
ಭೀಮಣ್ಣ ಗಜಾಪುರ
ಕೂಡ್ಲಿಗಿ (ಜ.27) : ನಾರಿ ಶ್ರೀನಿವಾಸ್ ತನ್ನ ಆಮ್ ಆದ್ಮಿ ಸೈನ್ಯದೊಂದಿಗೆ ಕೂಡ್ಲಗಿ ಕ್ಷೇತ್ರದಲ್ಲಿ ಹೊರಟರೆ ಜನತೆ ಅಚ್ಚರಿಯಿಂದ ತಿರುಗಿ ನೋಡುತ್ತಾರೆ. ಇವರ ಶಿಸ್ತು, ರೈತರ ಸಮಸ್ಯೆ ಆಲಿಸುವ ತಾಳ್ಮೆ, ಸಹೋದರತೆ, ಜನತೆಯೊಂದಿಗೆ ವಿಶ್ವಾಸದಿಂದ ಬೇರೆಯುವ ಗುಣ ಎಲ್ಲರಿಗೂ ಇಷ್ಟಆಗುತ್ತದೆ.
ಹೋದ ಕಡೆಯಲ್ಲೆಲ್ಲ ಹೇಳುವುದು ಒಂದೇ ಮಾತು ಸನ್ಮಾನಕ್ಕೆ ನಮ್ಮನ್ನು ಕರೀಬೇಡಿ, ಸಮಸ್ಯೆ ಬಂದಾಗ ನಮ್ಮನ್ನು ಮರೀಬೇಡಿ ಎನ್ನುವುದು. ನಾವು ಜನರ ಸೇವೆ ಮಾಡಲು ಬಂದಿದ್ದೇವೆ ಹೊರತೂ ಹಾರ ತುರಾಯಿ ಹಾಕಿಸಿಕೊಂಡು ರಾಜರಾಗಲು ಬಂದಿಲ್ಲ ಅದು ನಮ್ಮ ಜಾಯಮಾನವೂ ಅಲ್ಲ ಎಂದು ಹೇಳುವ ಮೂಲಕ ಸದ್ದಿಲ್ಲದೇ ಜನತೆಯ ವಿಶ್ವಾಸ ಗಳಿಸುತ್ತಿದ್ದಾರೆ.
Assembly election: ಆಪ್ ಪುನಾರಚನೆ: ಪೃಥ್ವಿರೆಡ್ಡಿ ಮತ್ತೆ ರಾಜ್ಯಾಧ್ಯಕ್ಷ
ಸಮಾಜದ ಕಟ್ಟಕಡೆಯ ವ್ಯಕ್ತಿಯೊಂದಿಗೆ ನಮ್ಮ ಬದುಕು, ಅವರ ಜೀವನಕ್ಕೆ ಭರವಸೆಯ ಬೆಳ್ಳಿಗೆರೆ ಮೂಡಿಸುವುದು ನಮ್ಮ ಆಮ್ ಆದ್ಮಿ ಗುರಿಯಾಗಿದೆ. ಕೂಡ್ಲಿಗಿ ಕ್ಷೇತ್ರದಲ್ಲಿಯೂ ಪಾರದರ್ಶಕ ಆಡಳಿತ, ಟೂರಿಜಂ ಉತ್ತೇಜನ, ಮಕ್ಕಳಿಗೂ ಗುಣಮಟ್ಟದ ಶಿಕ್ಷಣ, ಎಲ್ಲ ಹಳ್ಳಿಗಳಿಗೂ ಸಾರಿಗೆ ಬಸ್, ಎಲ್ಲ ಆಸ್ಪತ್ರೆಗಳಲ್ಲಿ ಸೂಕ್ತ ಮೂಲಭೂತ ಸೌಕರ್ಯ, ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳ ಕೈಗಳಿಗೆ ಕೆಲಸ ಕೊಡುವುದು ನಮ್ಮ ಮೊದಲ ಆದ್ಯತೆ ಎನ್ನುತ್ತಾರೆ ನಾರಿ ಶ್ರೀನಿವಾಸ.
ಸ್ಮೈಲ್ ಶ್ರೀನು:
ಸಿನಿಮಾ ರಂಗದಲ್ಲಿ ಸ್ಮೈಲ್ ಶ್ರೀನು ಆಗಿ 7ಚಿತ್ರಗಳಲ್ಲಿ ನಿರ್ದೇಶನ ಹಾಗೂ ನಿರ್ಮಾಣ ಮಾಡುವುದರ ಮೂಲಕ ಬೆಳ್ಳೆತೆರೆಯಲ್ಲಿ ಸದ್ದು ಮಾಡಿರುವ ನಾರಿ ಶ್ರೀನಿವಾಸ್ ಈಗ ಆಮ್ ಆದ್ಮಿ ಪಕ್ಷದ ಮೂಲಕ ರಾಜಕಾರಣದಲ್ಲಿ ಸದ್ದು ಮಾಡಲು ಹೊರಟಿದ್ದಾರೆ.
ಇತ್ತೀಚೆಗೆ ತಾಲೂಕಿನ ಓಬಳಶೆಟ್ಟಿಹಳ್ಳಿ ಗ್ರಾಮದ 100 ವರ್ಷದ ಸೂಲಗಿತ್ತಿ ಈರಮ್ಮ ಅವರ ಮನೆಗೆ ಹೋಗಿ ಅವರ ಕುಶಲೋಪರಿ ವಿಚಾರಿಸಿ ಬದುಕಿಗೆ ಭರವಸೆ ತುಂಬುವ ಕೆಲಸ ಮಾಡಿದ್ದಾರೆ. ಹೀಗೇ ಇಂತಹ ಹತ್ತು ಹಲವು ಸಹಾಯಹಸ್ತ ಕಾರ್ಯ ಮಾಡುವುದರ ಮೂಲಕ ಕ್ಷೇತ್ರದ ಜನತೆಗೆ ಬಹುಬೇಗ ಹತ್ತಿರವಾಗುತ್ತಿದ್ದಾರೆ.
ಪೊರಕೆ ಸದ್ದು:
ಕೂಡ್ಲಿಗಿಯಲ್ಲಂತೂ ಪೊರಕೆ ಹೆಚ್ಚಿಗೆ ಸದ್ದು ಮಾಡುತ್ತಿದೆ. ಪೊರಕೆಯ ಸದ್ದಿಗೆ ಮಹಿಳೆಯರು, ಯುವಕರು ಫಿದಾ ಆಗಿದ್ದಾರೆ. ನಾರಿ ಶ್ರೀನಿವಾಸ್ ಎನ್ನುವ ಉತ್ಸಾಹಿ ತರುಣ ಈಗಾಗಲೇ ಕೂಡ್ಲಿಗಿ ಕ್ಷೇತ್ರವನ್ನು ಒಂದು ಬಾರಿ ಸುತ್ತಿದ್ದಾರೆ. 2ನೇ ಬಾರಿ ಸುತ್ತಲು ಅಣಿಯಾಗಿದ್ದಾರೆ. ಸಾರಾಯಿ ಕೊಟ್ಟು ಸಂಸಾರ ಹಾಳು ಮಾಡೋಕೆ ಬಂದಿಲ್ಲ, ದುಡ್ಡು ಕೊಟ್ಟು ನಿಮ್ಮನ್ನ ದಡ್ಡತನಕ್ಕೆ ತಳ್ಳೋಕೆ ಬಂದಿಲ್ಲ, ನಿಮ್ಮ ಬದುಕನ್ನು ಹಸನು ಮಾಡಲು ಬಂದಿದ್ದೇನೆ ಆಮ್ ಆದ್ಮಿ ಪಾರ್ಟಿ ಎಂದಿಗೂ ನಿಮ್ಮ ನಂಬಿಕೆಗಳನ್ನು ಹುಸಿ ಮಾಡುವುದಿಲ್ಲ. ನಮ್ಮ ಪಕ್ಷ ನುಡಿದಂತೆ ನಡೆಯುತ್ತದೆ ಇದಕ್ಕೆ ದೆಹಲಿಯ ಕೇಜ್ರಿವಾಲ್ ಸರ್ಕಾರವೇ ಸಾಕ್ಷಿ ಎಂದು ಪ್ರಚಾರ ಮಾಡುತ್ತಿದ್ದಾರೆ.
ಭ್ರಷ್ಟಾಚಾರ ಸಂಕಟದಲ್ಲಿ ಆಮ್ ಆದ್ಮಿ ಪಾರ್ಟಿ, ಮಾನ್ ಸರ್ಕಾರದ ಮತ್ತೊಂದು ವಿಕೆಟ್ ಪತನ!
ಕೂಡ್ಲಿಗಿಯಂತಹ ಹಿಂದುಳಿದ ತಾಲೂಕಿನಲ್ಲಿ ಹತ್ತು ಹಲವು ಮಹತ್ತರ ಕಾರ್ಯ ಮಾಡುವ ಕನಸಿದೆ. ಟೂರಿಸಂ ಸ್ಥಳ, ಪಾಳೇಗಾರರ ಉತ್ಸವ, ಒನಕೆ ಓಬವ್ವನ ಮ್ಯೂಜಿಯಂ ನಿರ್ಮಿಸುವ ಉದ್ದೇಶ ಇದೆ. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ, ರೈತರ ಬದುಕು ಸುಂದರವಾಗಬೇಕು. ಇಡೀ ಕೂಡ್ಲಿಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವ ಗುರಿ ಇದೆ. ಜನಾಶೀರ್ವಾದದ ವಿಶ್ವಾಸವಿದೆ.
ನಾರಿ ಶ್ರೀನಿವಾಸ್, ಕೂಡ್ಲಿಗಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.