* ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಬಿಟ್ ಕಾಯಿನ್ ಹಗರಣ
* ಹೆಸರೇ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣಗೆ ಪೊಲೀಸ್ ಭದ್ರತೆ ನೀಡುವಂತೆ ಒತ್ತಾಯ
* ಸಿಎಂ ಬೊಮ್ಮಾಯಿಗೆ ಒತ್ತಾಯಿಸಿದ ಸಿದ್ದರಾಮಯ್ಯ
ಬೆಂಗಳೂರು, (ನ.15): ಸದ್ಯ ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ (Bitcoin) ಪದ ಭಾರೀ ಸದ್ದು ಮಾಡುತ್ತಿದೆ. ರಾಜಕಾರಣಿಗಳ ಮಧ್ಯೆ ಆರೋಪ ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿರುವ ಬಿಟ್ ಕಾಯಿನ್ ಹಗರಣ(Bitcoin Scam) ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಬಿಟ್ಕಾಯಿನ್ ದಂಧೆ ಜೊತೆ ಕೇಳಿ ಬರುತ್ತಿರುವ ಹೆಸರೇ ಹ್ಯಾಕರ್ ಶ್ರೀಕಿ (Sriki) ಅಲಿಯಾಸ್ ಶ್ರೀಕೃಷ್ಣ. ಮೊನ್ನೆಯಷ್ಟೇ ಹೋಟೆಲ್ನಲ್ಲಿ ಜಗಳ ಮಾಡಿಕೊಂಡು ಅರೆಸ್ಟ್ ಆಗಿದ್ದ ಶ್ರೀಕಿ ರಿಲೀಸ್ ಆಗಿದ್ದಾನೆ. ಮಾಧ್ಯಮಗಳ ಮುಂದೆ ನಂಗೇನು ಗೊತ್ತಿಲ್ಲ, ನಾನೇನು ಮಾಡಿಲ್ಲ ಎಂದು ಹುಸಿನಗೆಯಲ್ಲಿ ಹೇಳಿದ್ದಾನೆ. ಕಾಣುವಷ್ಟು ಸುಲಭವಲ್ಲ ಈತ, ಈ ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀಕಿಯ ಭೂತಕಾಲ ಅಗೆದಷ್ಟು ಆಶ್ವರ್ಯ ಹುಟ್ಟಿಸುವಂತದ್ದು.
Suvarna FIR; ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದ್ರೆ ಏನು? 'ಬುದ್ಧಿವಂತ' ಶ್ರೀಕಿಯ ಇತಿಹಾಸ
ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ಒತ್ತಾಯ
ಬಿಟ್ ಕಾಯಿನ್ ಹಗರಣದ ಸೂತ್ರಧಾರನೆನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಒತ್ತಾಯಿಸಿದ್ದಾರೆ.
ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಷಾಮೀಲಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಭದ್ರತೆ ಅಗತ್ಯವಾಗಿದೆ ಎಂದು ಸಿದ್ದರಾಮಯ್ಯ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಅದು ಈ ಕೆಳಗಿನಂತಿದೆ ನೋಡಿ.
ಬಿಟ್ ಕಾಯಿನ್ ಹಗರಣ ಸ್ಪೋಟಗೊಂಡ ನಂತರ ಸಣ್ಣ ಮಟ್ಟದ ಆರೋಪದ ಮೇಲೆ ನಾಟಕೀಯ ರೀತಿಯಲ್ಲಿ ನಡೆದಿರುವ ಶ್ರೀಕೃಷ್ಣನ ಬಂಧನ, ಅಷ್ಟೇ ನಾಟಕೀಯವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು, ಪೊಲೀಸರ ನಡವಳಿಕೆ ಸಂಶಯಗಳಿಗೆ ಕಾರಣವಾಗಿದೆ. ಕಳೆದ ವರ್ಷ ರಾಜ್ಯ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಶ್ರೀಕಿಗೆ ಮಾದಕ ವಸ್ತು ಚಟ ಇದ್ದುದನ್ನು ಹೇಳಲಾಗಿದೆ. ಆ ಸಮಯದಲ್ಲಿ ಶ್ರೀಕಿ ತಂದೆಯೇ ಪತ್ರ ಬರೆದು ತಮ್ಮ ಮಗನಿಗೆ ಪೊಲೀಸರು ಡ್ರಗ್ಸ್ ನೀಡಿದ್ದರು ಎಂದು ಆರೋಪಿಸಿದ್ದರು ಎನ್ನುವುದು ಗಮನಾರ್ಹ.
ಶ್ರೀಕಿ ಈಗಲೂ ಡ್ರಗ್ ವ್ಯಸನಿಯೇ? ವ್ಯಸನಿಯಾಗಿದ್ದರೆ ಪೊಲೀಸರು ಈ ಬಾರಿ ಬಂಧಿಸಿದಾಗ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆಯೇ? ಡ್ರಗ್ಸ್ ವ್ಯಸನಿ ಎನ್ನುವುದು ಪರೀಕ್ಷೆಯಿಂದ ದೃಡಪಟ್ಟಿದ್ದರೆ ಸೂಕ್ತ ಚಿಕಿತ್ಸೆ ನೀಡಲಾಗಿದೆಯೇ? ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ರಾಜ್ಯ ಗೃಹ ಸಚಿವರು ಮಾಹಿತಿ ನೀಡಬೇಕು. ಬಿಟ್ ಕಾಯಿನ್ ಹಗರಣ ತಂತ್ರಜ್ಞಾನ ಅವಲಂಬಿಸಿರುವ 'ಬಿಳಿಕಾಲರ್ ಅಪರಾಧ'. ಇದಕ್ಕೆ ಸಂಬಂಧಿಸಿದ ಖಾತೆಗಳ ಪಾಸ್ ವರ್ಡ್ ಸೇರಿದಂತೆ ಬಹಳಷ್ಟು ಮಾಹಿತಿಗಳು ಶ್ರೀಕಿಯ ನೆನಪಲ್ಲಿ ಮಾತ್ರ ಇದೆ, ಲಿಖಿತ ದಾಖಲೆಗಳಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕಿಯ ಪ್ರಾಣಕ್ಕೆ ಅಪಾಯದ ಸಾಧ್ಯತೆ ಇದೆ ಎಂದಿದ್ದಾರೆ.