BJP Meeting: ಬಿಜೆಪಿ ಕಾರ್ಯಕಾರಣಿ ಸಭೆ ಮಾಹಿತಿ ಬಿಚ್ಚಿಟ್ಟ ಯತ್ನಾಳ್, ಬೊಮ್ಮಾಯಿ ಸೇಫ್...!

By Suvarna NewsFirst Published Dec 28, 2021, 8:04 PM IST
Highlights

* ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಣಿ ಮೊದಲ ದಿನದ ಸಭೆ ಅಂತ್ಯ
* ಮೊದಲ ದಿನದ ಸಭೆಯಲ್ಲಾದ ಚರ್ಚೆಗಳನ್ನ ಬಹಿರಂಗಪಡಿಸಿದ ಬಿಜೆಪಿ ಶಾಸಕ
* ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವ ಬದಲಾವಣೆ ಕೂಗಿಗೆ ಬ್ರೇಕ್

ಹುಬ್ಬಳ್ಳಿ, (ಡಿ.28): ಹುಬ್ಬಳ್ಳಿಯಲ್ಲಿ ಇಂದಿನಿಂದ(ಮಂಗಳವಾರ) ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ (Karnataka BJP Meeting) ಆರಂಭವಾಗಿದ್ದು, ಮೊದಲ ದಿನದ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. 

ಸಭೆಯಲ್ಲಿ ಯಾವೆಲ್ಲಾ ವಿಷಯಗಳ ಬಗ್ಗೆ ಚರ್ಚೆಯಾದವು ಎನ್ನುವುದನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

BJP Meeting: ಬುಡಕ್ಕೆ ಬರುತ್ತಿದಂತೆಯೇ ಎಸ್ಕೇಪ್ ಆದ್ರಾ ರಮೇಶ್ ಜಾರಕಿಹೊಳಿ?

ಮೊದಲ ದಿನದ ಕಾರ್ಯಕಾರಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಪಕ್ಷ ಸಂಘಟನೆ, ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ(Zilla, Taluk Panchayat Election) ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ(ಬಸವರಾಜ ಬೊಮ್ಮಾಯಿ) ಬದಲಾವಣೆ ಇಲ್ಲ ಎಂದು  ಈಗಾಗಲೇ ಬಹಳ ಸ್ಪಷ್ಟವಾಗಿ ಅರುಣ್ ಸಿಂಗ್ (Arun Singh)  ಹಾಗು ಪ್ರಹ್ಲಾದ ಜೋಶಿ ಕೂಡಾ ಹೇಳಿದ್ದಾರೆ. ಅಲ್ಲದೇ ಸಿಎಂ ವಿರುದ್ಧ ಮಾತಾಡಿದರೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳೊದಾಗಿ ಬಹಳ ಸ್ಪಷ್ಟವಾಗಿ ಕಾರ್ಯಕಾರಿಣಿ ಸಭೆಯಲ್ಲಿಯೇ  ಹೇಳಿದ್ದಾರೆ ಎಂದು ಬಹಿರಂಗಪಡಿಸಿದರು.

ಯಾರ್ಯಾರು ಏನೇನೋ ಕೊಟ್ಟು ಸಿಎಂ ಆಗಬೇಕು ಅಂತ ಇದ್ರು. ಆದರೆ ಪಾಪ ಅದು ಆಗಲಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಇಲ್ಲ ಎಂದು ಹೇಳಿದರು.

ಯಾರು ಅವರು ಸಿಎಂ ಆಗುವುದಕ್ಕೆ ಹೊರಟವರು ಎಂದು ಪತ್ರಕರ್ತರ ಪ್ರಶ್ನೆಗೆ,  ಮೊನ್ನೆ ವಿಧಾನಸೌಧ, ಸುವರ್ಣ ಸೌಧದಲ್ಲಿ ಓಡಾಡಿಕೊಂಡು ಇದ್ದವರು ಎಂದು ಹೆಸರು ಹೇಳಿದೆ ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿಗೆ ಟಾಂಗ್ ಕೊಟ್ಟರು. 

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆಗಿಲ್ಲ. ಯಡಿಯೂರಪ್ಪ ವೈಯಕ್ತಿಕ ಕೆಲಸಕ್ಕೆ ವಿದೇಶಕ್ಕೆ ಹೋಗಿದ್ದಾರೆ. ರಮೇಶ್ ಜಾರಕಿಹೊಳಿಯವರದು ಏನೋ ಬೇರೆ ಕೆಲಸ ಇರಬೇಕು ಅವರು ಬಂದಿಲ್ಲ ಎಂದು ತಿಳಿಸಿದರು.

ಮೊದಲ ಸಭೆಯಲ್ಲೇ ಖಡಕ್ ಸಂದೇಶ
ಯೆಸ್...ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕಾರಣಿ ಸಭೆಯ ಮೊದಲ ದಿನದಂದೇ ಪದೇ-ಪದೇ ಕೇಳಿಬರುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೇ ಈ ಬಗ್ಗೆ ಯಾರು ಬಹಿರಂಗ ಹೇಳಿಕೆ ನೀಡಬಾರದು ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ನಾಯಕರಿಗೆ ಸಭೆಯಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ. ಒಂದು ವೇಳೆ ಸಿಎಂ ವಿರುದ್ಧ ಮಾತಾಡಿದರೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳೊದಾಗಿ ಖಡಕ್ ಆಗಿ ಹೇಳಿದ್ದಾರೆ.

ಸಿಎಂ ಬದಲಾವಣೆಗೆ ಫುಲ್ ಸ್ಟಾಪ್?
ಹೌದು...ಕಳೆದೊಂದು ತಿಂಗಳಿನಿಂದ ಸಿಎಂ ಬದಲಾವಣೆ ಸುದ್ದಿ ಜೋರಾಗಿತ್ತು. ಈ ಬಗ್ಗೆ ಕೆಲ ಬಿಜೆಪಿ ನಾಯಕರೇ ಪರೋಕ್ಷ ಸುಳಿವು ಸಹ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಬದಲಾವಣೆ ಖಚಿತ ಎನ್ನಲಾಗಿತ್ತು. ಆದ್ರೆ, ಕಾರ್ಯಕಾರಣಿ ನಡೆದ ಮಾತುಕತೆಗಳನ್ನ ಗಮನಿಸಿದ್ರೆ, ಸಿಎಂ ಬದಲಾವಣೆ ಇಲ್ಲ. ಬದಲಾವಣೆಗೆ ಅರುಣ್ ಸಿಂಗ್ ಫುಲ್ ಸ್ಟಾಪ್ ಹಾಕಿದ್ದಾರೆ.

ಸಿಎಂಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಯಡಿಯೂರಪ್ಪನವರ ವಿಚಾರದಲ್ಲೂ ಅರುಣ್ ಸಿಂಗ್ ಇದೇ ಮಾತನ್ನು ಹೇಳಿತ್ತಾ ಬಂದಿದ್ದರು. ಆದ್ರೆ, ಕೊನೆಗೆ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯಲಾಯ್ತು. ಹಾಗಾಗಿ, ಬೊಮ್ಮಾಯಿ ಬದಲಾವಣೆ ಇಲ್ಲ ಎನ್ನುವ ಅರುಣ್ ಸಿಂಗ್ ಹೇಳಿಕೆ ಸುಳ್ಳಾದರೂ ಅಚ್ಚರಿಪಡಬೇಕಿಲ್ಲ. ಸೂಕ್ತ ಸಂದರ್ಭಗಳಲ್ಲಿ ದಿಢೀರ್ ಬದಲಾವಣೆ ಆದರೂ ಆಗಬಹುದು. ರಾಜಕೀಯದಲ್ಲಿ ಯಾವಾಗ ಏನು ಆಗುತ್ತೋ ಎನ್ನುವುದನ್ನು ಹೇಳುವುದಕ್ಕೆ ಆಗುದಿಲ್ಲ.

ಇನ್ನು ನಾಳೆ(ಬುಧವಾರ) ಸಹ ಬಿಜೆಪಿ ಕಾರ್ಯಕಾರಣೆ ಸಭೆ ನಡೆಯಲಿದ್ದು, ಎರಡನೇ ದಿನ ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ನಡೆಯುತ್ತಿವೆ ಎನ್ನುವುದು ಕುತೂಹಲ ಮೂಡಿಸಿದೆ. 

click me!