ಚನ್ನಪಟ್ಟಣ ಟಿಕೆಟ್‌ಗಾಗಿ ಕಸರತ್ತು: ಎಚ್‌ಡಿಕೆ ಜತೆ ಮಾತುಕತೆ ನಡೆಸಲು ಯೋಗೇಶ್ವ‌ರ್‌ಗೆ ಸಲಹೆ!

By Kannadaprabha NewsFirst Published Oct 8, 2024, 12:01 PM IST
Highlights

ಪಕ್ಷ ಸದಾ ನಿಮ್ಮ ಬೆಂಬಲಕ್ಕೆ ಇದೆ. ಜೊತೆಗೆ ಎಲ್ಲಾ ವರದಿಗಳು ನಿಮ್ಮ ಪರವಾಗಿಯೇ ಬಂದಿವೆ. ಬಿಜೆಪಿ ಅಂತಾ ಬಂದಾಗ ನೀವೇ ಮೊದಲ ಆಯ್ಕೆಯಾಗಿರುತ್ತೀರಿ. ಆದರೆ, ಜೆಡಿಎಸ್ ಕುಟುಂಬದ ವಿಚಾರ ಬಂದಾಗ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ: ರಾಜ್ಯ ಬಿಜೆಪಿ ಉಸ್ತವಾರಿ ಡಾ.ರಾಧಾ ಮೋಹನ್ ದಾಸ್ ಅಗರವಾಲ್ 

ನವದೆಹಲಿ(ಅ.08):  ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಕ್ಷೇತ್ರದ ಮತದಾರರ ನಾಡಿಮಿಡಿತ ನೋಡಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಅವರಿಗೆ ರಾಜ್ಯ ಬಿಜೆಪಿ ಉಸ್ತವಾರಿ ಡಾ.ರಾಧಾ ಮೋಹನ್ ದಾಸ್ ಅಗರವಾಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಮತ್ತೊಮ್ಮೆ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಲು ಸಲಹೆ ನೀಡಿದ್ದಾರೆ. 

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವ ಯೋಗೇಶ್ವರ್ ಅವರು ಸೋಮವಾರ ದೆಹಲಿಗೆ ತೆರಳಿ ಅಗರವಾಲ್ ಅವರನ್ನು ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು. ಭೇಟಿ ವೇಳೆ, ಕ್ಷೇತ್ರದ ಟಿಕೆಟ್ ವಿಚಾರವಾಗಿ ಎರಡು ದಿನಗಳ ಹಿಂದೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ನಡೆಸಿದ ಮಾತುಕತೆಯ ವಿವರವನ್ನು ಅಗರವಾಲ್‌ಗೆ ತಿಳಿಸಿದರು. 

Latest Videos

ಚನ್ನಪಟ್ಟಣ ಬೈಎಲೆಕ್ಷನ್‌: ಕಾಂಗ್ರೆಸ್‌ ಸೇರ್ತಾರಾ ಯೋಗೇಶ್ವರ್‌?, ಬಾಲಕೃಷ್ಣ ಹೇಳಿದ್ದಿಷ್ಟು

ಚನ್ನಪಟ್ಟಣ ಕ್ಷೇತ್ರದ ವಾಸ್ತವಿಕ ಸಂಗತಿಯ ವಿವರಣೆ ನೀಡಿದರು. ಕ್ಷೇತ್ರದಲ್ಲಿ ದಲಿತರು, ಮುಸ್ಲಿಮರ ಧೋರಣೆ ಬದಲಾಗಿರುವ ಬಗ್ಗೆ, ಒಕ್ಕಲಿಗ ಸಮುದಾಯದಲ್ಲಿ ಜೆಡಿಎಸ್ ಬಗ್ಗೆ ಇರುವ ಭಾವನೆ ಬಗ್ಗೆ ಸಿಪಿವೈ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಗರವಾಲ್, ಪಕ್ಷ ಸದಾ ನಿಮ್ಮ ಬೆಂಬಲಕ್ಕೆ ಇದೆ. ಜೊತೆಗೆ ಎಲ್ಲಾ ವರದಿಗಳು ನಿಮ್ಮ ಪರವಾಗಿಯೇ ಬಂದಿವೆ. ಬಿಜೆಪಿ ಅಂತಾ ಬಂದಾಗ ನೀವೇ ಮೊದಲ ಆಯ್ಕೆಯಾಗಿರುತ್ತೀರಿ. ಆದರೆ, ಜೆಡಿಎಸ್ ಕುಟುಂಬದ ವಿಚಾರ ಬಂದಾಗ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು. 

ಮೈತ್ರಿ ಟಿಕೆಟ್ ವಿಚಾರವಾಗಿ ಎಚ್ಚಿಕೆಯವರು ಕ್ಷೇತ್ರದ ಮತದಾರರ ಮನಸ್ಥಿತಿ ತಿಳಿದು, ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

click me!