ಆಟೋ ಚಾಲಕನ ಮನೆಗೆ ಊಟಕ್ಕೆ ಹೋಗುವಾಗ ತಡೆದ ಪೊಲೀಸ್‌, ಜನರ ಜೊತೆ ಇರಲು ಬಿಡಿ ಎಂದ ಕೇಜ್ರಿವಾಲ್‌

By Sharath Sharma KalagaruFirst Published Sep 13, 2022, 11:15 AM IST
Highlights

Arvind Kejriwal vs Gujarat Police: ಅರವಿಂದ್‌ ಕೇಜ್ರಿವಾಲ್‌ ಮತ್ತು ಗುಜರಾತ್‌ ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಆಟೋ ಚಾಲಕರೊಬ್ಬರ ಮನೆಗೆ ಊಟಕ್ಕೆಂದು ಆಟೋದಲ್ಲಿಯೇ ಹೊರಟ ಕೇಜ್ರಿವಾಲ್‌ರನ್ನು ಭದ್ರತೆಯ ಕಾರಣ ನೀಡಿ ಪೊಲೀಸರು ತಡೆಯಲು ಯತ್ನಿಸಿದ್ದಾರೆ.

ಅಹ್ಮದಾಬಾದ್‌: ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ (Aam Admi Party National Convenor) ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Delhi Chief Minister Arvind Kejriwal) ಮತ್ತು ಗುಜರಾತ್‌ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ. ಗುಜರಾತಿನ ಅಹ್ಮದಾಬಾದಿನಲ್ಲಿ ಆಟೋ ಚಾಲಕರೊಬ್ಬರ ಮನೆಗೆ ಊಟಕ್ಕೆ ಕೇಜ್ರಿವಾಲ್‌ ಹೋಗುತ್ತಿರುವ ವೇಳೆ ಈ ಘಟನೆ ನಡೆದಿದೆ. ಅರವಿಂದ್‌ ಕೇಜ್ರಿವಾಲ್‌ ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಹಿನ್ನೆಲೆ, ಪೊಲೀಸರು ಸುರಕ್ಷತೆಯ ದೃಷ್ಟಿಯಿಂದ ನೀವು ಆಟೋದಲ್ಲಿ ಹೋಗುವಂತಿಲ್ಲ, ನಿಮ್ಮ ಭದ್ರತೆ ನಮ್ಮ ಜವಾಬ್ದಾರಿಯಾಗಿದೆ ಎಂದಿದ್ದಾರೆ. ಆದರೆ ಕೇಜ್ರಿವಾಲ್‌ ನನಗೆ ಯಾವ ಭದ್ರತೆಯ ಅಗತ್ಯವೂ ಇಲ್ಲ ಎಂದಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಪೊಲೀಸರು ಇದು ಪ್ರೋಟೊಕಾಲ್‌ ಆಗಿದ್ದು, ನಮ್ಮ ಕೆಲಸ ನಮಗೆ ಮಾಡಲು ಬಿಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸಿಟ್ಟಾದ ಕೇಜ್ರಿವಾಲ್‌ ಲಿಖಿತ ರೂಪದಲ್ಲಿ ನನಗೆ ಭದ್ರತೆಯ ಅವಶ್ಯಕತೆಯಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಆದರೆ ಪೊಲೀಸರು ಆಟೋದಲ್ಲಿ ಕೇಜ್ರಿವಾಲ್‌ ಹೋಗಲು ಅನುವುಮಾಡಿಕೊಡಲು ಸುತಾರಾಂ ಒಪ್ಪಲು ಸಿದ್ಧರಿರಲಿಲ್ಲ. 

ಆಟೋ ಚಾಲಕರೊಬ್ಬರು ಅರವಿಂದ್‌ ಕೇಜ್ರಿವಾಲ್‌ ಅವರನ್ನು ತಮ್ಮ ಮನೆಗೆ ರಾತ್ರಿ ಊಟಕ್ಕೆ ಆಹ್ವಾನಿಸಿದ್ದರು. ಆಮಂತ್ರಣವನ್ನು ಕೇಜ್ರಿವಾಲ್‌ ಒಪ್ಪಿಕೊಂಡಿದ್ದರು. ಸಂಜೆ 7.30 ಕ್ಕೆ ಕಾರ್ಯಕ್ರಮ ಮುಗಿಸಿಕೊಂಡು ಊಟಕ್ಕೆಂದು ಕೇಜ್ರಿವಾಲ್‌ ಆಟೋ ಹತ್ತಿದ್ದಾರೆ. ನಂತರ ಪೊಲೀಸರು ಮತ್ತು ಕೇಜ್ರಿವಾಲ್‌ ನಡುವೆ ಭದ್ರತೆ ಕುರಿತಾದ ಮಾತುಕತೆ ನಡೆದಿದೆ. ನಂತರ ಕೇಜ್ರಿವಾಲ್‌ ಒಪ್ಪದಿದ್ದಾಗ, ಆಟೋ ಚಾಲಕನ ಪಕ್ಕ ಒಬ್ಬ ಪೊಲೀಸ್‌ ಸಿಬ್ಬಂದಿ ಮತ್ತು ಆಟೋ ಹಿಂದೆ ಮತ್ತು ಮುಂದೆ ಪೊಲೀಸ್‌ ವಾಹನ ಎಸ್ಕಾರ್ಟ್‌ ಮಾಡಿದೆ. 

ಇದನ್ನೂ ಓದಿ: ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದ್ರೆ ಪ್ರತಿ ಮಹಿಳೆಗೆ ತಿಂಗಳಿಗೆ 1,000 ರುಪಾಯಿ ಮಾಸಿಕ ಭತ್ಯೆ: ಕೇಜ್ರಿವಾಲ್‌ ಭರವಸೆ

ಅರವಿಂದ್‌ ಕೇಜ್ರಿವಾಲ್‌ ಎರಡು ದಿನದ ಗುಜರಾತ್‌ ಪ್ರವಾಸದಲ್ಲಿದ್ದಾ. ಸೋಮವಾರ ಮಧ್ಯಾಹ್ನ ಆಟೋ ಚಾಲಕರ ಸಮಾವೇಶ ಏರ್ಪಡಿಸಲಾಗಿತ್ತು. ಆಟೋ ಚಾಲಕರನ್ನುದ್ದೇಶಿಸಿ ಕೇಜ್ರಿವಾಲ್‌ ಮಾತನಾಡಿದರು. ಅದಾದ ನಂತರ ಆಟೋ ಚಾಲಕರ ಆಮಂತ್ರಣ ಒಪ್ಪಿಕೊಂಡು ಊಟಕ್ಕೆ ಹೊರಟರು. ಅಹ್ಮದಾಬಾದ್‌ನ ಆಟೋ ಚಾಲಕ ವಿಕ್ರಮ್‌ ದಂತಾನಿ ಎಂಬುವವರ ಮನೆಯಲ್ಲಿ ಊಟ ಸವಿದರು. ಅಹ್ಮದಾಬಾದಿನ ಘಾಟ್ಲೊಯ್ಡಾ ಏರಿಯಾದಲ್ಲಿ ವಿಕ್ರಮ್‌ ದಂತಾನಿ ಅವರ ಮನೆಯಿದೆ. 
ಸಮಾವೇಶದಲ್ಲಿ ಪ್ರಶ್ನೋತ್ತರ ಸಮಯದ ವೇಳೆ ವಿಕ್ರಮ್‌ ದಂತಾನಿ ಮಾತನಾಡಿದರು. "ನಾನು ನಿಮ್ಮ ಅಭಿಮಾನಿ. ನಿಮ್ಮ ಒಂದು ವಿಡಿಯೋವನ್ನು ನಾನು ನೋಡಿದ್ದೇನೆ. ಪಂಜಾಬಿನಲ್ಲಿ ಆಟೋ ಚಾಲಕರ ಮನೆಯಲ್ಲಿ ನೀವು ಊಟ ಮಾಡಿದ್ದೀರಿ. ನನ್ನ ಮನೆಗೂ ಬಂದು ನೀವು ಊಟ ಮಾಡುತ್ತೀರಾ," ಎಂದು ವಿಕ್ರಮ್‌ ದಂತಾನಿ ಪ್ರಶ್ನಿಸಿದ್ದಾರೆ.

 

Delhi CM accepts a Dinner Invitation from an Autorickshaw Driver of Gujarat ❤️ pic.twitter.com/0lf5kS5rkn

— AAP (@AamAadmiParty)

ಇದಕ್ಕೆ ಉತ್ತರಿಸಿದ ಕೇಜ್ರಿವಾಲ್‌ "ಪಂಜಾಬ್‌ ಮತ್ತು ಗುಜರಾತಿನ ಆಟೋ ಚಾಲಕರು ನನ್ನನ್ನು ಪ್ರೀತಿಸುತ್ತಾರೆ. ನಾನು ಇಂದು ಸಂಜೆ 8 ಗಂಟೆಗೆ ನಿಮ್ಮ ಮನೆಗೆ ಊಟಕ್ಕೆ ಬರಲಾ," ಎಂದು ಕೇಜ್ರಿವಾಲ್‌ ಕೇಳಿದ್ದಾರೆ. ಅದಕ್ಕೆ ಖುಷಿಯಿಂದ ವಿಕ್ರಮ್‌ ದಂತಾನಿ ಒಪ್ಪಿಕೊಂಡಿದ್ದಾರೆ. 

ಇದನ್ನೂ ಓದಿ: ಪಂಜಾಬ್‌ನಲ್ಲಿ ಆಪ್ ಕ್ಲೀನ್ ಸ್ವೀಪ್: ವಿಜಯೋತ್ಸವದಲ್ಲಿ ಕೇಜ್ರಿ ಆಡಿದ ಮಾತಿನ ಸತ್ಯಾಸತ್ಯತೆ ಏನು?

ಕೇಜ್ರಿವಾಲ್‌ ಈ ರೀತಿಯ ವರ್ತನೆಯಿಂದಲೇ ಜನಸಾಮಾನ್ಯರ ನಡುವೆ ಗುರುತಿಸಿಕೊಳ್ಳುತ್ತಾರೆ ಮತ್ತು ಗೌರವಿಸಲ್ಪಡುತ್ತಾರೆ. ಈ ಹಿಂದೆ ಪಂಜಾಬಿನಲ್ಲಿ ಆಟೋ ಚಾಲಕರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದರು. ಈ ವಿಡಿಯೋ ಕೂಡ ವ್ಯಾಪಕವಾಗಿ ವೈರಲ್‌ ಆಗಿತ್ತು. ಆಮ್‌ ಆದ್ಮಿ ಪಕ್ಷಕ್ಕೆ ಜನರ ನಾಡಿಮಿಡಿತ ಗೊತ್ತಿದೆ, ಜನಸಾಮಾನ್ಯರ ಜೊತೆ ಬೆರೆಯುವುದರಿಂದಲೇ ಅವರು ಅಧಿಕಾರಕ್ಕೇರುತ್ತಿದ್ದಾರೆ ಎಂದು ಸಾರ್ವಜನಿಕ ಅಭಿಪ್ರಾಯವೂ ಸೃಷ್ಟಿಯಾಗಿದೆ.

click me!