
ವಿಜಯಪುರ (ನ.30) : ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಗುರುತಿನ ಚೀಟಿ ಪರಿಷ್ಕರಣೆ, ಡಿಲೀಟ್ ಪ್ರಕರಣದ ಕಾವು ಜೋರಾಗಿ ಇರುವಾಗ, ಗುಮ್ಮಟನಗರಿ ವಿಜಯಪುರದಲ್ಲೂ ಇದೇ ಮಾದರಿಯಲ್ಲಿ ಖಾಸಗಿ ವ್ಯಕ್ತಿಗಳಿಂದ ಐಡಿ ಪರಿಷ್ಕರಣೆ ಹಾಗೂ ಡಿಲಿಟ್ ನಡೆದಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಶಾಸಕ ಯತ್ನಾಳ್ ಒಡೆತನದ ಸಿದ್ಧಸಿರಿ ಸಂಸ್ಥೆಯ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಚಿಲುಮೆ ಸಂಸ್ಥೆ ಮಾದರಿಯ ಓಟರ್ ಐಡಿ ಪರಿಷ್ಕರಣೆ ಗೋಲ್ಮಾಲ್ ಗುಮ್ಮಟನಗರಿ ವಿಜಯಪುರಕ್ಕೂ ಹಬ್ಬಿದೆ. ನಗರದ ಶಾಸಕರು ತಮ್ಮ ಖಾಸಗಿ ಬ್ಯಾಂಕ್ ಸಿಬ್ಬಂದಿಯಿಂದ ಕೆಲವರ ಓಟರ್ ಐಡಿ ಡಿಲೀಟ್ ಮಾಡಿಸುತ್ತಿದ್ದಾರೆ ಎನ್ನುವ ಆರೋಪವನ್ನ ಸ್ವತಃ ಯತ್ನಾಳ್ ಎದುರಾಳಿ ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ಮಾಡಿದ್ದಾರೆ. ಖಾಸಗಿ ವ್ಯಕ್ತಿಯೊಬ್ಬ ಜನರ ಓಟರ್ ಐಡಿ ಪರಿಷ್ಕರಣೆಗೆಂದು ಬಂದು ಸಾರ್ವಜನಿಕರ ಕೈಗೆ ಸಿಕ್ಕಿಕೊಂಡಿದ್ದಾನೆ. ಈ ವೇಳೆ ಆತನನ್ನ ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಮುಖಂಡರ ಬಳಿ ಕರೆದೊಯ್ದಿದ್ದಾರೆ. ಅವನನ್ನು ವಿಚಾರಣೆ ಮಾಡಿದಾಗ ಆತ ನಗರದ ಸಿದ್ಧಸಿರಿ ಬ್ಯಾಂಕ್ ಸಿಬ್ಬಂದಿ ಎಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಒಂದು ವಿಡಿಯೋ ಮಾಡಲಾಗಿದೆ.
ಚಿಲುಮೆ ಸಂಸ್ಥೆಗೆ ಕಾರ್ಡ್ ಕೊಟ್ಟಿರುವುದು ನಿಜ ಎಂದ ಅಧಿಕಾರಿಗಳು
ಶಾಸಕರ ಯತ್ನಾಳರದ್ದು ಎನ್ನಲಾದ ಸಿದ್ಧಸಿರಿ ಬ್ಯಾಂಕಿನ ಸಿಬ್ಬಂದಿ ಓಟರ್ ಐಡಿ ಪರಿಷ್ಕರಣೆಗೆ ಹೋಗಿದ್ದಾನೆ. ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದಲ್ಲಿ ಕಾರ್ಡಗಳ ನಂಬರ್ ಪಡೆದು ಡೈರಿಯಲ್ಲಿ ದಾಖಲಿಸುತ್ತಿರುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆತನನ್ನ ಹಿಡಿದ ಕಾಂಗ್ರೆಸ್ ಕಾರ್ಯಕರ್ತರು ವಿಷಯವನ್ನ ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ಗಮನಕ್ಕೆ ತಂದಿದ್ದಾರೆ. ಬಳಿಕ ಖಾಸಗಿ ವ್ಯಕ್ತಿ ತನ್ನ ಹೆಸರು ಪೂಜಾರಿ ಹಾಗೂ ಸಿದ್ಧಸಿರಿ ಸಿಬ್ಬಂದಿ ಎಂದು ಹೇಳಿಕೊಂಡಿದ್ದಾನೆ. ಈ ವೇಳೆ ಆ ವ್ಯಕ್ತಿ ಸಿದ್ಧಸಿರಿಯ ಬೇರೆ ಸಿಬ್ಬಂದಿಗೆ ಕರೆ ಮಾಡಿ ಮಾತನಾಡಿಸಿದಾಗ ಆತ ನೀನು ಅಲ್ಲಿಂದ ಓಡಿ ಬರಬೇಕು ಎಂದು ಹೇಳಿದ್ದಾರೆ. ಇದನ್ನೆಲ್ಲ ಅಲ್ಲಿದ್ದವರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಮುಸ್ಲಿಂ ಮತಗಳನ್ನ ಡಿಲಿಟ್ ಮಾಡಿಸಲು ಯತ್ನ: ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಮಾಡಲು ಬಂದಿದ್ದ ಖಾಸಗಿ ವ್ಯಕ್ತಿ ಮುಸ್ಲಿಂ ಮತಗಳನ್ನ, ಎಸ್ಸಿ ಮತ್ತು ಎಸ್ಟಿ ಮತದಾರರ ಹೆಸರನ್ನು ಡಿಲಿಟ್ ಮಾಡಿಸಲು ಬಂದಿದ್ದ ಎನ್ನುವ ಗಂಭೀರ ಆರೋಪವನ್ನ ಹಮೀದ್ ಮುಶ್ರೀಫ್ ಮಾಡಿದ್ದಾರೆ. ಬೆಂಗಳೂರಿನ ಚಿಲುಮೆ ಸಂಸ್ಥೆ ಮಾಡಿದ ಕೆಲಸವನ್ನು ನಗರದ ಶಾಸಕರು ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಕಾಂಗ್ರೆಸದ ಕಚೇರಿಯ ಬಳಿ ಇರುವ ಮೂರು ಮನೆಗಳಿಗೆ ತೆರಳಿ ಯಾರಿಗೆ ಓಟ್ ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿ, ಅವರು ಕಾಂಗ್ರೆಸ್ ಎಂದು ಉತ್ತರಿಸಿದರೆ ಅಂಥವರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುತ್ತಿದ್ದರು ಎಂದು ಹಮೀದ್ ಆರೋಪಿಸಿದ್ದಾರೆ. ಇವರನ್ನು ಹಿಡಿಯಲು ಹೋದಾಗ ಇಬ್ಬರು ಓಡಿ ಹೋಗಿದ್ದು, ಓರ್ವ ಮಾತ್ರ ಸಿಕ್ಕಿ ಹಾಕಿಕೊಂಡಿದ್ದನು. ನಂತರ ನಗರ ಶಾಸಕ ಯತ್ನಾಳ್ ಅವರ ಸಹಾಯಕ ಸಿಬ್ಬಂದಿ (ಪಿಎ) ಪೋನ್ ಮಾಡಿ ಅವರನ್ನು ಹಿಡಿದುಕೊಂಡವರನ್ನು ಬಿಡುವಂತೆ ಮನವಿ ಮಾಡಿ ಬಿಡಿಸಿಕೊಂಡು ಹೋಗಿದ್ದಾರೆ. ಅವರ ಬಳಿ ಇದ್ದ ಓಟರ್ ಐಡಿಗಳನ್ನು ತಹಸೀಲ್ದಾರ್ ಗೆ ಒಪ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮತದಾರರ ಮಾಹಿತಿ ಕಳ್ಳತನದಲ್ಲಿ ಬಿಬಿಎಂಪಿ ಅಧಿಕಾರಿಗಳ ಪಾತ್ರವಿಲ್ಲ: ಮಾನಸಿಕ ಹಿಂಸೆ ನೀಡಬೇಡಿ
ಪಾಲಿಕೆ ಚುನಾವಣೆಯಲ್ಲೂ ಡಿಲೀಟ್: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹಮೀದ್ ಮುಶ್ರೀಪ್, ಈಗಾಗಲೇ ನಡೆದಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಮತದಾರರ ಹೆಸರನ್ನು ಡಿಲೀಟ್ ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಚುನಾವಣೆ ಆಯೋಗಕ್ಕೂ ದೂರು ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.