
ಬೆಂಗಳೂರು (ಜೂ.25): ರಾಜ್ಯ ಸರ್ಕಾರವು ಹೈಕೋರ್ಟ್ ಆದೇಶ ಪಾಲನೆ ಜತೆಗೆ ಡಿಸೆಂಬರ್ ಅಂತ್ಯದೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ಬದ್ಧವಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಬಿಜೆಪಿ ಸರ್ಕಾರವಿದ್ದಾಗಲೇ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷದವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಬಿಜೆಪಿಯವರು ತಮಗೆ ಬಂದಂತೆ ವಾರ್ಡ್ ವಿಂಗಡಣೆ ಮಾಡಿದ್ದರು. ಈಗ ನಾವು ವಾರ್ಡ್ ಮರು ವಿಂಗಡಣೆಯಲ್ಲಿನ ಲೋಪ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ವಾರ್ಡ್ ಮರುವಿಂಗಡಣೆಯಲ್ಲಿನ ಲೋಪ ಸರಿಪಡಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ವಾರ್ಡ್ ಮರು ವಿಂಗಡಣೆ ವಿಚಾರವಾಗಿ ಸಮಿತಿಗೆ ಎಲ್ಲ ಅಧಿಕಾರ ನೀಡಲಾಗಿದೆ. ಶಾಸಕರ ಜತೆಗೂ ಸಭೆ ನಡೆಸದೆ, ಅಧಿಕಾರಿಗಳೇ ಸಮರ್ಪಕವಾಗಿ ವಾರ್ಡ್ ಮರು ವಿಂಗಡಣೆ ಮಾಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.
Shakti Scheme: ತೀರ್ಥಕ್ಷೇತ್ರಗಳಲ್ಲಿ ಮತ್ತೆ ವೀಕೆಂಡ್ ರಶ್: ಬಸ್ಗಳಲ್ಲಿ ಭಾರಿ ಜನ
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ಸರಿಯಾದ ಸಮಯದಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲಾಗಿದೆ. ಸದ್ಯ ವಾರ್ಡ್ ಮರು ವಿಂಗಡಣೆಯಲ್ಲಿನ ಲೋಪ ಸರಿಪಡಿಸಿ, ನ್ಯಾಯಾಲಯದ ಅನುಮತಿ ಪಡೆದು ಚುನಾವಣೆ ನಡೆಸಲಾಗುವುದು. ಬಿಬಿಎಂಪಿ ಕಾಯ್ದೆಯಂತೆ ರಚನೆಯಾಗಿರುವ 243 ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ. ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯಿಂದ ಬಿಬಿಎಂಪಿ ಚುನಾವಣೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬೆಂಗಳೂರಿನ ಬ್ರ್ಯಾಂಡ್ ಮೌಲ್ಯ ಹೆಚ್ಚಳಕ್ಕಾಗಿ ಸಮಿತಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಒಂದೇ ಬಾರಿ ಬಸ್ಸಿಗೆ ಮುಗಿಬೀಳಬೇಡಿ: ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಡಿ ಮಹಿಳೆಯರು ಏಕಾಏಕಿ ಧಾರ್ಮಿಕ ಕೇಂದ್ರಗಳಿಗೆ ತೆರಳಿದ ಕಾರಣ ಉಂಟಾದ ಸಮಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ಒಂದೇ ಬಾರಿಗೆ ತೆರಳುವುದು ಬೇಡ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಕ್ತಿ ಯೋಜನೆಯು ಐದು ವರ್ಷ ಜಾರಿಯಲ್ಲಿರಲಿದೆ.
ಆರಾಮವಾಗಿ ಮಹಿಳೆಯರು ಪ್ರಯಾಣಿಸಬಹುದು. ಯಾವುದೇ ಆತಂಕ ಬೇಡ. ಒಂದೇ ಬಾರಿಗೆ ತೆರಳುವುದರಿಂದ ಇತರ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಮುಂದಿನ 15 ದಿನಗಳ ಕಾಲ ಬೆಳವಣಿಗೆಗಳನ್ನು ಗಮನಿಸಿ ಅಗತ್ಯವೆನಿಸಿದರೆ ಕೆಲವು ಬದಲಾವಣೆಗಳನ್ನು ಮಾಡಲಾಗುವುದು ಎಂದು ಹೇಳಿದರು. ಜೂ.11ರಂದು 5.70 ಲಕ್ಷ ಜನ ಪ್ರಯಾಣಿಸಿದ್ದಾರೆ. ನಂತರ 40 ಲಕ್ಷ ಜನ, ತದನಂತರ ಮೂರು ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಆದರೆ, ಒಮ್ಮೆಲೆ ಹೋಗುವುದು ಬೇಡ.
ನನ್ನ ಅವಧಿ ಮುಗಿದಿದೆ, ಇನ್ನು ವರಿಷ್ಠರ ತೀರ್ಮಾನ: ನಳಿನ್ ಕುಮಾರ್ ಕಟೀಲ್
ದೇವಸ್ಥಾನಕ್ಕೆ ತೆರಳಲು ಒಂದೇ ಸಲ ಬಂದಿದ್ದರಿಂದ ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮುಂದಿನ ಐದು ವರ್ಷದ ಬಳಿಕ ಚುನಾವಣೆ ನಡೆದ ನಂತರವೂ ಇನ್ನೂ 10 ವರ್ಷ ಕಾರ್ಯಕ್ರಮ ಇರಲಿದೆ. ಕೆಲವು ಬಿಜೆಪಿಗರು ಅನಗತ್ಯವಾಗಿ ಪ್ರಚೋದನೆ ಮಾಡುತ್ತಿದ್ದು, ಸುಳ್ಳು ಹೇಳಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದೇ ದಿನದ ಬದಲಾಗಿ ಬೇರೆ ಬೇರೆ ದಿನ ಪ್ರಯಾನ ಮಾಡುವುದು ಒಳ್ಳೆಯದು. ಒಮ್ಮೆಲೆ ಪ್ರಯಾಣ ಮಾಡುವುದರಿಂದ ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ಸಮಸ್ಯೆಯಾಗಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.