
ಬೆಂಗಳೂರು (ಡಿ.16): ವರ್ಷಕ್ಕೆ 40 ಲಕ್ಷ ರು. ಆದಾಯವಿದೆ ಎಂದು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನಮೂದಿಸಿರುವ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ 124 ಕೋಟಿ ರು. ಸಾಲ ಪಡೆದಿದ್ದಾರೆ. ಹಾಗಾದರೆ ಅದರ ಆದಾಯ ಮೂಲ ಯಾವುದು? ಅದನ್ನು ಬಹಿರಂಗ ಪಡಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಆಗ್ರಹಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 200 ಕೋಟಿ ರು. ಮೌಲ್ಯದ ಆಸ್ತಿ ಖರೀದಿಗೆ 124 ಕೋಟಿ ರು. ಸಾಲವನ್ನು ಬ್ಯಾಂಕ್ನಿಂದ ಪಡೆದಿದ್ದಾರೆ.
ಇಷ್ಟೊಂದು ಮೊತ್ತದ ಆಸ್ತಿ ಹೇಗೆ ಸಂಪಾದನೆ ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು. ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಆದಾಯ ಪ್ರಮಾಣ ಪತ್ರದಲ್ಲಿ ಸಾಲ ಪಡೆದಿರುವುದಕ್ಕೆ ಆದಾಯದ ಮೂಲದ ಬಗ್ಗೆ ಮಾಹಿತಿ ನೀಡಿಲ್ಲ. ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ಎಂದಿದ್ದಾರೆ. ನಾವು ನಿಂತಿರುವ ಜಾಗವೇ (ವಿಧಾನಸೌಧ) ದೇವಾಲಯ. ಹೀಗಾಗಿ 124 ಕೋಟಿ ರು.ನ ಆದಾಯ ಮೂಲವನ್ನು ಮೊದಲ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಧರ್ಮಸ್ಥಳದ ಬಗ್ಗೆ ನನಗೆ ಅಪಾರ ಭಕ್ತಿ ಇದೆ. ಆದರೆ, ರಾಜೇಗೌಡ ಅವರು ದಾಖಲೆಗೆ ಉತ್ತರ ನೀಡಬೇಕು. ಇಲ್ಲ-ಸಲ್ಲದ್ದು ಹೇಳಿ ದಾರಿತಪ್ಪಿಸುವ ಕೆಲಸ ಮಾಡಬಾರದು.
ಡಿ.ಎನ್.ಜೀವರಾಜ್ಗೆ ಸವಾಲು ಹಾಕಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ
ಈಗಾಗಲೇ ದಿನೇಶ್ ಎಂಬುವವರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ. ಸುಳ್ಳು ದಾಖಲೆ ನೀಡಿ ಚುನಾವಣಾ ಕಣಕ್ಕೆ ಇಳಿದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು. ಆದರೆ, 124 ಕೋಟಿ ರು.ನಷ್ಟು ಭ್ರಷ್ಟಾಚಾರ ಎಸಗಿರುವುದರಿಂದ ಆದಾಯ ತೆರಿಗೆ ಇಲಾಖೆ ಅಥವಾ ಜಾರಿ ನಿರ್ದೇಶನಾಲಯ ತನಿಖೆಗೊಳಪಡುವ ಪ್ರಕರಣ ಇದಾಗಿದೆ ಎಂದರು. ಚುನಾವಣೆ ವೇಳೆ ಪ್ರಮಾಣಪತ್ರದಲ್ಲಿ ಶಾಸಕ 40 ಲಕ್ಷ ರು. ಆದಾಯ ತೋರಿಸಿದ್ದಾರೆ. ಹಾಗಿದ್ದರೂ 124 ಕೋಟಿ ರು. ಸಾಲವನ್ನು ಬ್ಯಾಂಕ್ನಿಂದ ಹೇಗೆ ಪಡೆದುಕೊಂಡಿದ್ದಾರೆ.
Karnataka Politics: ಒಕ್ಕಲಿಗರ ಮತ ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ
ಇಷ್ಟು ದೊಡ್ಡ ಮೊತ್ತಕ್ಕೆ ಸಾಲ ನೀಡುವಾಗ ಬ್ಯಾಂಕ್ ಪರಿಶೀಲನೆ ನಡೆಸಿಲ್ಲವೇ? ಮಾಳವಿಕ ಹೆಗ್ಡೆ ಎಂಬುವರಿಂದ ರಾಜೇಗೌಡ ಜಮೀನು ಖರೀದಿಸಿದ್ದಾರೆ. ಜಮೀನಿನ ಮೊತ್ತವು 200 ಕೋಟಿ ರು.ಗಿಂತ ಹೆಚ್ಚು ಆಗಲಿದೆ. ರಾಜೇಗೌಡ ಅವರು ಖರೀದಿಸಿರುವ ಆಸ್ತಿಯಲ್ಲಿ ಯಾವುದೇ ಮೋಸ ಅಥವಾ ಅವ್ಯವಹಾರ ನಡೆದಿಲ್ಲ ಎಂದು ಮಾಳವಿಕ ಹೆಗ್ಡೆ ಹೇಳಿದ್ದಾರೆ. ಅವರಿಗೆ ಮೋಸ ಆಗಿಲ್ಲ ಎನ್ನುವುದನ್ನು ನಾನು ಸ್ವಾಗತಿಸುತ್ತೇನೆ. ನನ್ನ ಪ್ರಶ್ನೆ 40 ಲಕ್ಷ ರು. ಆದಾಯ ತೋರಿಸಿರುವ ಶಾಸಕರು ಹೇಗೆ 124 ಕೋಟಿ ರು. ಸಾಲ ಪಡೆದುಕೊಂಡಿದ್ದಾರೆ ಎಂಬುದು ತಿಳಿಸಬೇಕು. ಹಣದ ಮೂಲದ ಬಗ್ಗೆ ನನಗೆ ಅನುಮಾನ ಇದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.