Vidhan Parishat Election| ಸಿದ್ಧವಾದ ಚುನಾವಣಾ ಅಖಾಡ: ಕಡೆ ದಿನ ನಾಮಪತ್ರಗಳ ಭರಾಟೆ..!

Kannadaprabha News   | Asianet News
Published : Nov 24, 2021, 08:19 AM IST
Vidhan Parishat Election| ಸಿದ್ಧವಾದ ಚುನಾವಣಾ ಅಖಾಡ: ಕಡೆ ದಿನ ನಾಮಪತ್ರಗಳ ಭರಾಟೆ..!

ಸಾರಾಂಶ

*   ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ *   ಜೆಡಿಎಸ್‌ನಿಂದ ಏಳು ಅಭ್ಯರ್ಥಿಗಳು ಕಣಕ್ಕೆ: ಕಡೆ ದಿನ ಘೋಷಣೆ *   ಬೆಳಗಾವಿ ಪಕ್ಷೇತರ ಅಭ್ಯರ್ಥಿಯಾಗಿ ಲಖನ್‌ ನಾಮಪತ್ರ  

ಬೆಂಗಳೂರು(ನ.24):  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ(Vidhan Parishat) 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ(Election) ಮಂಗಳವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 121 ಅಭ್ಯರ್ಥಿಗಳಿಂದ 215 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಮೂಲಕ ಚುನಾವಣಾ ಅಖಾಡ ಬಹುತೇಕ ಸಿದ್ಧವಾದಂತಾಗಿದೆ.

ಚುನಾವಣೆಯಲ್ಲಿ ಬಿಜೆಪಿ(BJP) 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್‌(Congress) 20 ಮತ್ತು ಜೆಡಿಎಸ್‌(JDS) 7 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಹಲವೆಡೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ.
ಉಮೇದುವಾರಿಕೆ(Nomination) ಸಲ್ಲಿಸಿರುವ 121 ಅಭ್ಯರ್ಥಿಗಳ ಪೈಕಿ 119 ಪುರುಷರು ಮತ್ತು ಇಬ್ಬರು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 215 ನಾಮಪತ್ರಗಳ ಪೈಕಿ ಆಡಳಿತಾರೂಢ ಬಿಜೆಪಿ 57, ಪ್ರತಿಪಕ್ಷ ಕಾಂಗ್ರೆಸ್‌ 56, ಜೆಡಿಎಸ್‌ 17, ಇತರೆ ಪಕ್ಷಗಳು 17 ಮತ್ತು ಪಕ್ಷೇತರರಿಂದ 68 ನಾಮಪತ್ರಗಳು ಸಲ್ಲಿಕೆಯಾಗಿವೆ. ಧಾರವಾಡದಲ್ಲಿ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿದ್ದು, 24 ಉಮೇದುವಾರಿಕೆ ಮಾಡಲಾಗಿದೆ. ವಿಜಯಪುರ ಮತ್ತು ಬೆಳಗಾವಿಯಲ್ಲಿ ತಲಾ 19 ನಾಮಪತ್ರಗಳನ್ನು ಸಲ್ಲಿಸಲಾಗಿದೆ.

Council Election: ಎಂಟಿಬಿಗಿಂತಲೂ ಶ್ರೀಮಂತ ಕೈ ಅಭ್ಯರ್ಥಿ, ಗುಜರಿ ವ್ಯಾಪಾರಿ ಕೋಟಿ ಕೋಟಿ ಅಧಿಪತಿ

ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನ.26ರಂದು ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನವಾಗಿದೆ. ತದನಂತರ ಅಖಾಡದಲ್ಲಿರುವ ಅಭ್ಯರ್ಥಿಗಳ(Candidates) ನಿಖರವಾದ ಮಾಹಿತಿ ಲಭ್ಯವಾಗಲಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಮತದಾನ(Vote) ನಡೆಯಲಿದೆ. ಡಿ.14ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಎಲ್ಲಾ ಪಕ್ಷಗಳ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರದಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬುಧವಾರದಿಂದ ಪ್ರಚಾರದ(Campaign) ಭರಾಟೆಯು ಹೆಚ್ಚಾಗಲಿದೆ. ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲು ಮೂರೂ ಪಕ್ಷಗಳ ನಾಯಕರು ತೊಡಗಿಸಿಕೊಳ್ಳಲಿದ್ದಾರೆ.

ಬೆಳಗಾವಿ ಪಕ್ಷೇತರ ಅಭ್ಯರ್ಥಿಯಾಗಿ ಲಖನ್‌ ನಾಮಪತ್ರ

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ(Ramesh Jarkiholi) ಸಹೋದರ ಲಖನ್‌ ಜಾರಕಿಹೊಳಿ(Lakhan Jarkiholi) ಬೆಳಗಾವಿ(Belagavi) ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.

‘ಕೈ’ನಿಂದ ಪುತ್ರ ಕಣಕ್ಕೆ: ಬಿಜೆಪಿ ಹುದ್ದೆಗಳಿಂದ ಎ.ಮಂಜುಗೆ ಕೊಕ್‌

ಬೆಂಗಳೂರು: ಕೊಡಗು ವಿಧಾನಪರಿಷತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ಎ.ಮಂಜು ಪುತ್ರ ಮಂಥರ್‌ಗೌಡ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಜವಾಬ್ದಾರಿಗಳನ್ನು ಮಂಜು ಅವರಿಂದ ಬಿಜೆಪಿ ಹಿಂಪಡೆದಿದೆ.

Kannada Sahitya Parishat election: ಜೋಶಿ ವಿರುದ್ಧ ಕೆಲಸ ಮಾಡಿದ ಮುಖಂಡ ಬಿಜೆಪಿಯಿಂದ ಅಮಾನತು

ಜೆಡಿಎಸ್‌ನಿಂದ ಏಳು ಅಭ್ಯರ್ಥಿಗಳು ಕಣಕ್ಕೆ: ಕಡೆ ದಿನ ಘೋಷಣೆ

ಬೆಂಗಳೂರು: ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಜೆಡಿಎಸ್‌ 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೈಸೂರಿನಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆಪ್ತ ಮಂಜೇಗೌಡ, ಬೆಂಗಳೂರು ಗ್ರಾಮಾಂತರದಿಂದ ಹಾಲಿ ಎಂಎಲ್‌ಸಿ(MLC) ಎಚ್‌.ಎಂ. ರಮೇಶ್‌ಗೌಡಗೆ ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ ನಾಯಕರು ಒಗ್ಗಟ್ಟಾಗಿ ನನ್ನ ಗೆಲುವಿಗೆ ಶ್ರಮಿಸುವರು!

ಬಳ್ಳಾರಿ: ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಯಾವುದೇ ಗುಂಪುಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಪಕ್ಷದ ಎಲ್ಲ ನಾಯಕರು ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಧಾನಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಕೆ.ಸಿ. ಕೊಂಡಯ್ಯ(KC Kondaiah) ಭರವಸೆ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಪಕ್ಷದ ಹೈಕಮಾಂಡ್‌ ನನ್ನನ್ನು ವಿಧಾನಪರಿಷತ್‌ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ರಾಜ್ಯ ಹಾಗೂ ಸ್ಥಳೀಯ ಎಲ್ಲ ನಾಯಕರು ಅಂತಿಮವಾಗಿ ನನ್ನ ಹೆಸರು ಶಿಫಾರಸು ಮಾಡಿದ್ದರಿಂದ ಟಿಕೆಟ್‌ ಸಿಗಲು ಸಾಧ್ಯವಾಯಿತು.

ಈ ಚುನಾವಣೆಯ ಮತದಾರರಲ್ಲಿ ಶೇ. 95ರಷ್ಟುಹೊಸಬರು. ಯುವಕರಾಗಿದ್ದಾರೆ. ಅರ್ಧದಷ್ಟುಜನರು ವಿದ್ಯಾವಂತರಿದ್ದಾರೆ. ಅವರ ಹಕ್ಕುಗಳು ಏನು? ಅಧಿಕಾರ ಏನು ಎಂಬುದರ ಕುರಿತು ಅವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿರುವೆ. ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು. ಚುನಾಯಿತ ಪ್ರತಿನಿಧಿಗಳ ಪ್ರತಿನಿಧಿಯ ಆಯ್ಕೆ ಪ್ರಕ್ರಿಯೆ ಇದಾಗಿದ್ದು, ಗೆಲ್ಲುವ ವಿಶ್ವಾಸ ನನಗಿದೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್