ರಾಜ್ಯದ ಒಳಮೀಸಲಾತಿಯಿಂದ ದೇಶದಲ್ಲಿ ದೊಡ್ಡ ಬದಲಾವಣೆ: ಸಿಎಂ ಬೊಮ್ಮಾಯಿ

Published : Apr 07, 2023, 05:22 AM IST
ರಾಜ್ಯದ ಒಳಮೀಸಲಾತಿಯಿಂದ ದೇಶದಲ್ಲಿ ದೊಡ್ಡ ಬದಲಾವಣೆ: ಸಿಎಂ ಬೊಮ್ಮಾಯಿ

ಸಾರಾಂಶ

ಕರ್ನಾಟಕದಲ್ಲಿ ಮಾಡಿದ ಮೀಸಲಾತಿ ಬದಲಾವಣೆ ದೇಶದಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಹಾಡಲಿದೆ. ಈ ಬದಲಾವಣೆ ಬೀಜ ಕರ್ನಾಟಕದಿಂದಲೇ ಬಿತ್ತಿದಂತಾಗಿದೆ. ಈ ಮೂಲಕ ಸಮಾಜ ಸುಧಾರಕಿ ಜ್ಯೋತಿಬಾ ಪುಲೆ ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂಬ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಹುಬ್ಬಳ್ಳಿ (ಏ.07): ಕರ್ನಾಟಕದಲ್ಲಿ ಮಾಡಿದ ಮೀಸಲಾತಿ ಬದಲಾವಣೆ ದೇಶದಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಹಾಡಲಿದೆ. ಈ ಬದಲಾವಣೆ ಬೀಜ ಕರ್ನಾಟಕದಿಂದಲೇ ಬಿತ್ತಿದಂತಾಗಿದೆ. ಈ ಮೂಲಕ ಸಮಾಜ ಸುಧಾರಕಿ ಜ್ಯೋತಿಬಾ ಪುಲೆ ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂಬ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯ ಬಿಜೆಪಿ ಸರ್ಕಾರ ಒಳಮೀಸಲಾತಿ ಘೋಷಣೆ ಹಾಗೂ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದಕ್ಕೆ ಪರಿಶಿಷ್ಟಸಮುದಾಯಗಳ ಒಕ್ಕೂಟವು ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ನಾವು ಯಾರಿಗೂ, ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. 

ಅನ್ಯಾಯ ಮಾಡುವುದೂ ಇಲ್ಲ. ಇದು ಅಂಬೇಡ್ಕರ್‌, ಬಸವಣ್ಣ, ವಾಲ್ಮೀಕಿ ತತ್ವಾದರ್ಶ ಇಟ್ಟುಕೊಂಡು ಮಾಡಿರುವ ಕಾನೂನು ಎಂದರು. ಕಾಂಗ್ರೆಸ್‌ಗೆ ತಾಕತ್‌ ಇದ್ದರೆ ತಾನು ಒಳಮೀಸಲಾತಿ ಹಾಗೂ ಮೀಸಲಾತಿ ಹೆಚ್ಚಳ ಪರವಾಗಿದೆಯೋ, ವಿರುದ್ಧವಾಗಿದೆಯೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ ಬೊಮ್ಮಾಯಿ ಬೋವಿ, ಕೊರಚ, ಕೊರಮ, ಬಂಜಾರ ಸಮಾಜವನ್ನು ಎಸ್ಸಿ ಜನಾಂಗದಿಂದ ತೆಗೆದು ಹಾಕಿಲ್ಲ; ತೆಗೆದು ಹಾಕುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕುಂಬಳಕಾಯಿ ಕಳ್ಳರು: ಕಾಂಗ್ರೆಸ್ಸಿಗೆ ಸಿಎಂ ಬೊಮ್ಮಾಯಿ ಚಾಟಿ

ಸದಾಶಿವ ಆಯೋಗದ ವರದಿ ಅನುಷ್ಠಾನ ಕುರಿತು ಹಲವು ವರ್ಷಗಳಿಂದ ಬೇಡಿಕೆಯಿತ್ತು. ಆದರೆ ಕಾಂಗ್ರೆಸ್‌ ಆಡಳಿತ ಇದನ್ನು ಈಡೇರಿಸುವ ಗೋಜಿಗೆ ಹೋಗಿರಲಿಲ್ಲ. ಮೀಸಲಾತಿ ವಿಚಾರ ಬೆಂಕಿ ಇದ್ದಂತೆ. ಒಳಮೀಸಲಾತಿ ಯಾರು ಜಾರಿಗೆ ತರುತ್ತಾರೆ ಅವರು ಸುಟ್ಟು ಭಸ್ಮವಾಗುತ್ತಾರೆ ಎಂದೆಲ್ಲ ಹೇಳಲಾಗುತ್ತಿತ್ತು. ಈ ಮೂಲಕ ದಲಿತ ಸಮುದಾಯಕ್ಕೆ 60 ವರ್ಷಗಳಿಂದ ಕಾಂಗ್ರೆಸ್‌ ಅನ್ಯಾಯ ಮಾಡುತ್ತಲೇ ಬಂದಿತ್ತು. ಕಾಂಗ್ರೆಸ್‌ನದು ದ್ವಿಮುಖ ನೀತಿ. ನಿಮ್ಮ ಮತ ಬೇಕು, ಆದರೆ ನಿಮಗೆ ಮೀಸಲಾತಿ ಕೊಡುವುದು ಬೇಕಿಲ್ಲ. ನಿಮ್ಮ ಮತ ಪಡೆದು ರಾಜಕಾರಣ ಮಾಡಿದರು. ಆದರೆ ಸೌಲಭ್ಯ ಕಲ್ಪಿಸಲು ಮುಂದಾಗಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‌ ವಂಚನೆ: ಕಾಂಗ್ರೆಸ್‌ ಅನ್ನು ನಂಬಬೇಡಿ. ಅದು ವಂಚನೆ ಮಾಡುತ್ತಲೇ ಬಂದಿದೆ. ಈಗಲೂ ಆ ವಂಚನೆಯನ್ನು ಮುಂದುವರಿಸುತ್ತಿದೆ. ಅಧಿಕಾರಕ್ಕೆ ಬರುತ್ತಿದ್ದಂತೆ ನಾವು ಮಾಡಿರುವ ಮೀಸಲಾತಿ ಹೆಚ್ಚಳ, ಒಳಮೀಸಲಾತಿ ರದ್ದುಗೊಳಿಸುವುದಾಗಿ ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ, ಅವರನ್ನು ಅಧಿಕಾರಕ್ಕೆ ಬರಲು ದಲಿತ ಸಮುದಾಯದ ಅಣ್ಣ-ತಮ್ಮಂದಿರು ಅವಕಾಶ ನೀಡುವುದೂ ಇಲ್ಲ. ಮೀಸಲಾತಿ ಮುಟ್ಟಿದರೆ ದೊಡ್ಡ ಕ್ರಾಂತಿಯಾಗುತ್ತದೆ. ದಲಿತರನ್ನು ಎದುರು ಹಾಕಿಕೊಂಡು ಯಾರಾದರೂ ಅಧಿಕಾರಕ್ಕೆ ಬರಲು ಸಾಧ್ಯವೇ? ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆನ್ನುವುದು ಹಗಲುಗನಸು ಎಂದು ವ್ಯಂಗ್ಯವಾಡಿದರು.

ಮೀಸಲಾತಿ ಹೆಚ್ಚಳ ಮಾಡುವಾಗ ಸರ್ವಪಕ್ಷದ ಸಭೆ ಕರೆದಿದ್ದೆ. ಆಗ ಎಲ್ಲರೂ ಒಪ್ಪಿಗೆ ನೀಡಿದ್ದರು. ಈಗ ನೋಡಿದರೆ ಅಸಾಂವಿಧಾನಿಕ, ಅವೈಜ್ಞಾನಿಕ ಎನ್ನುತ್ತಾರೆ. ಅವರು ನಿಮ್ಮ ಹಾದಿ ತಪ್ಪಿಸುವ ಕೆಲಸ ಮಾಡುತ್ತಾರೆ. ಅಂಥವರ ಬಗ್ಗೆ ಹುಷಾರಾಗಿರಿ ಎಂದ ಬೊಮ್ಮಾಯಿ, ಸಿದ್ದರಾಮಯ್ಯ ಮೀಸಲಾತಿ ಪರವಾಗಿದ್ದಾರೋ, ವಿರುದ್ಧವಾಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಪುನರುಚ್ಚರಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಮಹಾರಾಷ್ಟ್ರದ ವಿಮೆ ಕಿತಾಪತಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ: ಸಿಎಂ ಬೊಮ್ಮಾಯಿ ಕಿಡಿ

ಕಾಂಗ್ರೆಸ್‌ ಪಕ್ಷಕ್ಕೆ ತಾಕತ್‌ ಇದ್ದರೆ ತಾನು ಒಳಮೀಸಲಾತಿ ಹಾಗೂ ಮೀಸಲಾತಿ ಹೆಚ್ಚಳ ಪರವಾಗಿದೆಯೋ, ವಿರುದ್ಧವಾಗಿದೆಯೋ ಎಂಬುದನ್ನು ಸ್ಪಷ್ಟಪಡಿಸಲಿ. ಬಿಜೆಪಿ ಸರ್ಕಾರ ಘೋಷಿಸಿರುವ ಮೀಸಲಾತಿ ಹೆಚ್ಚಳ ಹಾಗೂ ಒಳಮೀಸಲಾತಿ ರದ್ದುಪಡಿಸುತ್ತೇವೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಜನರಿಗೆ ಸೌಲಭ್ಯ ಕೊಡುವವರು ಬೇಕಾ? ಸೌಲಭ್ಯ ಕಿತ್ತುಕೊಳ್ಳುವವರು ಬೇಕಾ? ಜನರೇ ನಿರ್ಧಾರ ಮಾಡಲಿ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ