
ಹುಬ್ಬಳ್ಳಿ (ಜೂ.25): ವಿಧಾನ ಪರಿಷತ್ ಸಭಾಪತಿ ಮಾಡುವುದು, ಸಚಿವ ಸ್ಥಾನವನ್ನೇ ಕೊಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟವಿಚಾರ. ಹಾಗೆ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ನಾನು ಸಿದ್ಧ ಎಂದು ಮಾಜಿ ಸಿಎಂ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು. ವಿಧಾನ ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರು, ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ನನಗೆ ಹೆಚ್ಚಿನ ಸ್ಥಾನಮಾನ ಕೊಡುವ ಭರವಸೆ ನೀಡಿದೆ.
ಸಭಾಪತಿ, ಸಚಿವ ಸ್ಥಾನ ಯಾವುದು ಅನ್ನೋದು ಪ್ರಸ್ತಾಪವಾಗಿಲ್ಲ ಎಂದರು. ಸೆಕೆಂಡ್ ಇನ್ನಿಂಗ್ಸ್: ಪರಿಷತ್ನಲ್ಲಿ ಸದಸ್ಯನಾಗಿ ಕೆಲಸ ಮಾಡುವುದಕ್ಕೆ ಅವಕಾಶ ಲಭಿಸಿದೆ. ರಾಜಕೀಯವಾಗಿ ಎರಡನೆಯ ಇನ್ನಿಂಗ್ಸ್ ಆರಂಭವಾದಂತಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಇದೊಂದು ಹೊಸ ಅಧ್ಯಾಯ ಎಂದ ಅವರು, ಹೊಸ ಮನ್ವಂತರಕ್ಕೆ ಕಾರಣರಾದ ಕಾಂಗ್ರೆಸ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಹಾವೇರಿ ಸಂಸತ್ ಟಿಕೆಟ್ಗೆ ಪುತ್ರ ಆಕಾಂಕ್ಷಿ: ಕೆ.ಎಸ್.ಈಶ್ವರಪ್ಪ
ರಾಜ್ಯಾದ್ಯಂತ ಪ್ರವಾಸ: ಲೋಕಸಭಾ ಚುನಾವಣೆಯ ವಿಚಾರವಾಗಿ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದೇನೆ. ಹೆಚ್ಚಿನ ಸ್ಥಾನ ಗೆಲ್ಲಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಉತ್ತರ ಕರ್ನಾಟಕ ಭಾಗದ 11 ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ. ಪಕ್ಷವು ನನ್ನ ಅನುಭವ ಬಳಸಿಕೊಳ್ಳಲಿದೆ ಎಂದರು. ಬಿಜೆಪಿಯಲ್ಲಿ ಬೇಗುದಿ:ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ಪಕ್ಷ ನಾಯಕರನ್ನು ಸೆಳೆಯುತ್ತಿಲ್ಲ, ಆಂತರಿಕ ಬೇಗುದಿಯಲ್ಲಿ ಬೇಯುತ್ತಿದೆ. ಅದು ಯಾವಾಗ ಸ್ಫೋಟ ವಾಗುತ್ತದೆಯೋ ಗೊತ್ತಿಲ್ಲ. ನಾವು ಯಾರನ್ನೂ ಸೆಳೆಯುವ ಕೆಲಸ ಮಾಡುತ್ತಿಲ್ಲ. ಅಲ್ಲಿನ ಅತೃಪ್ತಿ ಕಾರಣಕ್ಕೆ ಕೆಲವರು ಕಾಂಗ್ರೆಸ್ಸಿಗೆ ಬಂದರೆ ಅಚ್ಚರಿಯಿಲ್ಲ ಎಂದರು.
ಕಟೀಲ್ ರಾಜೀನಾಮೆ, ಆ ಪಕ್ಷದ ಆಂತರಿಕ ನಿರ್ಧಾರ: ಬಿಜೆಪಿ ಸೋಲಿಗೆ ಸ್ವಯಂಕೃತ ಅಪರಾಧವೇ ಕಾರಣ ಎಂದು ಮಾಜಿ ಸಿಎಂ, ವಿಧಾನಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು. ನಳಿನಕುಮಾರ ಕಟೀಲ್ ರಾಜೀನಾಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಆ ಪಕ್ಷದ ಆಂತರಿಕ ವಿಚಾರ. ಆ ಬಗ್ಗೆ ನಾನೇನು ಮಾತನಾಡಲಿ. ನಾನು ಈ ಹಿಂದೆ ಏನೇನು ಹೇಳಿದ್ದೇನೋ ಅದೆಲ್ಲವೂ ಈಗ ನಿಜವಾಗುತ್ತಿದೆ. ಸೋಲಿಗೆ ಯಾರು ಕಾರಣ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.
ಗ್ರಾಪಂ ಮಟ್ಟದಲ್ಲಿ ಕೃಷಿ ಸಂಸ್ಕರಣೆ ಘಟಕ ಸ್ಥಾಪನೆಗೆ ಚಿಂತನೆ: ಸಚಿವ ಚಲುವರಾಯಸ್ವಾಮಿ
ಬಿಜೆಪಿಯ ಅಡಿಪಾಯವೇ ಡಿಸ್ಟರ್ಬ್ ಆಗಿ ಕುಸಿದು ಹೋಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಇದರ ಪರಿಣಾಮ ಬೀರಲಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದರು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಮ್ಮ ಜತೆ ಯಾವುದೇ ಚರ್ಚೆ ಮಾಡಿಲ್ಲ. ಅವರ ಮನಸ್ಸಿನಲ್ಲಿ ಏನಿದೆ ಗೊತ್ತಿಲ್ಲ. ಅವರು ಕಾಂಗ್ರೆಸ್ಸಿಗೆ ಬರುವ ಬಗ್ಗೆ ಚರ್ಚೆ ಆಗಿಲ್ಲ. ನಾನು ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.