ಈಶ್ವರಾನಂದಪುರಿ ಶ್ರೀಗೆ ಅವಮಾನ ಕುರಿತು ಸಿಎಂ ತನಿಖೆಗೆ ಸೂಚಿಸಲಿ: ಈಶ್ವರಪ್ಪ ಆಗ್ರಹ

By Kannadaprabha NewsFirst Published Feb 4, 2024, 1:04 PM IST
Highlights

ಈಶ್ವರಾನಂದಪುರಿ ಸ್ವಾಮೀಜಿಗೆ ಅವಮಾನ ಆಗಿದ್ದರೆ ಅದು ಹಿಂದು ಸಮಾಜಕ್ಕೆ ಮಾಡಿದ ಅವಮಾನ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 

ಶಿವಮೊಗ್ಗ (ಫೆ.04): ಈಶ್ವರಾನಂದಪುರಿ ಸ್ವಾಮೀಜಿಗೆ ಅವಮಾನ ಆಗಿದ್ದರೆ ಅದು ಹಿಂದು ಸಮಾಜಕ್ಕೆ ಮಾಡಿದ ಅವಮಾನ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಾನಂದಪುರಿ ಸ್ವಾಮೀಜಿ ಅವರಿಗೆ ಚನ್ನಕೇಶವ ದೇವಾಲಯದ ಗರ್ಭಗುಡಿಯಲ್ಲಿ ಪೂಜೆ ಮಾಡಿ, ತೆರಳಿದ ನಂತರ ಅಲ್ಲಿನ ಅರ್ಚಕರು ಸ್ವಚ್ಛತೆ ಮಾಡಿದ್ದಾರೆ ಎಂದು ನೋವು ತೋಡಿಕೊಂಡಿರುವುದು ಗಮನಕ್ಕೆ ಬಂದಿದೆ. ಅರ್ಚಕರು ಈ ಬಗ್ಗೆ ಸ್ಪಷ್ಟನೆ ನೀಡಿ, ನಾವು ಈಶ್ವರಾನಂದಪುರಿ ಶ್ರೀಗಳಿಗೆ ಸಕಲ ಗೌರವ ನೀಡಿದ್ದೇವೆ. 

ಅವರು ಯಾಕೆ ಆ ರೀತಿ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿಯದು ಎಂದಿದ್ದಾರೆ. ಹಾಗಾದರೆ, ಎಲ್ಲಿ ಗೊಂದಲ ಆಯಿತು ಎಂಬುದು ಬಹಿರಂಗ ಆಗಬೇಕು ಎಂದರು. ಶ್ರೀಗಳು ಕನಕದಾಸರ ಅನುಯಾಯಿಗಳು ಆಗಿದ್ದು, ಮುಖ್ಯಮಂತ್ರಿ ಅವರು ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಬಯಲಿಗೆ ಎಳೆಯಬೇಕು. ಈ ಘಟನೆ ಸತ್ಯವಾಗಿದ್ದರೆ ಸಂಬಂಧಪಟ್ಟವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇದು ಸತ್ಯವಾಗಿಲ್ಲವೆಂದರೆ ಇದಕ್ಕೆ ಕಾರಣವಾದರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಶರಾವತಿ ವಿದ್ಯುತ್ ಉತ್ಪಾದನೆ ವಿಭಾಗದಲ್ಲಿ 8,500 ಕೋಟಿ ವೆಚ್ಚದಲ್ಲಿ ಪಂಪ್ ಸ್ಟೋರೇಜ್: ಸಚಿವ ಕೆ.ಜೆ.ಜಾರ್ಜ್

ಅಡ್ವಾಣಿಗೆ ಭಾರತ ರತ್ನ ಸಂತಸದಾಯಕ: ರಾಜಕೀಯ ಭೀಷ್ಮ, ಬಿಜೆಪಿ ಕಾರ್ಯಕರ್ತರನ್ನು ಸಂಘಟನೆಯಲ್ಲಿ ತೊಡಗಿಸಿ ರಾಮಮಂದಿರ ಹೋರಾಟಕ್ಕೆ ರಥಯಾತ್ರೆ ಮೂಲಕ ಇಡೀ ದೇಶವನ್ನು ಒಗ್ಗೂಡಿಸಿದ ಎಲ್.ಕೆ. ಅಡ್ವಾನಿ ಅವರಿಗೆ ಭಾರತ ರತ್ನ ದೊರೆತಿರುವುದು ಸಂತೋಷ ತಂದಿದೆ ಎಂದು ಈಶ್ವರಪ್ಪ ಹೇಳಿದರು. ನಾನು ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದಾಗ, ದೆಹಲಿಯಿಂದ ನನಗೆ ದೂರವಾಣಿ ಬರುತ್ತದೆ. ಎಲ್.ಕೆ.ಅಡ್ವಾನಿ ಮತ್ತು ಅಟಲ್‍ ಬಿಹಾರಿ ವಾಜಪೇಯಿ ಬೆಂಗಳೂರಿಗೆ ಬರುತ್ತಿದ್ದಾರೆ. ದಕ್ಷಿಣ ಭಾರತದ ಪದಾಧಿಕಾರಿಗಳಿಗೆ 3 ದಿನಗಳ ತರಬೇತಿ ಇದ್ದು, ಕೇವಲ 50 ಜನರಿಗೆ ಆ ಇಬ್ಬರು ಮಹಾನಾಯಕರು ದೇಶದ ಸಿದ್ಧಾಂತ, ಸಂಘಟನೆ ಮತ್ತು ಹೋರಾಟದ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಅದರಲ್ಲಿ ನಾನು ಒಬ್ಬ ಎಂಬುವುದು ನನ್ನ ಸೌಭಾಗ್ಯ. 

ಸಾಮಾನ್ಯರಲ್ಲಿ ಸಾಮಾನ್ಯರಾಗಿ ಪ್ರತಿಯೊಬ್ಬ ಕಾರ್ಯಕರ್ತನನ್ನು ಹೆಸರಿಡಿದು ಆತನನ್ನು ಗೌರವಿಸಿ, ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುವಂತೆ ಈ ಇಬ್ಬರು ಬಿಜೆಪಿ ನಾಯಕರು ಮಾರ್ಗದರ್ಶನ ಮಾಡುತ್ತಿದ್ದರು ಎಂದರು. ಸ್ಥಾನಮಾನ ಸಿಕ್ಕಿಲ್ಲ, ಟಿಕೆಟ್‌ ಸಿಕ್ಕಿಲ್ಲ ಎಂದು ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳನ್ನು ನಾವು ನೋಡುತ್ತೇವೆ. ಆದರೆ, ಬಿಜೆಪಿಯ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಮುಂಬೈನಲ್ಲಿ ಮುಂದಿನ ಪ್ರಧಾನಿ ಯಾರು ಎಂಬ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅಟಲ್‍ಜೀ ಹೆಸರು ಮತ್ತು ಅಡ್ವಾಣಿ ಹೆಸರು ಕೇಳಿಬರುತ್ತಿತ್ತು. ಅಂದಿನ ಸಭೆಯಲ್ಲಿ ಮೊದಲು ಮಾತನಾಡಿದ ಅಡ್ವಾಣಿ ಅವರು ಅಟಲ್‍ಜೀ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿಯೇ ಬಿಟ್ಟರು. ಅದು ಪ್ರತಿಯೊಬ್ಬ ಕಾರ್ಯಕರ್ತನ ಹೃದಯದಲ್ಲಿ ಅವರ ತ್ಯಾಗ ಮತ್ತು ಸ್ನೇಹ ಸಂಬಂಧ ಹಾಗೂ ಬಿಜೆಪಿಯ ನಾಯಕರ ಮನಸ್ಥಿತಿ ಮನಸ್ಸಿನಲ್ಲಿ ಬೇರೂರಿದೆ ಎಂದರು.

ಪ್ರತಿಯೊಬ್ಬರೂ ಹೃದಯ ಭಾಷೆಯಾಗಿ ಕನ್ನಡವನ್ನು ಆರಾಧಿಸಬೇಕು: ಸಚಿವ ಮಧು ಬಂಗಾರಪ್ಪ

ತುರ್ತು ಪರಿಸ್ಥಿತಿ ಸಂದರ್ಭ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ವಾಧಿಕಾರದಿಂದ ಭಾರತ್ ಮಾತಾ ಕೀ ಜೈ ಎಂದ ಎಲ್.ಕೆ.ಅಡ್ವಾಣಿ, ಅಟಲ್‍ಜೀ ಸೇರಿದಂತೆ ಎಲ್ಲ ಬಿಜೆಪಿ ಕಾರ್ಯಕರ್ತರನ್ನು ಜೈಲಿಗಟ್ಟಿದ್ದರು. ಆದರೆ, ಖರ್ಗೆ ಅವರು ಮೋದಿ ಸರ್ವಾಧಿಕಾರಿ ಎಂದು ಹೇಳಿದಾಗ ತುರ್ತು ಪರಿಸ್ಥಿತಿಯ ನೆನಪಾಯಿತು. ಖರ್ಗೆ ಅವರು ಇಂದಿರಾ ಗಾಂಧಿಯ ಸರ್ವಾಧಿಕಾರವನ್ನು ಒಮ್ಮೆ ನೆನಪಿಸಿಕೊಳ್ಳಲಿ
- ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ

click me!