
ಬೆಂಗಳೂರು(ಡಿ.30): ಮೈತ್ರಿ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯು ಒಟ್ಟು 28 ಕ್ಷೇತ್ರಗಳ ಪೈಕಿ ಜೆಎಸ್ಗೆ ಮೂರರಿಂದ ನಾಲ್ಕು ಕ್ಷೇತ್ರಗಳನ್ನು ಬಿಟ್ಟು ಕೊಡುವ ನಿರೀಕ್ಷೆಯಿದೆ. ಈ ಪೈಕಿ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಬಹುತೇಕಖಚಿತವಾ ಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ ಜೆಡಿಎಸ್ ನೀಡುವ ಸಾಧ್ಯತೆಯಿದೆ. ಅದೇ ರೀತಿ ತುಮಕೂರು ಹಾಗೂ ಮೈಸೂರು ಕ್ಷೇತ್ರಗಳ ಪೈಕಿ ಒಂದು ಜೆಡಿಎಸ್ ಪಾಲಾ ಗಬಹುದು ಎನ್ನಲಾಗುತ್ತಿದೆ.
ಇದುವರೆಗೆ ಕ್ಷೇತ್ರಗಳ ಹಂಚಿಕೆ ಸಂಬಂಧ ಗಂಭೀರ ವಾಗಿ ಮಾತುಕತೆ ನಡೆದಿಲ್ಲ, ಇಂತಿಷ್ಟೇ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬ ಪಟ್ಟು ಹಿಡಿಯುವ ಮನಸ್ಥಿತಿ ಯಲ್ಲೂ ಜೆಡಿಎಸ್ ಇಲ್ಲ. ಬದಲಿಗೆ ಮುಂದೆ ದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತೊಮ್ಮೆ ಅಧಿ ಕಾರದ ಗದ್ದುಗೆ ಏರುವುದು ನಿಶ್ಚಿತ ಎಂಬ ಭಾವನೆ ಹೊಂದಿರುವ ಜೆಡಿಎಸ್ ನಾಯಕರು, ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಹೊಸ ವರ್ಷದಲ್ಲಿ ಕ್ಷೇತ್ರಗಳ ಹಂಚಿಕೆ ಬಗ್ಗೆ ಉಭಯ ಪಕ್ಷಗಳ ನಾಯಕರ ನಡುವೆ ಸಮಾಲೋಚನೆ ನಡೆಯಲಿದೆ. ಅಷ್ಟರೊಳಗಾಗಿ ಬಿಜೆಪಿ ನಾಯಕರು ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿನ ತಮ್ಮ ಸಂಘಟನೆಯನ್ನು ಒರೆಗೆ ಹಚ್ಚಿ ನೋಡಲಿದ್ದಾರೆ. ಜತೆಗೆ ಜೆಡಿಎಸ್ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಗೆಲುವು ಕೇಂದ್ರ ಸುಲಭವಾಗಲಿದೆ ಎಂಬುದರ ಮಾಹಿತಿಯನ್ನೂ ಕ್ರೋಢೀಕರಿಸಲು ಉದ್ದೇಶಿಸಿದ್ದಾರೆ.
ಮೋದಿ ಮತ್ತೆ ಪ್ರಧಾನಿಯಾಗೋದು ತಪ್ಪಿಸಲಾಗದು: ಎಚ್.ಡಿ.ದೇವೇಗೌಡ ವಿಶೇಷ ಸಂದರ್ಶನ!
ಹಾಸನ ಕ್ಷೇತ್ರದಲ್ಲಿ ಹೇಗಿದ್ದರೂ ಅಲ್ಲಿ ಸದ್ದ ಜೆಡಿಎಸ್ನ ಪ್ರಜ್ವಲ್ ರೇವಣ್ಣ ಅವರೇ ಸಂಸದರಾಗಿದ್ದಾರೆ. ಜತೆಗೆ ಪಕ್ಕದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯದೇನೂ ಇಲ್ಲ. ಅಲ್ಲಿ ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವಿದೆ. ಅಷ್ಟರ ಮಟ್ಟಿಗೆ ಈ ಎರಡು ಕ್ಷೇತ್ರಗಳು ಜೆಡಿಎಸ್ಗೆ ನೀಡುವುದು ಹೆಚ್ಚು ಕಡಮೆ ನಿರ್ಧಾರವಾಗಿದೆ. ಆದರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಪೈಕಿ ಎರಡರಲ್ಲೂ ಹಾಲಿ ಬಿಜೆಪಿ ಸಂಸದರಿದ್ದಾರೆ. ಆ ಪೈಕಿ ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲಿ ಸಂಸದ ಬಿ.ಎನ್. ಬಚ್ಚೇಗೌಡ ಅವರು ವೈಯಕ್ತಿಕ ಹಾಗೂ ವಯೋಸಹಜ ಕಾರಣದಿಂದ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಅಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಆಕಾಂಕ್ಷಿಯಾಗಿದ್ದಾರೆ. ಕೋಲಾರದಲ್ಲಿ ಪಾಲಿ ಸಂಸದ ಮುನಿಸ್ವಾಮಿ ಮತ್ತೊಮ್ಮೆ ಸ್ಪರ್ಧಿಸುವ ಉಮ್ಮೇದು ಹೊಂದಿದ್ದಾರೆ. ಈ ಎರಡೂ ಕ್ಷೇತ್ರಗಳ ಸಮೀಕ್ಷೆ ಬಳಿಕ ಒಂದನ್ನು ಜೆಡಿಎಸ್ಗೆ ಬಿಟ್ಟು ಕೊಡುವ ಸಂಭವವಿದೆ.
ಅದೇ ರೀತಿ ತುಮಕೂರು ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳ ಪೈಕಿ ಎರಡರಲ್ಲೂ ಹಾಲಿ ಬಿಜೆಪಿ ಸಂಸದರೇ ಇದ್ದಾರೆ. ಈ ಪೈಕಿ ತುಮಕೂರಿನ ಸಂಸದ ಜಿ.ಎಸ್.ಬಸವರಾಜು ಅವರುವಯೋಸಹಜ ಕಾರಣ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಅದರೆ, ಅಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದಿರುವ ಮಾಜಿ ಸಂಸದ ಮುದ್ದಹನುಮೇ ಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೇ ಇಲ್ಲಿಂದ ಸ್ಪರ್ಧಿಸಿ ಸೋಲುಂಡಿದ್ದರು. ಇನ್ನು ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಮೂರನೇ ಬಾರಿ ಸ್ಪರ್ಧೆಗಿಳಿಯಲು ಸಜ್ಜಾಗಿದ್ದಾರೆ. ಇವೆರಡರಪೈಕಿ ಯಾವುದನ್ನು ಜೆಡಿಎಸ್ಗೆ ಬಿಟ್ಟುಕೊಡ ಬಹುದು ಎಂಬುದು ಕುತೂಹಲಕರವಾಗಿದೆ.
ಇದೆಲ್ಲದರ ನಡುವೆ ಉತ್ತರ ಕರ್ನಾಟಕದ ರಾಯಚೂರು ಕ್ಷೇತ್ರದ ಬಗ್ಗೆಯೂ ಜೆಡಿಎಸ್ ಒಲವು ಹೊಂದಿದೆ. ಅಲ್ಲಿಯೂ ಕೂಡ ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಮತ್ತೊಮ್ಮೆ ಕಣಕ್ಕಿಳಿಯುವ ಸಿದ್ಧತೆಯಲ್ಲಿರುವುದರಿಂದ ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.