Latest Videos

ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ

By Kannadaprabha NewsFirst Published Jun 29, 2023, 10:02 PM IST
Highlights

ಯಾರಿಗೆ ಆಗಲಿ ಅಧಿಕಾರವಿದ್ದ ಸಂದರ್ಭದಲ್ಲಿ ಶಾಶ್ವತವಾಗಿ ಉಳಿಯುವಂತ ಕೆಲಸಗಳನ್ನು ಮಾಡಿದರೆ ಮುಂದೆಯೂ ನೆನಪಿಸಿಕೊಳ್ಳುತ್ತಾರೆ. ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ ಕೇಂದ್ರ ಸರ್ಕಾರ ನೀಡುತ್ತದೆ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ಕೋಲಾರ (ಜೂ.29): ಗ್ರಾಪಂಗಳು ಜನರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರಿಗಾಗಿ ರೂಪಿಸಿರುವ ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ತಿಳಿಸಿದರು. ತಾಲೂಕಿನ ವಕ್ಕಲೇರಿಯ ಗ್ರಾ.ಪಂ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಹೋಬಳಿ ಕೇಂದ್ರದಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಮಾಡಿದ್ದು ಇದರಿಂದ ಜನರಿಗೆ ಯೋಜನೆಗಳನ್ನು ತಲುಪಿಸಲು ಸಾಧ್ಯ, ಕಟ್ಟಡ ಇದ್ದರೆ ಸಾಲದು ನಿಮಗೆ ಜನರ ಪರ ಕಾಳಜಿಯಿರಬೇಕು. ಆಗ ನೂತನ ಕಟ್ಟಡ ಸ್ಥಾಪಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.

‘ಗ್ಯಾರಂಟಿ’ ಜನರಿಗೆ ತಲುಪಿಸಿ: ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆ ಗ್ಯಾರಂಟಿ ಯೋಜನೆಗಳನ್ನು ಗ್ರಾಪಂನಿಂದ ಜನರಿಗೆ ಮುಟ್ಟಿಸಬೇಕು ಯೋಜನೆಗಳ ಬಗ್ಗೆ ಅರ್ಜಿಗಳನ್ನು ಪಡೆಯಲು ಗ್ರಾಪಂ ಕಟ್ಟಡದಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿ ಅದರ ಮೂಲಕ ಪ್ರತಿ ಹಳ್ಳಿಯಲ್ಲಿ ಮಾಹಿತಿ ನೀಡುವ ಜೊತೆಗೆ ಗ್ಯಾರಂಟಿ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರದಲ್ಲೀಗ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ: ಎಚ್‌ಡಿಕೆ

ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ಯಾರಿಗೆ ಆಗಲಿ ಅಧಿಕಾರವಿದ್ದ ಸಂದರ್ಭದಲ್ಲಿ ಶಾಶ್ವತವಾಗಿ ಉಳಿಯುವಂತ ಕೆಲಸಗಳನ್ನು ಮಾಡಿದರೆ ಮುಂದೆಯೂ ನೆನಪಿಸಿಕೊಳ್ಳುತ್ತಾರೆ. ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ ಕೇಂದ್ರ ಸರ್ಕಾರ ನೀಡುತ್ತದೆ. ಅಭಿವೃದ್ಧಿ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಯಾರು ಕೂಡ ಅಡ್ಡಿ ಮಾಡದೆ ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಮೂಲಕ ಮಾದರಿ ಗ್ರಾಪಂಯಾಗಿ ಮಾಡಬೇಕು. ನಾಗರಿಕರು ಕೂಡಾ ಉತ್ತಮ ಸೇವೆಗಳನ್ನು ಗ್ರಾಪಂನಿಂದ ಪಡೆಯಬೇಕು, ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಹೋಗಿ ಮತ ಕೇಳುವ ರೀತಿಯಲ್ಲಿ ಚುನಾವಣೆ ನಂತರ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿಕೊಡಬೇಕು ಎಂದರು.

ಕಟ್ಟಡಕ್ಕೆ 5 ಲಕ್ಷ ಅನುದಾನ: ವಿಧಾನ ಪರಿಷತ್‌ ಸದಸ್ಯತ್ವ ಇಂಚರ ಗೋವಿಂದರಾಜು ಮಾತನಾಡಿ, ಗ್ರಾಪಂನಿಂದ ಸರ್ಕಾರಗಳ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಒದಗಿಸುವ ಕೆಲಸವನ್ನು ಇಲ್ಲಿಂದಲೇ ಮಾಡಬೇಕು. ಯಾವುದೇ ರೀತಿಯ ಉದ್ದೇಶ ಸರಿಯಾಗಿದ್ದರೆ ಯಾರು ಬೇಕಾದರೂ ಅನುದಾನ ಬಿಡುಗಡೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಸದಾ ಕಾಲ ಇರುತ್ತೇನೆ. ಇನ್ನೂ ಐದು ಲಕ್ಷ ಅನುದಾನ ಕೊಡುತ್ತೇನೆ ಉತ್ತಮ ರೀತಿಯಲ್ಲಿ ಕಟ್ಟಡದ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿ ಎಂದರು.

ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಮಾತನಾಡಿ, ಹೋಬಳಿ ಕೇಂದ್ರಗಳಿಗೆ ಇಂತಹ ಸೂಕ್ತವಾದ ಕಟ್ಟಡಗಳು ಅವಶ್ಯಕತೆ ಇರುತ್ತದೆ ಕಾಲಕಾಲಕ್ಕೆ ಆಗಬೇಕಾಗಿರುವ ಯೋಜನೆಗಳ ಜಾರಿಯಿಂದ ನಿಮ್ಮ ಗ್ರಾಪಂಗೆ ಪ್ರಶಸ್ತಿಗಳು ಬಂದಿವೆ, ಮುಂದಿನ ದಿನಗಳಲ್ಲಿ ಗ್ರಾಪಂಗಳ ವ್ಯಾಪ್ತಿಗೆ ಮತ್ತಷ್ಟುಕಛೇರಿಗಳು ಕಾರ್ಯನಿರ್ವಹಿಸಲಿದ್ದು ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೇ ಅಭಿವೃದ್ಧಿಯ ಜೊತೆಗೆ ಮಾದರಿ ಗ್ರಾಪಂ ಮಾಡಲು ಎಲ್ಲರೂ ಕೈಜೋಡಿಸಿ ಕೆಲಸ ಮಾಡಿ ಎಂದರು.

ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ

ಗ್ರಾಮಾಭಿವೃದ್ಧಿಯಲ್ಲಿ ರಾಜಕೀಯ ಸಲ್ಲ: ಶಾಸಕ ಕೊತ್ತೂರು ಮಂಜುನಾಥ್‌ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಒಂದಾಗಿ ಅಭಿವೃದ್ಧಿ ಮಾಡೋಣ ರಾಜಕೀಯ ಕಟ್ಟಿಕೊಂಡು ಹೋದವರು ಯಾರು ಕೂಡ ಉದ್ದಾರವಾಗಿಲ್ಲ ಎಲ್ಲಾ ಕಡೆ ಅಭಿವೃದ್ಧಿಗೆ ಪೂರಕವಾಗಿರಲು ಇಂತಹ ಕಟ್ಟಡಗಳು ಆಗಬೇಕು ಹಣದ ಕೊರತೆಯಿಲ್ಲ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು. ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ತಾಪಂ ಇಒ ಪಿ.ಮುನಿಯಪ್ಪ, ಹಿರಿಯ ಮುಖಂಡ ವಕ್ಕಲೇರಿ ರಾಮು, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್‌, ವಕ್ಕಲೇರಿ ರಾಜಪ್ಪ, ಸೊಸೈಟಿ ಕೆ.ಆನಂದ್‌ ಕುಮಾರ್‌, ಸೀಸಂದ್ರ ಗೋಪಾಲಗೌಡ, ಚಂಜಿಮಲೆ ರಮೇಶ್‌, ಅಂಬರೀಶ್‌, ಮುರಳಿಗೌಡ, ಇನಾಯತ್‌, ಗ್ರಾಪಂ ಉಪಾಧ್ಯಕ್ಷೆ ಚಿನ್ನಮ್ಮ, ಪಿಡಿಒ ಮಂಜುನಾಥ್‌ ಪ್ರಸಾದ್‌ ಇದ್ದರು.

click me!