
ಬೆಂಗಳೂರು (ಆ.12): ನಾನು ಈ ಹಿಂದೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಲವು ಚುನಾವಣೆಗಳಿಗೆ ನೇತೃತ್ವ ವಹಿಸಿಕೊಂಡಿದ್ದೆ. ಆಗ ಇವರೆಲ್ಲಾ ಎಲ್ಲಿದ್ದರೋ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಸ್ವಪಕ್ಷೀಯ ಶಾಸಕ ಪ್ರೀತಂ ಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿರುವ ತಮ್ಮ ಕೊಠಡಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯದ ಮುತ್ಸದ್ದಿ ನಾಯಕರು. ಅವರ ಹಿರಿತನಕ್ಕೆ ಗೌರವ ಕೊಡಬೇಕು. ಈ ಸೋಮಣ್ಣನವರ ಒಳ್ಳೆಯತನ ಪ್ರೀತಂಗೌಡ ಅವರಿಗೆ ಕೆಟ್ಟದಾಗಿ ಕಾಣಿಸಿರಬಹುದು. ಅವರಿಗೆ ಒಳ್ಳೆಯದಾಗಲಿ. ಇನ್ನು ನಾನು ಮುಂದೆ ಅವರನ್ನು ಉದ್ದೇಶಿಸಿ ನಾನು ಬಹು ವಚನದಲ್ಲೇ ಮಾತನಾಡುತ್ತೇನೆ ಎಂದು ಟಾಂಗ್ ನೀಡಿದರು.
ಕಬ್ಬನ್ ಪಾರ್ಕ್,ಲಾಲ್ ಬಾಗ್ ನೋಡೋಕೆ ಬಂದಿಲ್ಲ: ಮತ್ತೆ ಗುಡುಗಿದ ಪ್ರೀತಂ ಗೌಡ
ಸಿಂಗ್ ಅತೃಪ್ತಿ ಶೀಘ್ರ ಶಮನ: ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ಅವರ ಜೊತೆ ಮುಖ್ಯಮಂತ್ರಿಗಳು ಮಾತನಾಡಿ ನಂತರ ಹೈಕಮಾಂಡ್ ಒತೆ ಚರ್ಚಿಸಿ ಸಮಸ್ಯೆ ಪರಿಹರಿಸಲಿದ್ದಾರೆ. ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಇದೇ ವೇಳೆ ಸೋಮಣ್ಣ ಅಭಿಪ್ರಾಯಪಟ್ಟರು.
ಬೊಮ್ಮಾಯಿ ಅವರು ಸೂಕ್ಷ್ಮವಾಗಿ ಎಲ್ಲವನ್ನೂ ನಿಭಾಯಿಸುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನಡೆಯುತ್ತಿದ್ದಾರೆ. ಆನಂದ್ ಸಿಂಗ್ ಅವರೂ ಬುದ್ಧಿವಂತರಾಗಿದ್ದು ಅವರಿಗೆ ಎಲ್ಲವೂ ಅರ್ಥವಾಗುತ್ತದೆ. ಇಬ್ಬರೂ ಚರ್ಚೆ ನಡೆಸಲಿದ್ದು ನಂತರ ಎಲ್ಲವೂ ತಿಳಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.