ಸಂಪುಟ ವಿಸ್ತರಣೆಗೆ ಮತ್ತೆ ಸಮಯ ನೀಡ್ತೇನೆಂದ ಅಮಿತ್‌ ಶಾ!

By Govindaraj SFirst Published Dec 15, 2022, 7:04 AM IST
Highlights

ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ವರಿಷ್ಠರು ಆಸಕ್ತಿ ತೋರಿದಂತಿಲ್ಲ. ಅಮಿತ್‌ ಶಾ ಭೇಟಿ ವೇಳೆ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಯಿತಾದರೂ ಈ ಸಂಬಂಧ ಮತ್ತೆ ಕರೆಯುವುದಾಗಿ ಹೇಳಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ನವದೆಹಲಿ (ಡಿ.15): ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ವರಿಷ್ಠರು ಆಸಕ್ತಿ ತೋರಿದಂತಿಲ್ಲ. ಅಮಿತ್‌ ಶಾ ಭೇಟಿ ವೇಳೆ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಯಿತಾದರೂ ಈ ಸಂಬಂಧ ಮತ್ತೆ ಕರೆಯುವುದಾಗಿ ಹೇಳಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗಡಿ ಸಭೆ ಮತ್ತು ರಾಜ್ಯ ರಾಜಕೀಯದ ಚರ್ಚೆಗಳ ಬಳಿಕ ಅಮಿತ್‌ ಶಾ ಅವರ ಜತೆಗೆ ಬೊಮ್ಮಾಯಿ ಅವರು ಐದು ನಿಮಿಷ ಪ್ರತ್ಯೇಕವಾಗಿ ಮಾತನಾಡಿದ್ದು, ಈ ವೇಳೆ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗಿದೆ ಎನ್ನಲಾಗಿದೆ.

ಚುನಾವಣೆ ಬಗ್ಗೆ ಚರ್ಚೆ: ರಾಜ್ಯದ ಪಕ್ಷದ ಸಂಘಟನೆ ಮತ್ತು ಪ್ರಧಾನಿ ಮೋದಿ ಭೇಟಿ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜತೆಗೆ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಮುಖಂಡರು ಸಭೆ ನಡೆಸಿದ್ದು, ಈ ವೇಳೆ ಜ.12ಕ್ಕೆ ಯುವಶಕ್ತಿ ಸಮಾವೇಶಕ್ಕೆ ಮೋದಿಯವರಿಗೆ ಆಹ್ವಾನ ನೀಡುವ ಕುರಿತು ಚರ್ಚೆ ನಡೆಸಲಾಗಿದೆ. ಶಾ ಅವರ ಜತೆಗಿನ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಪ್ರಧಾನಿ ಮೋದಿ ರಾಜ್ಯ ಭೇಟಿ ಮತ್ತು ಮುಂಬರುವ ಚುನಾವಣೆ ದೃಷ್ಟಿಯಿಂದ ರಾಜ್ಯದಲ್ಲಿ ಕೈಗೊಳ್ಳಬೇಕಿರುವ ರಾರ‍ಯಲಿಗಳು, ರೋಡ್‌ ಶೋ ಬಗ್ಗೆ ವಿಸ್ತೃತ ಚರ್ಚೆ ಆಗಿದೆ. ಜತೆಗೆ ರಾಜ್ಯಕ್ಕೆ ಬಿಜೆಪಿ ವರಿಷ್ಠರು ಹೆಚ್ಚಿನ ಸಮಯ ನೀಡುವ ಕುರಿತು ಮನವಿ ಮಾಡಲಾಗಿದೆ ಎಂದರು.

ಬೆಳಗಾವಿ ಗಡಿ ವಿವಾದ ಸಭೆ ಬಳಿಕ ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ ಮತ್ತೊಂದು ಸುತ್ತಿನ ಮಾತುಕತೆ!

ಅಮಿತ್‌ ಶಾ ಜತೆಗೆ ರಾಜ್ಯ ಚುನಾವಣೆ ಕುರಿತು ಚರ್ಚೆ: ಇದೇ ವೇಳೆ, ಬಿಜೆಪಿ ನಡೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ. ಬಿಜೆಪಿಯಲ್ಲೂ ಅಸಮಾಧಾನ ತಾರಕಕ್ಕೇರಿದೆ ಎಂಬ ಕಾಂಗ್ರೆಸ್‌ ಟೀಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಯಡಿಯೂರಪ್ಪನವರಿಗೆ ಯಾವುದೇ ಮುನಿಸಿಲ್ಲ. ಕಾಂಗ್ರೆಸ್‌ನವರು ಏನೋ ಹೇಳ್ಬೇಕು ಅಂತ ಹೇಳ್ತಾರೆ ಅಷ್ಟೆ. ಅವರ ತಟ್ಟೆಯಲ್ಲಿ ಕತ್ತೆ ಬಿದ್ದಿದೆ, ಅದನ್ನು ನೋಡೋದಿಲ್ಲ. ಕತ್ತಲಲ್ಲಿ ಕರಿ ಬೆಕ್ಕು ಹುಡುಕೋ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಚಿವರಾದ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ ಶಾ ಜತೆಗಿನ ಸಭೆಯಲ್ಲಿ ಇದ್ದರು.

ಕೋರ್ಟ್‌ ತೀರ್ಮಾನದಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಶಾ ಸೂಚನೆ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವನ್ನು ಸಂವಿಧಾನ ಬದ್ಧವಾಗಿ ಹಾಗೂ ಸುಪ್ರೀಂಕೋರ್ಟ್‌ ತೀರ್ಮಾನದಂತೆ ಬಗೆಹರಿಸಿಕೊಳ್ಳಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬುಧವಾರ ಉಭಯ ರಾಜ್ಯಗಳ ಸಭೆಯ ಬಳಿಕ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, 2004ರಿಂದ ಏನೇನು ಆಯ್ತು, ಈ ಹಿಂದೆ ಏನೇನು ಆಗಿತ್ತು ಅಂತ ಎಲ್ಲವನ್ನೂ ಸಭೆಯಲ್ಲಿ ವಿವರಿಸಿದೆ. ಅದೇ ಪ್ರಕಾರವಾಗಿ ಮಹಾರಾಷ್ಟ್ರದವರು ಸಹ ಅವರ ಅಭಿಪ್ರಾಯ ಹೇಳಿದರು. 

ಸಿಎಂ ಬೊಮ್ಮಾಯಿ, ಶಿಂಧೆ ಜೊತೆಯಲ್ಲಿ ಶಾ ಸುದ್ದಿಗೋಷ್ಠಿ, ರಾಜಕೀಯ ಬೇಡ, ಕೋರ್ಟ್ ನಿರ್ಧಾರದ ಬಳಿಕ ಕ್ರಮ!

ನಮ್ಮಿಬ್ಬರ ಅಭಿಪ್ರಾಯ ಕೇಳಿದ ಮೇಲೆ, ಎರಡೂ ರಾಜ್ಯಗಳಲ್ಲಿ ಏನೂ ಸಮಸ್ಯೆ ಆಗಬಾರದು ಎಂದು ಅಮಿತ್‌ ಶಾ ಸಲಹೆ ನೀಡಿದರು. ಸಣ್ಣ, ಪುಟ್ಟ ವಿಚಾರಗಳಿಗೆ ಗಲಾಟೆ ಆಗಬಾರದು. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆ. ಗಡಿ ವಿಚಾರಕ್ಕೆ ಸುಪ್ರೀಂಕೋರ್ಟ್‌ ಮತ್ತು ಸಂವಿಧಾನ ಬದ್ಧ ತೀರ್ಮಾನ ದೊರೆಯಬೇಕಿದೆ ಎಂದರು. ಅಲ್ಲದೆ, ಮಹಾರಾಷ್ಟ್ರದಲ್ಲೂ ನಮ್ಮವರು ತುಂಬಾ ಜನ ಹೋಟೆಲ್‌ ಸೇರಿದಂತೆ ವಿವಿಧ ವ್ಯವಹಾರ ನಡೆಸುತ್ತಿದ್ದಾರೆ. ಅವರಿಗೆ ರಕ್ಷಣೆ ಸಿಗಬೇಕು ಅನ್ನುವ ವಾದ ಕೂಡ ನಾನು ಸಭೆಯಲ್ಲಿ ಮಂಡಿಸಿದೆ ಎಂದರು.

click me!