ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿರುವ ಗುತ್ತಿಗೆಯಲ್ಲಿನ ಶೇ.4ರಷ್ಟು ಮುಸ್ಲಿಂ ಮೀಸಲನ್ನು ‘ಲಾಲಿಪಾಪ್’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ ಹಾಗೂ ‘ಮೀಸಲು ಕೋರ್ಟಲ್ಲೇ ರದ್ದಾಗುತ್ತದೆ’ ಎಂದಿದ್ದಾರೆ.
ನವದೆಹಲಿ (ಮಾ.30): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿರುವ ಗುತ್ತಿಗೆಯಲ್ಲಿನ ಶೇ.4ರಷ್ಟು ಮುಸ್ಲಿಂ ಮೀಸಲನ್ನು ‘ಲಾಲಿಪಾಪ್’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ ಹಾಗೂ ‘ಮೀಸಲು ಕೋರ್ಟಲ್ಲೇ ರದ್ದಾಗುತ್ತದೆ’ ಎಂದಿದ್ದಾರೆ. ‘ಟೈಮ್ಸ್ ನೌ ಶೃಂಗಸಭೆ-2025’ ಸಂವಾದದಲ್ಲಿ ಮಾತನಾಡಿದ ಶಾ, ‘ಧರ್ಮದ ಆಧಾರದ ಮೇಲೆ ಯಾವುದೇ ಮೀಸಲಾತಿ ಸಂವಿಧಾನದ ಉಲ್ಲಂಘನೆಯಾಗಿದೆ. ಧರ್ಮದ ಆಧಾರದ ಮೇಲೆ ಯಾವುದೇ ಕೋಟಾವನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಮತ್ತು ನ್ಯಾಯಾಲಯಗಳು ಅದನ್ನು ರದ್ದುಪಡಿಸುತ್ತವೆ’ ಎಂದು ಹೇಳಿದರು.
‘ಮತಬ್ಯಾಂಕ್ ರಾಜಕೀಯಕ್ಕಾಗಿ, ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಗುತ್ತಿಗೆ ಮೀಸಲು ನೀಡಲು ಬಯಸುತ್ತದೆ, ಆದರೆ ಗುತ್ತಿಗೆಗಳನ್ನು ಗುಣಮಟ್ಟ ಮತ್ತು ಮೌಲ್ಯದ ಆಧಾರದ ಮೇಲೆ ನೀಡಬೇಕು, ಧರ್ಮದ ಆಧಾರದ ಮೇಲೆ ಅಲ್ಲ’ ಎಂದು ಶಾ ಹೇಳಿದರು. ಜಾತಿ ಜನಗಣತಿಗೆ ಕಾಂಗ್ರೆಸ್ ಬೇಡಿಕೆಯ ಕುರಿತು ಮಾತನಾಡಿದ ಗೃಹ ಸಚಿವರು, ‘ವಿರೋಧ ಪಕ್ಷವೇ ಹಿಂದೆ ಇಂತಹ ಪ್ರಕ್ರಿಯೆಯನ್ನು ವಿರೋಧಿಸಿತ್ತು. 2011ರಲ್ಲಿ ಅವರು (ಕಾಂಗ್ರೆಸ್) ಜಾತಿಗಳ ಬಗ್ಗೆ ಸಮೀಕ್ಷೆ ನಡೆಸಿದ್ದರು ಆದರೆ ಅದರ ಫಲಿತಾಂಶವನ್ನು ಘೋಷಿಸಲಿಲ್ಲ. ಈಗ ನಾವು ಜಾತಿ ಗಣತಿಗಾಗಿ ಏನು ಮಾಡಬೇಕು ಎಂದು ಆಂತರಿಕ ಪ್ರಕ್ರಿಯೆ ನಡೆಸುತ್ತಿದ್ದೇವೆ. ಒಮ್ಮೆ ಅಂತಿಮ ಆಯಿತು ಎಂದರೆ ಮುನ್ನಡೆಯುತ್ತೇವೆ’ ಎಂದರು.
30 ವರ್ಷ ಬಿಜೆಪಿ ಅಧಿಕಾರದಲ್ಲಿ: ಬಿಜೆಪಿ ತನ್ನ ಸ್ಥಿರ ಪ್ರದರ್ಶನದಿಂದಾಗಿ ಕನಿಷ್ಠ 30 ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ರಾತ್ರಿ ಟೈಮ್ಸ್ ನೌ ಶೃಂಗಸಭೆ 2025ರಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷದ ಗೆಲುವು ಅದರ ನಿರಂತರ ಪರಿಶ್ರಮ ಆಧರಿಸಿರುತ್ತದೆ ಹಾಗೂ ನೀವು ನಿಮಗಾಗಿ ಜೀವಿಸದೆ, ದೇಶಕ್ಕಾಗಿ ಬದುಕಿದಾಗ ಗೆಲುವು ನಿಮ್ಮದಾಗಿರುತ್ತದೆ’ ಎಂದರು.
ಸೂಜಿ ಚುಚ್ಚದೆ ಶುಗರ್ ಟೆಸ್ಟ್: ಫೋಟೋ ಅಕೂಸ್ಟಿಕ್ಸ್ ಸೆನ್ಸಿಂಗ್ ಮೂಲಕ ಸಕ್ಕರೆ ಪ್ರಮಾಣ ಪರೀಕ್ಷೆ
‘ನಾನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗ, ಮುಂದಿನ 30 ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಹೇಳಿದ್ದೆ. ಈಗ ಕೇವಲ 10 ವರ್ಷಗಳು ಕಳೆದಿವೆ. ಇನ್ನೂ 20 ವರ್ಷ ಬಾಕಿ ಇದೆ’ ಎಂದು ಅವರು ಮಾರ್ಮಿಕವಾಗಿ ನುಡಿದರು. ‘ಆರ್ಎಸ್ಎಸ್ ಕಳೆದ 100 ವರ್ಷಗಳಿಂದ ದೇಶಭಕ್ತರನ್ನು ಸಿದ್ಧಪಡಿಸುತ್ತಿದೆ. ಹಲವು ಆಯಾಮಗಳನ್ನು ನಮ್ಮ ಮುಂದೆ ಇದ್ದರೂ ದೇಶಭಕ್ತಿಯನ್ನು ಹೇಗೆ ಪ್ರಧಾನ ಗುರಿಯನ್ನಾಗಿ ಇರಿಸಿಕೊಳ್ಳಬೇಕು ಎಂಬುದನ್ನು ನಾನು ಆರ್ಎಸ್ಎಸ್ನಿಂದ ಕಲಿತಿದ್ದೇನೆ. ಸರ್ಕಾರದಲ್ಲಿ ಆರೆಸ್ಸೆಸ್ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದರು.