HDK ನಿಲುವು ಸಡಿಲು, ಸಿದ್ದರಾಮಯ್ಯ ಬಿಗಿಪಟ್ಟಿನಿಂದಾಗಿ ಆಡಿಯೋ ಕೇಸ್‌ SITಗೆ

By Ramesh BFirst Published Feb 14, 2019, 8:20 PM IST
Highlights

 ಆಡಿಯೋ ಸಿ.ಡಿ. ಪ್ರಕರಣವನ್ನು SIT ತನಿಖೆಗೆ ವಹಿಸಲು ಸಿಎಂ ಹಿಂಜರಿಯುತ್ತಿದ್ರೂ,  ಸಿದ್ದರಾಮಯ್ಯ ಏಕೆ SIT ತನಿಖೆಗೆ ಬಿಗಿಪಟ್ಟು ಹಿಡಿದಿದ್ದಾರೆ? ಇದರ ಹಿಂದಿನ ಗೇಮ್ ಪ್ಲಾನ್ ಏನು?  ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆಯೇ?  ಸಿಎಂ ಎಚ್‌ಡಿಕೆ ನಿಲುವು ಸಡಿಲಿಸಲು ಮುಂದಾದರೂ ಹಟ ಹಿಡಿದ ಸಿದ್ದರಾಮಯ್ಯ! ಸಿದ್ದು ಗೇಮ್ ಪ್ಲಾನ್ ಏನು..?

ಬೆಂಗಳೂರು, [ಫೆ.14]: ಆಪರೇಷನ್ ಕಮಲ ಕಾರ್ಯಾಚರಣೆಯ ಭಾಗವಾಗಿ ಜೆಡಿಎಸ್ ಶಾಸಕರನ್ನು ಸೆಳೆಯುವ ಸಂದರ್ಭದಲ್ಲಿ ಸಿಡಿದ ಆಡಿಯೋ ಸಿ.ಡಿ. ಪ್ರಕರಣವನ್ನು ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡಿದ್ದಾರೆ.

 ಆಡಿಯೋ ಸಿ.ಡಿ. ಪ್ರಕರಣವನ್ನು SIT ತನಿಖೆಗೆ ವಹಿಸಲು ಮೊದಲಿಗೆ ಸಿಎಂ ಕುಮಾರಸ್ವಾಮಿ ಮೊದಲಿಗೆ ಉತ್ಸುಕರಾಗಿದ್ದರು.  ಒಂದು ಹಂತದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಿಲುವನ್ನು ಸಡಿಲಿಸುವ ಇಂಗಿತ ವ್ಯಕ್ತಪಡಿಸಿದರೂ ಸಿದ್ದರಾಮಯ್ಯ ಮಾತ್ರ ಎಸ್‌ಐಟಿ ತನಿಖೆಯೇ ಆಗಬೇಕು ಎಂದು ಪಟ್ಟು ಹಿಡಿದರು. 

ಹೀಗಾಗಿ, ಸಂಧಾನ ಸಭೆ ವಿಫಲವಾಯಿತು ಎಂದು ಮೂಲಗಳು ತಿಳಿಸಿವೆ. ಸಿದ್ದು ಇದರ ಹಿಂದಿನ ಗೇಮ್ ಪ್ಲಾನ್ ಏನು?  ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆಯೇ? 

ಆಡಿಯೋ ಬಾಂಬ್: ಒಂದೇ ಕಲ್ಲಿನಿಂದ ಎರಡು ಹಕ್ಕಿ ಉರುಳಿಸಲು ಸಿದ್ದು ತಂತ್ರ?

ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆಯಲು ಹೊರಟಿದ್ದಾರೆಯೇ? ಹಾಗೆಂಬ ಶಂಕೆ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಕಾಡತೊಡಗಿದೆ.

ಒಂದು ವೇಳೆ ಎಸ್ ಐಟಿ ತನಿಖೆಯಾದರೆ ಈ ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿಯೂ ಸಹ ವಿಚಾರಣೆಗೆ ಒಳಪಡಬೇಕಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಅವರು ಬಿಜೆಪಿ ಜೊತೆಗೆ ಜೆಡಿಎಸ್ ಗೂ ಬುದ್ಧಿ ಕಲಿಸಲು ಮುಂದಾಗಿದ್ದಾರೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದ ಮೊಗಸಾಲೆಯಲ್ಲಿ ಹರಿದಾಡುತ್ತಿದೆ.

ಸಭೆಯಲ್ಲಿ ನಡೆದಿದ್ದೇನು..?

ಬುಧವಾರ ಬೆಳಗ್ಗೆ ಸ್ಪೀಕರ್‌ ಕೊಠಡಿಯಲ್ಲಿ ನಡೆದ ಸದನ ನಾಯಕರ ಸಭೆಯಲ್ಲಿ ಆಡಳಿತಾರೂಢ ಜೆಡಿಎಸ್‌-ಕಾಂಗ್ರೆಸ್‌ ಪರವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ, ಡಿ.ಕೆ.ಶಿವಕುಮಾರ್‌, ದಿನೇಶ್‌ ಗುಂಡೂರಾವ್‌ ಪಾಲ್ಗೊಂಡಿದ್ದರು. 

ಪ್ರತಿಪಕ್ಷ ಬಿಜೆಪಿಯಿಂದ ಅದರ ನಾಯಕ ಬಿ.ಎಸ್‌.ಯಡಿಯೂರಪ್ಪ, ಉಪನಾಯಕ ಗೋವಿಂದ ಕಾರಜೋಳ, ಸದಸ್ಯರಾದ ಕೆ.ಎಸ್‌.ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಆರ್‌.ಅಶೋಕ್‌ ಅವರು ಭಾಗವಹಿಸಿದ್ದರು.

‘ಆಡಿಯೋ ಬಾಂಬ್‌’ ಪ್ರಕರಣ: ಸದನ ನಾಯಕರ ಸಂಧಾನ ಸಭೆ ವಿಫಲ!

ಬಿಜೆಪಿ ಪರವಾಗಿ ಮಾಧುಸ್ವಾಮಿ ಅವರು ಪಕ್ಷದ ನಿಲುವನ್ನು ಸಭೆಗೆ ವಿವರಿಸಿದರು. ಎಸ್‌ಐಟಿ ತನಿಖೆ ನಡೆಸುವುದರ ಅಪಾಯವನ್ನು ವಿವರಿಸಿದರು. ಇದಕ್ಕೆ ಈಶ್ವರಪ್ಪ, ಕಾರಜೋಳ, ಬೊಮ್ಮಾಯಿ ಮತ್ತಿತರರು ದನಿಗೂಡಿಸಿದರು. 

ಈ ವಿವರಣೆಗೆ ಒಂದು ಹಂತದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ತಮ್ಮ ನಿಲುವಿನಿಂದ ಹಿಂದೆ ಸರಿಯುವ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದರು. ಸ್ಪೀಕರ್‌ ಕೂಡ ಸಂಧಾನ ಯಶಸ್ವಿಯಾಗಿ ಕಲಾಪ ಸುಗಮವಾಗಿ ನಡೆಯುವಂತಾಗಲಿ ಎಂಬಂತೆ ಮಾತನಾಡಿದರು. 

ಆದರೆ, ಸಿದ್ದರಾಮಯ್ಯ ಮಾತ್ರ ಯಾವುದೇ ಕಾರಣಕ್ಕೂ ಎಸ್‌ಐಟಿ ತನಿಖೆ ನಡೆಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ವಾದ ಮಂಡಿಸಿದರು. ಅದನ್ನು ಮುಖ್ಯಮಂತ್ರಿಗಳಿಗೂ ಸ್ಪಷ್ಚಪಡಿಸಿದರು ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಆಡಿಯೋ ಪ್ರಕರಣದ ತನಿಖೆಯನ್ನು ಎಸ್‌ಐಟಿಯೇ ನಡೆಸಬೇಕು ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಗಟ್ಟಿಯಾಗಿ ಅಂಟಿಕೊಳ್ಳಲು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಕಾರಣ ಎನ್ನಲಾಗಿದೆ.

click me!