Basavaraj Bommai: ಸಿಎಂ ಬದಲಾವಣೆಗೆ ಸ್ವಪಕ್ಷೀಯ ನಾಯಕರ ಹೇಳಿಕೆಗಳು ಪುಷ್ಟಿ

By Suvarna NewsFirst Published Dec 20, 2021, 11:22 PM IST
Highlights

* ಮತ್ತೆ ಮುನ್ನೆಲೆಗೆ ಬಂದ ಸಿಎಂ ಬದಲಾವಣೆ ವಿಷಯ
* ಕರ್ನಾಟಕದಲ್ಲಿ ಗರಿಗೆದರಿದ ನಾಯಕತ್ವ ಬದಲಾವಣೆ ಚರ್ಚೆ
* ಸಿಎಂ ಬದಲಾವಣೆಗೆ ಸ್ವಪಕ್ಷೀಯ ನಾಯಕರ ಹೇಳಿಕೆಗಳು ಪುಷ್ಟಿ
* ಕುರ್ಚಿ ಕಳೆದುಕೊಳ್ತಾರಾ ಬೊಮ್ಮಾಯಿ?

ಬೆಂಗಳೂರು, (ಡಿ.20): ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಮಾತನಾಡಿರುವ ಮಾತುಗಳ ಹಿಂದಿನ ಮರ್ಮ ಬೇರೆನೇ ಹೇಳುತ್ತಿದೆ. ಅಲ್ಲದೇ ಅವರ ಮಾತಿನಿಂದ ರಾಜ್ಯ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದೆ.

ಹೌದು... ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬೊಮ್ಮಾಯಿ ಕುರ್ಚಿ ಅಭದ್ರ ಎನ್ನುವ ವಾತಾವರಣ ಮತ್ತೆ ಸೃಷ್ಟಿಯಾಗಿದೆ. ಇದಕ್ಕೆ ಪೂಕರವೆಂಬಂತೆ ಅಧಿಕಾರ ಶಾಶ್ವತ ಅಲ್ಲ ಎಂದು ಬೊಮ್ಮಾಯಿ ಅವರು ಆಡಿರುವ ಮಾತುಗಳು.

Bommai emotional address ಅಧಿಕಾರ ಶಾಶ್ವತವಲ್ಲ: ತವರಲ್ಲಿ ಭಾವುಕರಾಗಿ ಸಿಎಂ ಸ್ಥಾನದಿಂದ ನಿರ್ಗಮನ ಸೂಚನೆ ನೀಡಿದ್ರಾ ಬೊಮ್ಮಾಯಿ?

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ ನಾಯಕತ್ವ ಬದಲಾವಣೆ ವಿಷಯ ಪದೇ ಪದೇ ಚರ್ಚೆಗೆ ಬರುತ್ತಿದೆ. ಯಡಿಯೂರಪ್ಪ ನಾಯಕತ್ವ ಬದಲಾವಣೆ ಕುರಿತು ಸತತವಾಗಿ ಚರ್ಚೆಗಳು ನಡೆದು ಕಡೆಗೆ 2 ವರ್ಷ ಅಧಿಕಾರ ಪೂರ್ಣಗೊಳಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದರು.ಇದೀಗ ಯಡಿಯೂರಪ್ಪ ಜಾಗಕ್ಕೆ ಬೊಮ್ಮಾಯಿ ಬಂದಿದ್ದರೂ ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಮಾತ್ರ ನಿಂತಿಲ್ಲ. ಬೊಮ್ಮಾಯಿ ಸ್ಥಾನವೂ ಭದ್ರವಿಲ್ಲ ಎನ್ನುವ ವದಂತಿ ನಿರಂತರವಾಗಿ ಹರಿದಾಡುತ್ತಲೇ ಇದೆ.

ಸ್ವಪಕ್ಷೀಯ ನಾಯಕರ ಹೇಳಿಕೆಗಳು ಪುಷ್ಟಿ

ಇನ್ನು  ಸ್ವಪಕ್ಷೀಯ ನಾಯಕರ ಹೇಳಿಕೆಗಳು, ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವುಕ ನುಡಿ, ಬಿ.ಎಲ್ ಸಂತೋಷ್ ಸ್ಪಷ್ಟೀಕರಣ ಸಿಎಂ ಬದಲಾವಣೆಗೆ ಪುಷ್ಟಿ ನೀಡುತ್ತಿದೆ.

ಸ್ವಪಕ್ಷೀಯರಿಂದಲೇ ನಾಯಕತ್ವ ಬದಲಾವಣೆ ಹೇಳಿಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಸ್ವಪಕ್ಷೀಯ ನಾಯಕರಿಂದಲೇ ಹೇಳಿಕೆಗಳು ಕೇಳಿಬರುತ್ತಿವೆ.  ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಮುರುಗೇಶ್ ನಿರಾಣಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ನಾಯಕತ್ವ ಬದಲಾವಣೆ ವದಂತಿಗೆ ತುಪ್ಪ ಸರಿದಿದ್ದಾರೆ.

 ಅಚ್ಚರಿ ಮೂಡಿಸಿದ ಸಂತೋಷ್ ಮಾತು

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ (ಡಿ 19) ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಆಡಿರುವ ಭಾವುಕ ಮಾತುಗಳಿಂದಾಗಿ ಸಾವರ್ಕರ್ ಪುಸ್ತಕ ಬಿಡುಗಡೆಯ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಮಾತುಗಳಿಗೆ ಹೊಸ ಅರ್ಥ ಬಂದಿದೆ. ನಗರದ ಪುರಭವನದಲ್ಲಿ ಶನಿವಾರ (ಡಿ 18) ನಡೆದ ವೀರ್ ಸಾವರ್ಕರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಬಿ.ಎಲ್.ಸಂತೋಷ್, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿಎಂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಚರ್ಚೆಯಾಗ್ತಿದೆ. ಕೆಲವು ಪತ್ರಕರ್ತರು ಸಹ ಹಾಗೆಯೇ ಭಾವಿಸಿರಬಹುದು. ಆದರೆ ವೀರ ಸಾವರ್ಕರ್ ಬಗ್ಗೆ ಸಿಎಂ ಮಾತುಗಳನ್ನು ಕೇಳಿದರೆ ಅದ್ಯಾವುದು ಇಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತದೆ ಎಂದಿದ್ದರು.

ಏಕಾಏಕಿ ಈ ವಿಚಾರ ಚರ್ಚೆಗೆ ಬಂದಿದ್ದು ಎಲ್ಲರಿಗೂ ಅಚ್ಚರಿಯುಂಟು ಮಾಡಿತ್ತು. ಈ ವಿಚಾರ ಪ್ರಸ್ತಾಪ ಮಾಡುವ ಯಾವುದೇ ಹಿನ್ನೆಲೆಯಲ್ಲಿ ಸಭೆಯಲ್ಲಿ ಇರಲಿಲ್ಲ. ಆದರೂ ಸಂತೋಷ್ ಅವರೇಕೆ ಈ ವಿಷಯ ಪ್ರಸ್ತಾಪಿಸಿದರು ಎಂಬ ಚರ್ಚೆಗಳು ಗರಿಗೆದರಿದ್ದವು. ಮುಖ್ಯಮಂತ್ರಿ ವಿಚಾರವನ್ನು ಅಷ್ಟಕ್ಕೇ ಬಿಟ್ಟ ಸಂತೋಷ್ ಬಳಿಕ ವೀರ ಸಾವರ್ಕರ್ ಬಗ್ಗೆ ಮಾತು ಮುಂದುವರಿಸಿದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗೆ ಬಂದಿರಬಹುದು ಎಂಬ ಅನುಮಾನವನ್ನೂ ಹಲವರು ವ್ಯಕ್ತಪಡಿಸಿದ್ದರು

ನಿರಾಣಿ ನಿಗೂಢ ಮಾತುಗಳು

ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸೋದು ಮಾತ್ರವಲ್ಲ ಅವರ ತಂದೆಯಂತೆಯೇ ಬೊಮ್ಮಾಯಿ ಅವರು ಸಹ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ. ಕೆಲವರು ಕರಿ ಬಾಯಿಯವರು ಏನೇನೋ ಹೇಳ್ತಾರೆ. ಬಸವರಾಜ ಅವರು ಪೂರ್ಣ ಅವಧಿಯವರೆಗೆ ಸಿಎಂ ಆಗಿರ್ತಾರೆ. ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸೋದು ಮಾತ್ರವಲ್ಲ ಅವರ ತಂದೆಯಂತೆಯೇ ಬಸವರಾಜ ಬೊಮ್ಮಾಯಿ ಕೇಂದ್ರದಲ್ಲಿ ಮಂತ್ರಿ ಆಗ್ತಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದರು.

ಕೇಂದ್ರ ಸಚಿವರು ಆಗುತ್ತಾರೆ ಅಂದ್ರೆ, ಸಿಎಂ ಸ್ಥಾನ ಬಿಟ್ಟುಕೊಡಬೇಕಲ್ಲವೇ. ನಿರಾಣಿ ಅವರ ಈ ಮಾತಿನ ಅರ್ಥ ಇದೆ ಆಗಿದೆ.

ಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ
ಇದಕ್ಕೆ ಇದೀಗ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರೆ.  ಈ ಬಗ್ಗೆ ಬಿಜೆಪಿ ನಾಯಕರೇ ಮಾತನಾಡುತ್ತಿದ್ದಾರೆ ಎಂದು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದರು.

ಬೊಮ್ಮಾಯಿ ಅವರು ಕೇಂದ್ರ ಮಂತ್ರಿ ಆಗ್ತಾರೆ ಎಂದು ಈಗಾಗಲೇ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಸಿಎಂ ಸ್ಥಾನದಿಂದ ಬೊಮ್ಮಾಯಿಗೆ ತೆಗೆದು ಕೇಂದ್ರ ಮಂತ್ರಿ ಮಾಡ್ತಾರೆ ಎಂದು ದರ್ಶನಾಪುರ ಹೇಳಿದರು.

ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಮತ್ತೆ ಮುನ್ನಲೆಗೆ ಬರುತ್ತಿದ್ದಂತೆ ಸಂಪುಟ ಸಹೋದ್ಯೋಗಿಗಳೆಲ್ಲಾ ಸಿಎಂ ಬೆಂಬಲಕ್ಕೆ ನಿಂತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಬೊಮ್ಮಾಯಿ ನಾಯಕತ್ವ ಬದಲಿಲ್ಲ, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ತೆರಳುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ನಂತರವೂ ನಾಯಕತ್ವ ಬದಲಾವಣೆ ವಿಷಯಕ್ಕೆ ತೆರೆ ಬಿದ್ದಿಲ್ಲ. ಹೊಸ ಮುಖ್ಯಮಂತ್ರಿ ಬಂದು 5 ತಿಂಗಳಲ್ಲೇ ನಾಯಕತ್ವ ಬದಲಾವಣೆ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

click me!