
ಚೆನ್ನೈ(ಸೆ.25) ತಮಿಳುನಾಡು ಬಿಜೆಪಿ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಂಡ ಅಣ್ಣಾಮಲೈ ತಮಿಳುನಾಡಿನ ರಾಜಕೀಯ ಹೋರಾಟದ ದಿಕ್ಕನ್ನೇ ಬದಲಿಸಿದ್ದಾರೆ. ದ್ರಾವಿಡ ಹೋರಾಟ, ತಮಿಳು ಹೋರಾಟದಲ್ಲೇ ರಾಜಕೀಯ ಜೀವನ ಕಂಡುಕೊಂಡಿದ್ದ ತಮಿಳುನಾಡಿನಲ್ಲಿ ಇದೀಗ ಅಭಿವೃದ್ಧಿ, ಹಿಂದುತ್ವದ ಕಹಳೆ ಮೊಳಗುತ್ತಿದೆ. ಇದು ಮಿತ್ರಪಕ್ಷಗಳ ಸಿದ್ಧಾಂತಕ್ಕೆ ಹೊಡೆತ ನೀಡುತ್ತಿದೆ. ಅಣ್ಣಾಮಲೈ ನೀಡಿದ ಹೇಳಿಕೆಯನ್ನೇ ಖಂಡಿಸಿ ಇದೀಗ ಬಿಜೆಪಿ ಜೊತೆಗಿನ ಮೈತ್ರಿಯನ್ನು ಅಧಿಕೃತವಾಗಿ ಎಐಎಡಿಎಂಕೆ ಅಂತ್ಯಗೊಳಿಸಿದೆ. ಇಷ್ಟೇ ಅಲ್ಲ ಎನ್ಡಿಎ ಕೂಟದಿಂದ ಹೊರನಡೆದಿದೆ.
ಲೋಕಸಭಾ ಚುನಾವಣೆಗೆ ಮೊದಲೇ ಎನ್ಡಿಎ ಕೂಟಕ್ಕೆ ಆಘಾತ ಎದುರಾಗಿದೆ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚಿನ ಸ್ಥಾನ ಗೆಲ್ಲುವ ಕನಸಿಗೆ ತೀವ್ರ ಹೊಡೆತ ಬಿದ್ದಿದೆ. ಇಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ್ ಮುನ್ನೇತ್ರ ಕಳಗಂ( ಎಐಎಡಿಎಂಕೆ) ತನ್ನ ಪಕ್ಷದ ಸಂಸದರು, ಶಾಸಕರು ಹಾಗೂ ನಾಯಕರ ಜೊತೆಗೆ ಜಿಲ್ಲಾ ಮಟ್ಟದ ಸಭೆ ನಡೆಸಿ ಮಹತ್ವದ ತೀರ್ಮಾನ ಘೋಷಿಸಿದೆ.
ಈ ರಾಜ್ಯದ ಸಿಎಂ ಕೋಪಕ್ಕೆ ಕಾರಣವೇ ಇಲ್ಲ: I.N.D.I.A ಮೈತ್ರಿಕೂಟಕ್ಕೆ ರೆಡ್ ಕಾರ್ಡ್ ಆತಂಕ!
ಎಐಎಡಿಎಂಕೆ ನಾಯಕ ಕೆಪಿ ಮುನುಸ್ವಾಮಿ ಮೈತ್ರಿ ಮುರಿದುಕೊಂಡಿರುವ ನಿರ್ಧಾರ ಪ್ರಕಟಿಸಿದ್ದಾರೆ. ಪ್ರಮುಖವಾಗಿ ಅಣ್ಣಾಮಲೈ ನಡವಳಿಕೆ, ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ನಾಯಕ ಅಣ್ಣಾ ದೊರೆಯನ್ನು ಖಂಡಿಸಿರುವುದು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅಣ್ಣಾಮಲೈಯಿಂದ ಪಕ್ಷಕ್ಕೆ ಅವಮಾನ, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮೈತ್ರಿ ಮುರಿದ ಎಐಎಡಿಎಂಕೆ!
ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ಭಾಷಣ ಮಾಡುವಾಗ ಡಿಎಂಕೆ ಸಂಸ್ಥಾಪಕ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರು ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಜೊತೆಗೆ ಅವರು ಸನಾತನ ಧರ್ಮದ ವಿರುದ್ಧವಾಗಿದ್ದರು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಐಡಿಎಂಕೆ ನಾಯಕರು,‘ಅಣ್ಣಾಮಲೈ ಅವರು ನಿರಂತರವಾಗಿ ಪಕ್ಷದ ನಾಯಕರನ್ನು ಟೀಕಿಸಿ ಅವಮಾನಿಸುತ್ತಿದ್ದಾರೆ. ಇದು ಬಿಜೆಪಿ ಹಾಗೂ ಅಣ್ಣಾಡಿಎಂಕೆ ನಡುವೆ ಬಿರುಕಿಗೆ ಕಾರಣವಾಗಲಿದೆ. ಅವರು ತಮ್ಮ ವೈಯಕ್ತಿಕ ವರ್ಚಸ್ಸನ್ನು ವೃದ್ಧಿಸಿಕೊಳ್ಳುವುದರಲ್ಲಿ ರಾಜ್ಯದ ಹಿರಿಯರಿಗೆ ಅಗೌರವ ತೋರುತ್ತಿದ್ದಾರೆ. ಇದನ್ನು ಸಹಿಸಲಾಗದು. ನಾವು ಸದ್ಯಕ್ಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಇದರ ಬಗ್ಗೆ ಬರುವ ಚುನಾವಣೆ ಸಂದರ್ಭದಲ್ಲಿ ಯೋಚಿಸಲಾಗುವುದು ಎಂದು ತಿಳಿಸಿದ್ದರು. ಇದೀಗ ಪಕ್ಷದೊಳಗೆ ಸಭೆ ನಡೆಸಿ ಮೈತ್ರಿ ಮುರಿದುಕೊಂಡಿರುವ ಅಧಿಕೃತ ಹೇಳಿಕೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.