
ಕಲಬುರಗಿ (ಏ.15) ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಮೀಪಿಸಿರುವಂತೆಯೇ ಎಲ್ಲ ಪ್ರಮುಖ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಘೋಷಿಸಿವೆ. ಅಂತೆಯೇ ಬಿಜೆಪಿ ಈ ಬಾರಿ 52 ಹೊಸ ಮುಖಗಳಿಗೆ ಟಿಕೆಟ್ ನೀಡಿದೆ. ಆದರೆ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿದ ಬಿಎಸ್ವೈ, ಈಶ್ವರಪ್ಪ, ಜಗದೀಶ್ ಶೆಟ್ಟರಂಥ ನಾಯಕರಿಗೆ ಟಿಕೆಟ್ ನೀಡದಿರುವುದು ಕಾರ್ಯಕರ್ತರಲ್ಲೇ ಕಳವಳ ಮೂಡಿಸಿದೆ.
ಬಿಜೆಪಿಯಲ್ಲಿನ ಈ ಬೆಳವಣಿಗೆ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಚಿವ, ಕಾಂಗ್ರೆಸ್ ರಾಜ್ಯ ವಕ್ತಾರ ಪ್ರಿಯಾಂಕ ಖರ್ಗೆ ಅವರು, ತನ್ನ ಪಕ್ಷದ ಹಿರಿಯ ನಾಯಕರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತೆಂಬುದಕ್ಕೆ ಜಗದೀಶ್ ಶೆಟ್ಟರ್ ಉತ್ತಮ ಉದಾಹರಣೆ ಎಂದರು.
ಕಲಬುರಗಿ(Kalaburagi)ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಿಟ್ಟು ಬರಲು ಇನ್ನೇನು ಯಡಿಯೂರಪ್ಪ ಮಾತ್ರ ಬಾಕಿ ಉಳಿದಿರುವುದು. ಅವರಿಗೆ ಆಗಿರುವ ಅನ್ಯಾಯ ಸಹಿಸಿಕೊಂಡು ಯಡಿಯೂರಪ್ಪನವರಾದರೂ ಯಾಕೆ ಪಕ್ಷದಲ್ಲಿದ್ದಾರೋ ಗೊತ್ತಿಲ್ಲ. ಬಿಜೆಪಿಯನ್ನು ಬೇರು ಮಟ್ಟದಲ್ಲಿ ಕಟ್ಟಿ ಬೆಳೆಸಿದ ಮುಖಂಡರನ್ನೇ ಈ ರೀತಿ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಯೂಸ್ ಅಂಡ್ ಥ್ರೋ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಚರ್ ಆಗಿದೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿನಲ್ಲಿ ಅಡ್ವಾನಿ, ಜೋಶಿ, ಅಟಲ್ ಬಿಹಾರಿ ವಾಜಪೇಯಿ ಅವರ ಫೋಟೋ ಕಾಣಿಸುತ್ತಿದ್ದವು. ಆದರೆ ಈಗ ಆ ಫೋಟೋಗಳು ಕಾಣಲು ಸಿಗುತ್ತವೆಯೇ ? ಎಂದು ಪ್ರಶ್ನಿಸಿದರು ಮುಂದುವರಿದು, ಬಿಜೆಪಿಯ ಟಾಪ್ ಲೀಡರ್ಶಿಪ್ ಮುಗಿಸಲು ಕುತಂತ್ರ ನಡೆಯುತ್ತಿದೆ. ಈ ವ್ಯವಸ್ಥೆಯನ್ನ ಬೆಳೆಸದ ಯಾರೋ ಒಬ್ಬರನ್ನ ಸಿಎಂ ಮಾಡಿ ಸಂತೋಷ ಪಡಿಸುವುದಕ್ಕಾಗಿ ಮೋದಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರೌಡಿಗಳಿಗೆ ಕೈಮುಗಿಯುವ ಮೋದಿ:
ಭ್ರಷ್ಟಾಚಾರ ಮುಕ್ತ, ಮಾಫಿಯಾ ಮುಕ್ತ ಹೇಳಿಕೊಳ್ಳುವ ನರೇಂದ್ರ ಮೋದಿ ರೌಡಿಶೀಟರ್ಗಳಿಗೆ ಕೈಮುಗಿಯುತ್ತಾರೆ. ಸ್ವಚ್ಛ ರಾಜಕಾರಣಿಗಳಿಗೆ ಟಿಕೆಟ್ ನೀಡದೆ ಈ ರೀತಿ ಅನ್ಯಾಯ ಮಾಡುತ್ತಾರೆ. ಬಿಜೆಪಿಯವರ ಬ್ಯಾಲೆಟ್ ಪೇಪರ್ ಮೂಲಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂದ್ರೆ ಇದೆನಾ ? ಬಿಜೆಪಿಯ ಹಿರಿಯ ನಾಯಕರನ್ನು ಯಾವ ಮಾನದಂಡದ ಮೇಲೆ ತಿರಸ್ಕರಿಸಿದ್ದಾರೆ? ಪಕ್ಷದ ಕಾರ್ಯಕರ್ತರು ಈ ಮುಖಂಡರನ್ನು ರಿಜೆಕ್ಟ್ ಮಾಡಿದ್ರಾ ? ಅಥವಾ ನಿಮ್ಮ ಬ್ಯಾಲೆಟ್ ಪೇಪರ್ ಮೂಲಕ ಆಯ್ಕೆ ಪ್ರಕ್ರಿಯೆಯೇ ಬೊಗಸ್ಸಾ ? ಪ್ರಶ್ನೆಗಳ ಸುರಿಮಳೆಗೈದರು.
ಲಿಂಗಾಯಿತರ ವೋಟು ಬೇಕಾದಾಗ ಇದೇ ಲಕ್ಷ್ಮಣ ಸವದಿ(Laxman savadi) ಅವರನ್ನು ಡಿಸಿಎಂ ಮಾಡಿದ್ದರು. ಯಡಿಯೂರಪ್ಪ(BS Yadiyurappa)ನವರನ್ನು ಯಾಕೆ ಸಿಎಂ ಸ್ಥಾನದಿಂದ ಕೆಳಗಿಳಿದ್ರು ಅಂತ ಈಗಲೂ ಹೇಳುತ್ತಿಲ್ಲ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಅವಮಾನ ಮಾಡಿದ್ದಾರೆ. ಆದರೆ ಇದೀಗ ಮೋದಿಯವರು ಜಾತ್ರೆಯಲ್ಲಿ ಗೆಳೆಯನ ಕೈ ಹಿಡಿದುಕೊಂಡು ತಿರುಗಿದಂತೆ ಯಡಿಯೂರಪ್ಪರೊಂದಿಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಸ್ವಾಗತ ಎಂದು ನಮ್ಮ ನಾಯಕರು ಹೇಳಿದ್ದಾರೆ ಎನ್ನುವ ಮೂಲಕ ಜಗದೀಶ್ ಶೆಟ್ಟರ್ ನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆದಿದೆಯೆಂಬ ಸುಳಿವು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.