ನಳಿನ್‌ ಕುಮಾರ್‌ ಕಟಿಲ್ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಜಗದೀಶ್‌ ಶೆಟ್ಟರ್ ಸ್ಪಷ್ಟನೆ

By BK AshwinFirst Published Jan 4, 2023, 7:05 PM IST
Highlights

ರಸ್ತೆ ಅಭಿವೃದ್ಧಿ ಬಿಡಿ ಲವ್ ಜಿಹಾದ್ ಬಗ್ಗೆ ಗಮನ ಕೊಡಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಲವರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಜಗದೀಶ್‌ ಶೆಟ್ಟರ್‌,ಸ್ಪಷ್ಟನೆ ನೀಡಿದ್ದಾರೆ. 

ಹುಬ್ಬಳ್ಳಿ (ಜನವರಿ 4, 2023): ಮಹದಾಯಿ (Mahadayi) ವಿಚಾರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ (Congress) ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ.‌ ಸಿದ್ದರಾಮಯ್ಯ (Siddaramaiah), ಡಿ.ಕೆ. ಶಿವಕುಮಾರ್ (DK Shivakumar) ಚುನಾವಣೆಗಾಗಿ ಈ ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಧಿವೇಶನದಲ್ಲಿ ಮಹದಾಯಿ ಬಗ್ಗೆ ಒಂದು ಶಬ್ದವನ್ನೂ ಮಾತಾಡಿಲ್ಲ. ಎಲ್ಲಿ ಮಾತಾಡಬೇಕು, ಅಲ್ಲಿ ಮಾತಾಡೋದು ಬಿಟ್ಟು, ಇಲ್ಲಿ ಬಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ‌

ಅಲ್ಲದೆ, ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಜಗದೀಶ್‌ ಶೆಟ್ಟರ್‌, ಸಿದ್ದರಾಮಯ್ಯ ಅವರ ಅಧಿನಾಯಕಿ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡಲ್ಲ ಅಂದಿದ್ರು. ಸೋನಿಯಾ ಗಾಂಧಿ ಮಾತು ಮೀರಿ ಹೋರಾಡ್ತೀರಾ‌..? ಕಾಂಗ್ರೆಸ್ ಕರ್ನಾಟಕದ ಹಿತಾಸಕ್ತಿಯ ಬಗ್ಗೆ ಒಮ್ಮೆಯೂ ಹೋರಾಡಿಲ್ಲ. ಮಹದಾಯಿ ಹೋರಾಟಗಾರರು, ರೈತರ ಮೇಲೆ ಲಾಠಿಚಾರ್ಜ್‌ ಮಾಡಿಸಿದ್ದ ಕಾಂಗ್ರೆಸ್. ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ನೀರಾವರಿ ಯೋಜನೆ ಜಾರಿ ಮಾಡ್ತೀವಿ ಅಂದಿದ್ದಾರೆ ಸಿದ್ದರಾಮಯ್ಯ. ಯಾವನ್ರೀ ಇವಾ..? ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ‌. 

ಇದನ್ನು ಓದಿ: Mahadayi Dispute: 1 ವರ್ಷದಲ್ಲಿ ಮಹದಾಯಿ ಜಾರಿ: ಕಾರಜೋಳ ಶಪಥ

ಹಾಗೆ, ಇವರು ಸುಳ್ಳುಗಾರರು, ಇವರನ್ನು ಜನ ನಂಬಲ್ಲ. ನ್ಯಾಯಾಧಿಕರಣದಲ್ಲಿ ನಮ್ಮ ಪರ ಆದೇಶ ಬಂದಿದ್ದು, ಯೋಜನೆ ಜಾರಿ ಮಾಡುತ್ತೇವೆ. ಗೋವಾದವರು ಯಾವುದೇ ತಕರಾರು ಮಾಡಿದ್ರೂ ಪ್ರಯೋಜನವಿಲ್ಲ. ವಿಪಕ್ಷಗಳು ರಚನಾತ್ಮಕ ಸಲಹೆ, ಸಹಕಾರ ಕೊಡಲಿ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನಾಟಕವನ್ನು ಜನರು ನಂಬಲ್ಲ ಎಂದೂ ಜಗದೀಶ್‌ ಶೆಟ್ಟರ್‌ ಟೀಕೆ ಮಾಡಿದ್ದಾರೆ.

ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗೋವಾದ ಬೇಡಿಕೆಗಳನ್ನು ಕೇಳದಿದ್ದರೆ, ಕರ್ನಾಟಕಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯದಿದ್ದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕರ್ನಾಟಕಕ್ಕೆ ಅನುಮತಿ ನೀಡಿರುವುದು ಗೋವಾ ಜನರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಗೋವಾ ಮೂಲದ ಕೆಂದ್ರ ಸಚಿವ ಶ್ರೀಪಾದ್‌ ನಾಯಕ್‌ ಬೆದರಿಕೆ ಹಾಕಿದ್ದರು.

ನಳಿನ್‌ ಕುಮಾರ್‌ ಕಟಿಲ್ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ..!
ಇನ್ನು, ರಸ್ತೆ ಅಭಿವೃದ್ಧಿ ಬಿಡಿ ಲವ್ ಜಿಹಾದ್ ಬಗ್ಗೆ ಗಮನ ಕೊಡಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಲವರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಜಗದೀಶ್‌ ಶೆಟ್ಟರ್‌, ನಳಿನ್ ಕುಮಾರ್ ಕಟೀಲ್ ಹೇಳಿರುವ ಉದ್ದೇಶವೇ ಬೇರೆ. ಅವರು ಆ ಅರ್ಥದಲ್ಲಿ ಹೇಳಲಿಕ್ಕೆ ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ತಾನಾಗಿಯೇ ನಡೆಯುತ್ತಿರುತ್ತವೆ. ಹೀಗಾಗಿ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಲವ್ ಜಿಹಾದ್ ಕೂಡ ಗಂಭೀರ ಸಮಸ್ಯೆ. ಹಿಂದೂ ಹೆಣ್ಣು ಮಕ್ಕಳನ್ನು ಬ್ರೈನ್‌ ವಾಶ್ ಮಾಡಿ ಕರೆದುಕೊಂಡು ಹೋಗುತ್ತಿದ್ದಾರೆ. ಲವ್ ಜಿಹಾದ್ ಹೆಸರಲ್ಲಿ ಹಿಂದೂ ಯುವತಿಯರನ್ನು ವಂಚಿಸಲಾಗುತ್ತಿದೆ. ಲವ್ ಜಿಹಾದ್‌ನಿಂದ ಎಷ್ಟೋ ಹೆಣ್ಣು ಮಕ್ಕಳ ಜೀವನ ಹಾಳಾಗಿದೆ. ಇದೊಂದು ಜ್ವಲಂತ ಗಂಭೀರ ಸಮಸ್ಯೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಅಭಿವೃದ್ಧಿ ಬೇಡ ಎಂದು ಯಾರೂ ಕೂಡ ಹೇಳಲಿಕ್ಕೆ ಸಾಧ್ಯವಿಲ್ಲ ಎಂದೂ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಬಿಜೆಪಿ ರಾಜ್ಯಾದ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್‌ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮಹದಾಯಿ: ಗೋವಾ ಮೂಲದ ಕೇಂದ್ರ ಸಚಿವ ರಾಜೀನಾಮೆ ಬೆದರಿಕೆ

click me!