ಬಿಜೆಪಿ, ಕಾಂಗ್ರೆಸ್‌ಗೆ ಬೆಂಗಳೂರು ದುಡ್ಡು ಮಾಡುವ ಎಟಿಎಂ: ಎಚ್‌.ಡಿ.ಕುಮಾರಸ್ವಾಮಿ ಕಿಡಿ

By Kannadaprabha NewsFirst Published Mar 22, 2023, 6:22 AM IST
Highlights

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬೆಂಗಳೂರು ನಗರ ದುಡ್ಡು ಮಾಡುವ ಎಟಿಎಂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು (ಮಾ.22): ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬೆಂಗಳೂರು ನಗರ ದುಡ್ಡು ಮಾಡುವ ಎಟಿಎಂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮಂಗಳವಾರ ಆರ್‌.ಟಿ.ನಗರದ ಮೈದಾನದಲ್ಲಿ ಆಯೋಜಿಸಿದ ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿದ ಅವರು, ಬೆಂಗಳೂರು ನಗರವು ಒಳ್ಳೆಯ ಆದಾಯ ತರುತ್ತಿದೆ. ಹೀಗಾಗಿ ಬೆಂಗಳೂರು ನಗರವನ್ನು ಕೊಳ್ಳೆ ಹೊಡೆಯಲು ಎಟಿಎಂ ಮಾಡಿಕೊಂಡಿದ್ದಾರೆ. ಪಾಪದ ದುಡ್ಡಿನಲ್ಲಿ ಮತದಾರರನ್ನು ಸೆಳೆಯಲು ಹಲವು ವಸ್ತುಗಳನ್ನು ನೀಡಿ ಅಮಿಷವೊಡ್ಡಲಾಗುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವು ಚುನಾವಣೆಯಲ್ಲಿ ಸೋಲು ಅನುಭವಿಸುತ್ತದೆ. ಈ ಬಾರಿ ಆಪರೇಷನ್‌ ಕಮಲ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಗೆ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವುದಿಲ್ಲ. ಬದಲಿಗೆ ಹಲಾಲ್‌ಕಟ್‌, ಜಟ್ಕಾ ಕಟ್‌ ಎಂದು ವಿಷಯಾಂತರ ಮಾಡುತ್ತದೆ. ಜನರು ಬಿಜೆಪಿಯ ಮಾತಿಗೆಲ್ಲಾ ಮರಳಾಗುವುದಿಲ್ಲ ಎಂದರು. ಇದಕ್ಕೂ ಮುನ್ನ ಸಂಜಯನಗರದ ರಾಧಾಕೃಷ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ರಥಯಾತ್ರೆ ಪ್ರಾರಂಭಿಸಲಾಯಿತು. ನಾಗಶೆಟ್ಟಿಹಳ್ಳಿ, ಭೂಪಸಂದ್ರ, ಹೆಬ್ಬಾಳ, ಕನಕನಗರ ಮೂಲಕ ಆರ್‌.ಟಿ.ನಗರ ತಲುಪಿತು. ಎಚ್‌ಎಂಟಿ ಮೈದಾನದಲ್ಲಿ ಬಹಿರಂಗ ಸಭೆ ನಡೆಯಿತು. ಹೆಬ್ಬಾಳ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಲ್ತಾಫ್‌ ಮೋಹಿತ್‌ ಯಾತ್ರೆಯಲ್ಲಿ ಭಾಗಿಯಾಗಿದ್ದರು.

ಕಾಂಗ್ರೆಸ್‌ ನಾಯಕನ ಪುಟ್ಗೋಸಿ ನೋಡಿಕೊಳ್ಳಲಿ: ಎಚ್‌.ಡಿ.ಕುಮಾರಸ್ವಾಮಿ

ಎಚ್‌ಡಿಕೆ ಗರಂ: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಿರುವುದನ್ನು ಕಂಡ ಎಚ್‌.ಡಿ.ಕುಮಾರಸ್ವಾಮಿ ಗರಂ ಆದ ಪ್ರಸಂಗ ನಡೆಯಿತು. ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸೈಯದ್‌ ಮೋಹಿದ್‌ ಅಲ್ತಾಫ್‌ ವಿರುದ್ಧ ಸಿಟ್ಟಾದರು. ಮಧ್ಯಾಹ್ನವೇ ಆರಂಭವಾಗಬೇಕಿದ್ದ ಯಾತ್ರೆ ಸಂಜೆ 6 ಗಂಟೆಯಾದರೂ ಜನ ಸೇರದ ಕಾರಣ ತಡವಾಗಿ ನಡೆಯಿತು. ಕ್ಷೇತ್ರದಲ್ಲಿ ಯಾವ ರೀತಿ ಪಕ್ಷ ಸಂಘಟನೆ ಮಾಡುತ್ತಿದ್ದೀರಿ. ಯಾತ್ರೆಯನ್ನು ಜನತೆಗೆ ತಲುಪಿಸುವಲ್ಲಿ ವಿಫಲವಾಗಿದ್ದೀರಿ ಎಂದು ಕಿಡಿಕಾರಿದರು.

ಜನರ ಜೀವನದ ಜೊತೆ ಬಿಜೆಪಿ ಚೆಲ್ಲಾಟ: ಕಾಲ್ಪನಿಕವೆನಿಸಿದ ಉರಿಗೌಡ ಮತ್ತು ನಂಜೇಗೌಡರ ಕತೆ ಕಟ್ಟಿಕೊಂಡು ಇರುತ್ತೀರಾ ಅಥವಾ ಹೊಲ ಊಳುವ ಬೋರೇಗೌಡನ ಕಷ್ಟವನ್ನೂ ನೋಡುತ್ತೀರಾ ಎಂದು ‘ಉರಿಗೌಡ ನಂಜೇಗೌಡ’ರ ಕುರಿತು ಸಿನಿಮಾ ಮಾಡಲು ಹೊರಟಿರುವ ಬಿಜೆಪಿಯವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಕ್ರೆಡಿಟ್‌ ತೆಗೆದುಕೊಳ್ಳೋದು ಎಚ್ಡಿಕೆಗೆ ಹೊಸತೇನಲ್ಲ: ಸಿ.ಪಿ.ಯೋಗೇಶ್ವರ್‌

ಮೇಲುಕೋಟೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಬಿಸಿ ಫಾರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಲಿಕಲ್ಲು ಮಳೆ ಬಿದ್ದು ಜನ ಸಾಯುತ್ತಿದ್ದಾರೆ. ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸರ್ಕಾರ ಕಾಲ್ಪನಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಇಂತಹ ಜನ ವಿರೋಧಿಗಳು ಅಧಿಕಾರದಲ್ಲಿರಲು ಯೋಗ್ಯರಲ್ಲ. ಆ ಸಿನಿಮಾ ಕಥೆ ಕೇವಲ ಕಾಲ್ಪನಿಕವಾದದ್ದು. ಇತಿಹಾಸದಲ್ಲೆಲ್ಲೂ ಅದು ನಡೆದಿಲ್ಲ. ಅಂದ ಮೇಲೆ ಆ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಈ ವಿಚಾರ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

click me!