ಲೋಕಸಭಾ ಚುನಾವಣಾ 2024: ಕರ್ನಾಟಕದಲ್ಲಿ ನಾಮಪತ್ರ ಭರಾಟೆ ಜೋರು..!

By Kannadaprabha NewsFirst Published Apr 2, 2024, 5:26 AM IST
Highlights

ಸೋಮವಾರ ಘಟಾನುಘಟಿಗಳೂ ಮಾಜಿ ಸಚಿವರೂ ಆದ ವಿ.ಸೋಮಣ್ಣ, ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್‌, ಹಾಲಿ ಸಂಸದ ಪಿ.ಸಿ.ಮೋಹನ್‌ ಸೇರಿದಂತೆ 49 ಅಭ್ಯರ್ಥಿಗಳಿಂದ 55 ನಾಮಪತ್ರಗಳು ಸೋಮವಾರ ಸಲ್ಲಿಕೆಯಾಗಿವೆ.

ಬೆಂಗಳೂರು(ಏ.02):  ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಸೋಮವಾರ ಘಟಾನುಘಟಿಗಳೂ ಮಾಜಿ ಸಚಿವರೂ ಆದ ವಿ.ಸೋಮಣ್ಣ, ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್‌, ಹಾಲಿ ಸಂಸದ ಪಿ.ಸಿ.ಮೋಹನ್‌ ಸೇರಿದಂತೆ 49 ಅಭ್ಯರ್ಥಿಗಳಿಂದ 55 ನಾಮಪತ್ರಗಳು ಸೋಮವಾರ ಸಲ್ಲಿಕೆಯಾಗಿವೆ.

ಅಧಿಸೂಚನೆ ಪ್ರಕಟಗೊಂಡ ಬಳಿಕ ಈವರೆಗೆ ಒಟ್ಟು 96 ಅಭ್ಯರ್ಥಿಗಳಿಂದ 114 ಉಮೇದುವಾರಿಕೆ ಸಲ್ಲಿಕೆಯಾಗಿವೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪಿ.ಸಿ.ಮೋಹನ್‌, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೌಮ್ಯಾರೆಡ್ಡಿ, ತುಮಕೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ವಿ.ಸೋಮಣ್ಣ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಕೆ.ಸುಧಾಕರ್‌, ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೋವಿಂದ ಕಾರಜೋಳ, ಮೈಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಟಾರ್‌ ಚಂದ್ರು ಸೇರಿದಂತೆ ಇತರರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣಾ ಅಖಾಡಕ್ಕಿಳಿಯುತ್ತಿರುವ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನದೊಂದಿಗ ನಾಮಪತ್ರ ಸಲ್ಲಿಕೆ ಮಾಡುವಲ್ಲಿ ನಿರತರಾಗಿದ್ದಾರೆ.

ಮೈಸೂರು ಮಹಾರಾಜ ಯದುವೀರ ಒಡೆಯರ ಬಳಿ 4.99 ಕೋಟಿ ಆಸ್ತಿಯಿದ್ದರೂ, ಸ್ವಂತಕ್ಕೊಂದು ಮನೆ, ಕಾರು ಇಲ್ಲ!

46 ಪುರುಷರು, ಮೂವರು ಮಹಿಳೆಯರು ಸೇರಿ 49 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಸಲ್ಲಿಕೆಯಾದ 55 ನಾಮಪತ್ರಗಳ ಪೈಕಿ 51 ಪುರುಷರ ಮತ್ತು 4 ಮಹಿಳೆಯರ ನಾಮಪತ್ರಗಳಾಗಿವೆ. ಕಾಂಗ್ರೆಸ್ 6, ಪ್ರತಿಪಕ್ಷ ಬಿಜೆಪಿ 8, ಜೆಡಿಎಸ್ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷಗಳು 20, ಪಕ್ಷೇತರು 20 ನಾಮಪತ್ರಗಳು ಸಲ್ಲಿಕೆಯಾಗಿವೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಎರಡು ನಾಮಪತ್ರಗಳು, ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಒಂದು ನಾಮಪತ್ರ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಎರಡು ನಾಮಪತ್ರಗಳು, ಚಿತ್ರದುರ್ಗ ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳಿಂದ ಐದು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಬಿಜೆಪಿಯಿಂದ ಎರಡು, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ. ತುಮಕೂರು ಕ್ಷೇತ್ರದಲ್ಲಿ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದು, ಒಂದು ಬಿಜೆಪಿ, ಒಂದು ಪಕ್ಷೇತರರಿಂದ ಸಲ್ಲಿಕೆಯಾಗಿದೆ.

Lok Sabha Election 2024: ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರ ಆಸ್ತಿ ಮೌಲ್ಯ 71 ಲಕ್ಷ

ಮಂಡ್ಯ ಕ್ಷೇತ್ರದಲ್ಲಿ ಏಳು ಅಭ್ಯರ್ಥಿಗಳಿಂದ ಒಂಭತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ ಮೂರು ಕಾಂಗ್ರೆಸ್‌, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ ಎರಡು, ಪಕ್ಷೇತರರ ನಾಲ್ಕು ನಾಮಪತ್ರಗಳಾಗಿವೆ. ಮೈಸೂರು ಕ್ಷೇತ್ರದಲ್ಲಿ ನಾಲ್ಕು ಅಭ್ಯರ್ಥಿಗಳಿಂದ ನಾಲ್ಕು ಉಮೇದುವಾರಿಕೆಯಾಗಿವೆ. ಬಿಜೆಪಿ 2, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 1, ಪಕ್ಷೇತರರು 1, ಚಾಮರಾಜನಗರ ಕ್ಷೇತ್ರದಲ್ಲಿ ನಾಲ್ಕು ಪಕ್ಷೇತರರಿಂದ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 4, ಪಕ್ಷೇತರರಿಂದ 1 ನಾಮಪತ್ರಗಳು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 1 ನಾಮಪತ್ರಗಳು, ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ನಾಲ್ವರಿಂದ ಐದು ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ 2, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 2, ಪಕ್ಷೇತರರು 1, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿಂದ ಐದು ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್‌ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 2, ಪಕ್ಷೇತರರು 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳಿಂದ 7 ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿ, ಕಾಂಗ್ರೆಸ್‌ನಿಂದ ತಲಾ 1, ಮಾನ್ಯತೆ ಪಡೆಯದ ನೋಂದಾಯಿತ ರಾಜಕೀಯ ಪಕ್ಷದಿಂದ 1, ಪಕ್ಷೇತರರಿಂದ 4 ನಾಮಪತ್ರಗಳು, ಕೋಲಾರ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳಿಂದ 2 ನಾಮಪತ್ರಗಳು ಸಲ್ಲಿಕೆಯಾಗಿವೆ. ಜೆಡಿಎಸ್‌ 1, ಪಕ್ಷೇತರರು 1 ಉಮೇದುವಾರಿಕೆ ಸಲ್ಲಿಕೆಯಾಗಿದೆ.

click me!