ಒಂದೇ ಕುರ್ಚಿಗೆ ಇಬ್ಬರು ತಿಕ್ಕಾಟ: ಬಿಎಸ್‌ವೈಗೆ ಶುರುವಾಯ್ತು ಮತ್ತೊಂದು ಸಂಕಟ

By Suvarna NewsFirst Published Jan 27, 2020, 6:53 PM IST
Highlights

ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ 1 ವಿಧಾನಪರಿಷತ್ ಸ್ಥಾನಕ್ಕೆ ಉಪಚುನಾವಣೆ ದಿನ ನಿಗದಿಯಾಗಿದ್ದು, ಬಿಜೆಪಿಯಲ್ಲಿ ಇಬ್ಬರ ನಡುವೆ ಪೈಪೋಟಿ ಶುರುವಾಗಿದೆ. ಹಾಗಾದ್ರೆ ಯಾರ-ಯಾರ ನಡುವೆ ಪೈಪೋಟಿ ಶುರುವಾಗಿದೆ..? ಈ ಕೆಳಗಿನಂತಿದೆ ಡಿಟೇಲ್ಸ್

ಬೆಂಗಳೂರು,(ಜ. 27): ಸಂಪುಟ ವಿಸ್ತರಣೆ ಸಂಕಟದ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಒಂದೇ ಕುರ್ಚಿಗೆ ಇಬ್ಬರು ತಿಕ್ಕಾಟ ನಡೆಸಿದ್ದಾರೆ.

 ಉಪಚುನಾವಣೆಯಲ್ಲಿ ಕಾಂಗ್ರೆಸ್​ನ ರಿಜ್ವಾನ್ ಅರ್ಷದ್  ಗೆಲುವು ಸಾಧಿಸಿರುವುದರಿಂದ ಖಾಲಿಯಾದ ಒಂದು ಎಂಎಲ್‌ಸಿ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅದು ಬಿಜೆಪಿಗೆ ವರದಾನವಾಗಿದೆ.

ರಿಜ್ವಾನ್ ಅರ್ಷದ್‌ರಿಂದ ತೆರವಾದ MLC ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆ

ಈ ಒಂದು ಸ್ಥಾನಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಆರ್.ಶಂಕರ್ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಬಿಎಸ್‌ವೈಗೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ವಿಧಾನ ಪರಿಷತ್‌ ಸದಸ್ಯರಾಗಿದ್ದ ಕಾಂಗ್ರೆಸ್‌ ಪಕ್ಷದ ರಿಜ್ವಾನ್‌ ಅರ್ಷದ್‌ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆ ತೆರವಾಗಿರುವ ಮೇಲ್ಮನೆಯ ಒಂದು ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬುದು ಆಡಳಿತಾರೂಢ ಬಿಜೆಪಿಗೆ ಕಗ್ಗಂಟಾಗಿದೆ.

ಒಂದು ಕಡೆ ಸಂಪುಟ ವಿಸ್ತರಣೆ ಸಂಕಟ ಎದುರಾಗಿದ್ರೆ ಮತ್ತೊಂದೆಡೆ ಯಾರನ್ನು ಎಂಎಲ್‌ಸಿ ಮಾಡಬೇಕೆನ್ನುವುದು ಯಡಿಯೂರಪ್ಪಗೆ ದೊಡ್ಡ ತಲೆನೋವು ಶುರುವಾಗಿದೆ.

ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಗೆಲುವಿನೊಂದಿಗೆ ಸವದಿ ರಾಜಕೀಯ ಹಾದಿ ಸುಗಮ..?

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಆರ್‌. ಶಂಕರ್‌ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ಕೊಡಬೇಕೇ ಅಥವಾ ಯಾವುದೇ ಸದನದ ಸದಸ್ಯರಾಗದೇ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿಯನ್ನು ಆಯ್ಕೆ ಮಾಡಬೇಕೇ ಎನ್ನುವ ಇಕ್ಕಟ್ಟಿನಲ್ಲಿ ರಾಜ್ಯ ಬಿಜೆಪಿ ಇದೆ. 

ಒಂದು ಕಡೆ ಕೊಟ್ಟಮಾತಿನಂತೆ ತಮ್ಮನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವರನ್ನಾಗಿ ಮಾಡಬೇಕು ಎಂದು ಶಂಕರ್‌ ಅವರು ಪಟ್ಟು ಹಿಡಿದು ಕುಳಿತಿದ್ದಾರೆ. 

ಮತ್ತೊಂದೆಡೆ ಹೈಕಮಾಂಡ್‌ ಮೂಲಕ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅವರು 6 ತಿಂಗಳೊಳಗೆ ಅಂದರೆ ಫೆ.19ರೊಳಗೆ ಉಭಯ ಸದನಗಳ ಪೈಕಿ ಒಂದು ಸದನದ ಸದಸ್ಯತ್ವ ಹೊಂದದೇ ಇದ್ದಲ್ಲಿ ಸಚಿವ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಂತಹ ಇಕ್ಕಟ್ಟಿನಿಂದ ಪಾರಾಗಲು ಬಿಜೆಪಿ  ಲೆಕ್ಕಾಚಾರ ಹಾಕುತ್ತಿದೆ.

ಸವದಿ ಮೇಲೆ ಹೈಕಮಾಂಡ್‌ ಪ್ರೀತಿ
ಹೌದು...ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿರುವ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿದ್ದು ಇದೆ ಹೈಕಮಾಂಡ್‌. ಹಾಗಾಗಿ ಮೂಲಗಳ ಪ್ರಕಾರ ಸವದಿಯವರನ್ನು ವಿಧಾನಪರಿಷತ್ ಮಾಡಿ ಡಿಸಿಎಂ ಹುದ್ದೆಯಲ್ಲಿ ಮುಂದುವರಿಸಲು ಹೈಕಮಾಂಡ್‌ ನಿರ್ಧಿಸಿದೆ ಎಂದು ತಿಳಿದುಬಂದಿದೆ.

ಮಾತು ಉಳಿಸಿಕೊಳ್ತಾರಾ ಸಿಎಂ?
ಬಿಎಸ್‌ ಯಡಿಯೂರಪ್ಪ ಅವರು ಉಪಚುನಾವಣೆ ವೇಳೆ ಶಂಕರ್‌ಗೆ ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಅದರಂತೆ ಬಿಎಸ್‌ವೈ ಮೇಲೆ ನಬಿಕೆ ಇಟ್ಟು ಆರ್‌. ಶಂಕರ್ ಅವರು ರಾಣೇಬೆನ್ನೂರು ಉಪಚುನಾವಣೆ ಕಣದಿಂದ ಹಿಂದೆ ಸರಿದಿದ್ದು. ಇದೀಗ ಎಂಎಲ್‌ಸಿ ಎಲೆಕ್ಷನ್‌ಗೆ ದಿನಾಂಕ ನಿಗದಿಯಾಗಿದ್ದು, ಯಡಿಯೂರಪ್ಪ ಅವರು ಶಂಕರ್‌ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. 

ಒಟ್ಟಿನಲ್ಲಿ ಹೈಕಮಾಂಡ್‌ ದಾರಿ ತೋರದಿದ್ದರೆ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

click me!