
ಅಮರಾವತಿ (ಮೇ.1): ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಗಳು ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿವೆ.
ಪ್ರಣಾಳಿಕೆಯಲ್ಲಿ ಕರ್ನಾಟಕ ಮಾದರಿಯಲ್ಲಿ ಭರ್ಜರಿ ಉಚಿತ ಕೊಡುಗೆಗಳನ್ನು ಪ್ರಕಟಿಸಲಾಗಿದ್ದು, ಎಲ್ಲ ವಯೋಮಾನದವರಿಗೂ ಒಂದಿಲ್ಲೊಂದು ರೀತಿಯಲ್ಲಿ ಆರ್ಥಿಕ ಸಹಾಯವನ್ನು ಪ್ರಕಟಿಸಲಾಗಿದೆ. ಪ್ರಮುಖವಾಗಿ ತಲ್ಲಿಕಿ ವಂಡನಮ್ ಯೋಜನೆಯಲ್ಲಿ ದಾಖಲಾದ ಶಾಲಾ ಮಕ್ಕಳಿಗೆ ವಾರ್ಷಿಕ 15 ಸಾವಿರ ರು., ಉದ್ಯೋಗ ಸಿಗುವವರೆಗೆ ನಿರುದ್ಯೋಗಿ ಭತ್ಯೆಯಾಗಿ ಮಾಸಿಕ 3 ಸಾವಿರ ರು., ರೈತರಿಗೆ ವಾರ್ಷಿಕ 20 ಸಾವಿರ ರು., 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಮಾಸಿಕ 1,500 ರು. ಹಾಗೂ ಮೀನುಗಾರರಿಗೆ ತಮ್ಮ ವಿರಾಮದ ಅವಧಿಯಲ್ಲಿ 20 ಸಾವಿರ ರು., ಆರ್ಥಿಕ ಸಹಾಯ ನೀಡುವುದಾಗಿ ಘೋಷಿಸಿದೆ.
ಕಾಂಗ್ರೆಸ್ ಗೆಲ್ಲಲು ಹಿಂದೂಗಳ ಮತ ಬೇಡವೆಂದ ಕೈ ನಾಯಕ, ಆಂಧ್ರದಲ್ಲಿ ಹಜ್ ಯಾತ್ರಿಕರಿಗೆ 1 ಲಕ್ಷದ ಭರವಸೆ
ಇಷ್ಟೇ ಅಲ್ಲದೆ ಮಹಿಳೆಯರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ, ಪ್ರತಿ ಮನೆಗೆ ವಾರ್ಷಿಕ 3 ಅಡುಗೆ ಅನಿಲ ಉಚಿತ, ನೀರು ಸಂಪರ್ಕದ ಉಚಿತ ಅಳವಡಿಕೆ ಹಾಗೂ ಎಲ್ಲ ಮನೆಗಳಿಗೂ ಉಚಿತ ಕುಡಿಯುವ ನೀರಿನ ಜೊತೆಗೆ ಬಡ ಕುಟುಂಬಗಳಿಗೆ 900 ಚದರ ಅಡಿ ಉಚಿತ ಭೂಮಿ, ಹಾಗೂ ಮರಳನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ. ಹಾಗೆಯೇ ಉಳುವವರು ಹಾಗೂ ವಾಸಿಸುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಹಿಂಪಡೆಯುವುದಾಗಿ ತಿಳಿಸಿದೆ.
ಆಂಧ್ರದಲ್ಲಿ ಮೋದಿ, ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಮೈತ್ರಿಯಿಂದ ಮ್ಯಾಜಿಕ್ ನಿರೀಕ್ಷೆ
ಹಾಗೆಯೇ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 20 ಲಕ್ಷ ಉದ್ಯೋಗಾವಕಾಶ ಸೃಷ್ಟಿಸಲಾಗುವುದು. ದೋಣಿ ರಿಪೇರಿಗೆ ಸಹಾಯಧನ ನೀಡಲಾಗುವುದು. ಹಾಗೆಯೇ ಸಣ್ಣ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು ಜೊತೆಗೆ ಹಿಂದುಳಿದ ಜಾತಿಗಳ ರಕ್ಷಣೆಗೆ ವಿಶೇಷ ಕಾಯ್ದೆ ಜಾರಿಗೆ ತರಲಾಗುವುದು ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.