಿಧಾನ ಪರಿಷತ್‌ಗೆ (MLC) ಪ್ರವೇಶ ಪಡೆದಿದ್ದಾರೆ. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಈಗಾಗಲೇ ಶಾಸಕರಾಗಿದ್ದಾರೆ.

ಸೋತ ಅಣ್ಣನೇ ಈಗ ಗೆಲ್ಲಿಸಿದ!

ಮಾಜಿ ಸಚಿವ ರಮೇಶ ಜಾರಕಿಹೊಳಿ (Ramesh Jarkiholi) ಕಾಂಗ್ರೆಸ್‌ಗೆ (Congress) ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದರು. ಈ ವೇಳೆ ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ನಿಂದ (Congress) ಸ್ಪರ್ಧಿಸಿದ್ದರು. ಆಗ ರಮೇಶ ಜಾರಕಿಹೊಳಿ ಗೆಲುವು ಸಾಧಿಸಿದ್ದರು. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಮೇಶ ಜಾರಕಿಹೊಳಿಯೇ ತನ್ನ ತಮ್ಮನ ಗೆಲುವಿನ ರೂವಾರಿಯಾಗಿದ್ದಾರೆ.

ರಾಜಕೀಯ ಕುಟುಂಬಗಳಿಗೆ ಗೆಲುವು

ವಿಧಾನ ಪರಿಷತ್‌ ದ್ವಿ ಸದಸ್ಯತ್ವ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ (Election) ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳು ವಿಜಯ ಶಾಲಿಯಾಗಿದ್ದಾರೆ. ಗೆದ್ದಿರುವ ಇಬ್ಬರೂ ರಾಜಕೀಯ (Politics) ಕುಟುಂಬದವರೇ ಎನ್ನುವುದು ವಿಶೇಷ. ಕಾಂಗ್ರೆಸ್‌ (Congress) ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರರ ಸಹೋದರರಾದರೆ, ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಅವರ ಸಹೋದರರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಮೂವರು ಶಾಸಕರಾಗಿದ್ದಾರೆ.

click me!