ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ನಟ ಕಮಲ್ ಹಸನ್!

By Suvarna NewsFirst Published Dec 24, 2022, 5:00 PM IST
Highlights

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಇದೀಗ ದೆಹಲಿ ತಲುಪಿದೆ. ರಾಷ್ಟ್ರ ರಾಜಧಾನಿಗೆ ಎಂಟ್ರಿಯಾಗುತ್ತಿದ್ದಂತೆ ತಮಿಳು ನಟ ಕಮಲ್ ಹಸನ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. 

ನವದೆಹಲಿ(ಡಿ.24): ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ದೆಹಲಿ ತಲುಪಿದೆ. ರಾಜಧಾನಿಯಲ್ಲಿ ಭಾರಿ ಸಂಚಲನ ಸೃಷ್ಟಿಸಲು ಹಲವು ಸೆಲೆಬ್ರೆಟಿಗಳು, ಗಣ್ಯರು, ಪ್ರಮುಖ ನಾಯಕರಿಗೆ ಖುದ್ದು ರಾಹುಲ್ ಗಾಂಧಿ ಆಹ್ವಾನ ನೀಡಿದ್ದರೆ. ಈ ಆಹ್ವಾನದಂತೆ ಇಂದು ಮಕ್ಕಳ್‌ ನಿಧಿ ಮೈಯಮ್‌ ಪಕ್ಷದ ಅಧ್ಯಕ್ಷ, ತಮಿಳು ನಟ ಕಮಲ್ ಹಸನ್ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಕಮಲ್ ಹಸನ್, ದೆಹಲಿಯಲ್ಲಿರುವ ತಮಿಳಿಗರು ಭಾರತ್ ಜೋಡೋ ಯಾತ್ರೆಯಲ್ಲಿ ಕೈಜೋಡಿಸುವಂತೆ ಕರೆ ಕೊಟ್ಟಿದ್ದಾರೆ. 

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೆರಾ, ಭೂಪಿಂದರ್ ಸಿಂಗ್ ಹೂಡ, ಕುಮಾರಿ ಸೆಲ್ಜಾ, ರಂದೀಪ್ ಸುರ್ಜೆವಾಲ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ಜೊತೆ ದೆಹಲಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಇದರ ಜೊತೆಗೆ ವಿಶೇಷ ಆಹ್ವಾನಿತ ಕಮಲ್ ಹಸನ್ ಕೂಡ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಭಾರತ ಜೋಡೋ ಯಾತ್ರೆ ಮುಂದೂಡಿ, ಇಲ್ಲ ಈ ನಿಯಮ ಪಾಲಿಸಿ; ಕೇಂದ್ರದ ಪತ್ರಕ್ಕೆ ರಾಹುಲ್ ಕಂಗಾಲು!

ಹರ್ಯಾಣದಿಂದ ದೆಹಲಿ ತಲುಪಿರುವ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಪಂಡಾಜಬ್ ಮೂಲಕ ಹಾದು ಹೋಗಲಿದೆ. ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಆದರೆ ಅವಧಿಗೂ ಮೊದಲೇ ಭಾರತ್ ಜೋಡೋ ಯಾತ್ರ ನಿಲ್ಲಿಸಿ ಅಥವಾ ಕೋವಿಡ್ ಮಾರ್ಗಸೂಚಿ ಪಾಲಿಸಿ ಎಂದು ಕೇಂದ್ರ ಆರೋಗ್ಯ ಸಚಿವರು ಪತ್ರ ಬರೆದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಭಾರತ್‌ ಜೋಡೋ ಯಾತ್ರೆ

ಯಾತ್ರೆ ತಡೆಯಲು ಕೇಂದ್ರ ಉದ್ದೇಶಪೂರ್ವಕವಾಗಿ ವೈರಸ್ ಬಿಟ್ಟಿದೆ
ರಾಹುಲ್‌ ನೇತೃತ್ವದ ಭಾರತ್‌ ಜೋಡೊ ಯಾತ್ರೆ ನಿಲ್ಲಿಸುವ ಸಲುವಾಗಿ ಕೇಂದ್ರ ಸರ್ಕಾರ ಕೋವಿಡ್‌ 19 ವೈರಸ್‌ ಬಿಡುಗಡೆ ಮಾಡಿದೆ ಎಂದು ಶಿವಸೇನೆ ಆರೋಪಿಸಿದೆ. ‘ರಾಹುಲ್‌ ಯಾತ್ರೆ 100 ದಿನ ಪೂರೈಸಿದೆ. ಯಾತ್ರೆಗೆ ದೊಡ್ಡ ಮಟ್ಟದಲ್ಲಿ ಜನಸಮೂಹದ ಬೆಂಬಲ ಸಿಕ್ಕಿದೆ. ಹೀಗಾಗಿ ಯಾತ್ರೆಯನ್ನು ಕಾನೂನು, ಸಂಚಿನ ಮೂಲಕ ನಿಲ್ಲಿಸಲಾಗದ ಕೇಂದ್ರ ಸರ್ಕಾರ ಇದೀಗ ಕೋವಿಡ್‌ ವೈರಸ್‌ ಬಿಡುಗಡೆ ಮಾಡಿದೆ’ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ. ಕೋವಿಡ್‌ ನಿಯಮ ಪಾಲನೆ ಸಾಧ್ಯವಾಗದಿದ್ದಲ್ಲಿ, ಯಾತ್ರೆ ಅಮಾನತು ಮಾಡಿ ಎಂದು ಕೇಂದ್ರ ಸರ್ಕಾರ ಬುಧವಾರ ರಾಹುಲ್‌ಗೆ ಪತ್ರ ಬರೆದಿತ್ತು.

ಭಾರತ್‌ ಜೋಡೋ ಯಾತ್ರೆಗೆ ಕೈಜೋಡಿಸಿದ ಮಾಜಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌!

ಭಾರತದಲ್ಲಿ ಹಲವು ಭಾಗಗಳಲ್ಲಿ ಸಾರ್ವಜನಿಕ ಸಭೆಗಳನ್ನು ಬಿಜೆಪಿ ಆಯೋಜಿಸಲು ಮುಂದಾಗಿದೆ. ಆದರೆ ಭಾರತ್‌ ಜೋಡೋ ಪಾದಾಯಾತ್ರೆ ಇರುವ ಕಡೆ ಮಾತ್ರ ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಳ್ಳುತ್ತದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಈಗ ಕೋವಿಡ್‌ ಹೆಚ್ಚಾಗಿದೆ, ಯಾತ್ರೆ ನಿಲ್ಲಿಸಿ ಎಂದು ಆರೋಗ್ಯ ಸಚಿವರು ನನಗೆ ಪತ್ರ ಬರೆಯುತ್ತಿದ್ದಾರೆ. ಆದರೆ ದೇಶಾದ್ಯಂತ ಬಿಜೆಪಿ ಬೇಕಾದಂತೆ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದೆ. ಆದರೆ ಎಲ್ಲಿ ಭಾರತ್‌ ಜೋಡೊ ಯಾತ್ರೆ ಹೋಗುತ್ತದೋ ಅಲ್ಲಿ ಮಾತ್ರ ಕೋವಿಡ್‌ ಕಾಣಿಸಿಕೊಳ್ಳುತ್ತದೆ ಎಂದು ಕಿಡಿಕಾರಿದ್ದಾರೆ.

click me!