ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ: ಯತ್ನಾಳಗೆ ತಾಕತ್ತಿದ್ದರೆ ಬೇರೆಡೆ ಗೆಲ್ಲಲಿ, ಬಿರಾದಾರ

By Kannadaprabha NewsFirst Published Dec 5, 2023, 12:20 PM IST
Highlights

ಇವರನ್ನು ಶಾಸಕರನ್ನಾಗಿ ಮಾಡಿದ್ದೇ ನಾವು. ಏನೂ ಇಲ್ಲದಾಗ ಅವರೊಂದಿಗಿದ್ದೆವು. ಈಗ ಅವರನ್ನು ಇಷ್ಟೊಂದು ಬೆಳೆಸಿದ್ದೇವೆ. ಅವೆಲ್ಲವನ್ನೂ ತೆಗೆದರೆ ಬೇರೆ ಕತೆ ಶುರುವಾಗುತ್ತದೆ. ಇವರ ಹಗರಣಗಳ ಬಗ್ಗೆ ಮುಂದೆ ಮಾತನಾಡುವೆ. ಯತ್ನಾಳ ನನ್ನನ್ನೇ ಲೋಫರ್‌ ಅಂತ ಕಾರ್ಯಕ್ರಮದಲ್ಲಿ ಜರಿದಿದ್ದಾರೆ. ಇದು ನನಗೆ ನೋವು ತಂದಿದೆ ಎಂದ ಸುರೇಶ ಬಿರಾದಾರ 
 

ವಿಜಯಪುರ(ಡಿ.05):  ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರ ಮುಸುಕಿನ ಗುದ್ದಾಟ ತಾರಕಕ್ಕೇರಿದೆ.ಬಿಜೆಪಿ ವಕ್ತಾರ ಹಾಗೂ ಜಿಲ್ಲಾ ಘಟಕದ ಉಪಾಧ್ಯಕ್ಷ ಸುರೇಶ ಬಿರಾದಾರ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಯತ್ನಾಳರ ಮೇಲೆ ತೀವ್ರ ಹರಿಹಾಯ್ದರು. ಇವರನ್ನು ಶಾಸಕರನ್ನಾಗಿ ಮಾಡಿದ್ದೇ ನಾವು. ಏನೂ ಇಲ್ಲದಾಗ ಅವರೊಂದಿಗಿದ್ದೆವು. ಈಗ ಅವರನ್ನು ಇಷ್ಟೊಂದು ಬೆಳೆಸಿದ್ದೇವೆ. ಅವೆಲ್ಲವನ್ನೂ ತೆಗೆದರೆ ಬೇರೆ ಕತೆ ಶುರುವಾಗುತ್ತದೆ. ಇವರ ಹಗರಣಗಳ ಬಗ್ಗೆ ಮುಂದೆ ಮಾತನಾಡುವೆ. ಯತ್ನಾಳ ನನ್ನನ್ನೇ ಲೋಫರ್‌ ಅಂತ ಕಾರ್ಯಕ್ರಮದಲ್ಲಿ ಜರಿದಿದ್ದಾರೆ. ಇದು ನನಗೆ ನೋವು ತಂದಿದೆ ಎಂದರು.

ಪಕ್ಷದ ವರಿಷ್ಠರಿಗೆ ಈ ಕುರಿತು ದೂರು ನೀಡಲಾಗುವುದು. ಇವರಿಂದಾಗಿ ಪಕ್ಷ ಮುಜುಗರ ಅನುಭವಿಸುತ್ತಿದೆ. ಇವರನ್ನು ಮುಂದೊಂದು ದಿನ ಪಕ್ಷದಿಂದ ಉಚ್ಛಾಟಿಸಿದರೂ ಅಚ್ಚರಿ ಇಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿಯುದ್ದಕ್ಕೂ ಯತ್ನಾಳರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಬಿರಾದಾರ, ಮೊನ್ನೆ ಶಾಸಕ ಯತ್ನಾಳರು ನಗರದ ದಾನಮ್ಮ ದೇವಿ ದೇಗುಲದ ಕಾರ್ಯಕ್ರಮದಲ್ಲಿ ನನ್ನ ಬಗ್ಗೆ ಟೀಕಿಸಿದ್ದಾರೆ. ನಾನು ಹಣ ಹಂಚುವಾಗ ಸಿಕ್ಕಿಬಿದ್ದಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಸಾಕ್ಷಿ ಒದಗಿಸಿದರೆ ನಾನು ರಾಜಕಾರಣದಲ್ಲೇ ಇರುವುದಿಲ್ಲ ಎಂದು ಸವಾಲು ಹಾಕಿದರು.

ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಬದಲು: ಯತ್ನಾಳ್‌ ಬಾಂಬ್‌

ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೇಳಿದ್ದೆ. ಅದೇ ಕಾರಣಕ್ಕಾಗಿ ಅಲ್ಲಿಂದ ಯತ್ನಾಳರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಈಗ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೂ ನನ್ನ ಹೆಸರು ಕೇಳಿಬರುತ್ತಿದ್ದು, ಇದರಿಂದ ಅವರ ಟೀಕೆ ಮತ್ತಷ್ಟು ಹೆಚ್ಚಾಗಿದೆ. ಇವರು ಯಾರನ್ನೂ ಬೆಳೆಸಿಲ್ಲ. ಇವರು ಶಾಸಕರಾಗುವಲ್ಲಿ ನಮ್ಮ ಶ್ರಮವಿದೆ. ಯಾರ ಬಗ್ಗೆಯೂ ಇವರು ಉಪಕಾರ ಸ್ಮರಣೆ ಇಟ್ಟುಕೊಂಡಿಲ್ಲ ಎಂದರು.

ತಾಕತ್ತಿದ್ದರೆ ಬೇರೆಡೆ ನಿಲ್ಲಲಿ:

ನಗರದಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ನಿಂತರೂ ಗೆದ್ದು ಬರುತ್ತಾರೆ. ಯತ್ನಾಳ ನಿಜವಾದ ಹಿಂದೂ ಹುಲಿಯಾಗಿದ್ದರೆ ಪಕ್ಷ ಇವರನ್ನು ಬಬಲೇಶ್ವರದಿಂದ ಕಣಕ್ಕಿಳಿಯಲು ಹೇಳಿದಾಗ ಏಕೆ ಹಿಂದೆ ಸರಿದರು ಎಂದು ಪ್ರಶ್ನಿಸಿದ ಬಿರಾದಾರ, ಶಕ್ತಿ ಇದ್ದರೆ ಇವರು ಬೇರೆ ಕ್ಷೇತ್ರದಿಂದ ಗೆದ್ದು ಬರಲಿ ನೋಡೋಣ ಎಂದು ಸವಾಲು ಹಾಕಿದರು. ಇನ್ನೊಂದು ಸಲ ನನ್ನ ಬಗ್ಗೆ ಯಾವುದೇ ವೇದಿಕೆಯಲ್ಲಿ ಮಾತನಾಡಿದರೆ, ನಾವು ಅಲ್ಲಿಗೇ ನುಗ್ಗುತ್ತೇವೆ ಎಂದು ಎಚ್ಚರಿಸಿದರು.

ಬಿಎಸ್‌ವೈ, ವಿಜಯೇಂದ್ರ ಬಗ್ಗೆ ಯತ್ನಾಳ್ ಟೀಕೆ ಸರಿಯಲ್ಲ: ರೇಣುಕಾಚಾರ್ಯ

ಇವರ ಎಲ್ಲ ಹಗರಣಗಳನ್ನು ಶೀಘ್ರವೇ ಬಯಲಿಗೆ ಎಳೆಯುತ್ತೇನೆ. ತಮ್ಮ ಬಳಿ ಸೂಕ್ತ ದಾಖಲೆಗಳಿವೆ ಎಂದ ಬಿರಾದಾರ, ಆರು ಸಾವಿರ ಮತಗಳಿಂದ ಗೆದ್ದದ್ದು ಗೆಲುವಲ್ಲ. ಮೂವತ್ತಕ್ಕೂ ಹೆಚ್ಚು ಕ್ಷೇತ್ರದಲ್ಲಿ ಇವರ ಉಸ್ತುವಾರಿ ಇತ್ತು. ಅಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ. ಇಂಥವರಿಂದಲೇ ನಾವು ಈ ಬಾರಿ ರಾಜ್ಯದಲ್ಲಿ ಅಧಿಕಾರ ವಂಚಿತರಾಗಿದ್ದೇವೆ. ಪಕ್ಷಕ್ಕೆ ಇವರಿಂದ ಮೇಲಿಂದ ಮೇಲೆ ತೀವ್ರ ಮುಜುಗರ ಆಗುತ್ತಿದೆ. ಯುವಕರು ಯತ್ನಾಳ ಭಾಷಣದಿಂದ ಪ್ರಚೋದನೆಗೆ ಒಳಗಾಗದೇ ಎಚ್ಚರವಾಗಿ ಇರಬೇಕು. ಯತ್ನಾಳರದ್ದು ಬಿಜೆಪಿಯದ್ದಾಗಲಿ ಅಥವಾ ಹಿಂದುತ್ವದ್ದಾಗಲಿ ಸಂಸ್ಕೃತಿ ಅಲ್ಲ. ಅವರದ್ದು ಅನುಕೂಲಸಿಂಧು ಸಂಸ್ಕೃತಿ ಎಂದು ಟೀಕಿಸಿದರು.

ಪಂಚಮಸಾಲಿ ಸಮಾಜಕ್ಕೂ ಯತ್ನಾಳ ಕೊಡುಗೆ ಏನೂ ಇಲ್ಲ. ಇವರು ಎಲ್ಲೆಲ್ಲಿ ಪ್ರಚಾರಕ್ಕೆ ಹೋಗಿದ್ದಾರೆ ಅಲ್ಲೆಲ್ಲ ಪಂಚಮಸಾಲಿ ಅಭ್ಯರ್ಥಿಗಳು ಸೋತಿದ್ದಾರೆ ನಾನು ಕೂಡ ಅದೇ ಸಮುದಾಯಕ್ಕೆ ಸೇರಿದವನಾಗಿದ್ದೇನೆ. ನನಗೆ ಎಲ್ಲ ಆಂತರಿಕ ವಿಷಯಗಳೂ ಗೊತ್ತಿವೆ ಬಿರಾದಾರ ಹೇಳಿದರು.

click me!