Bharat Jodo Yatra: ಅ. 23ರವರೆಗೆ ಕರ್ನಾಟಕದಲ್ಲಿ 21 ದಿನ ಭಾರತ ಐಕ್ಯತಾ ಯಾತ್ರೆ: ಧ್ರುವನಾರಾಯಣ

By Kannadaprabha NewsFirst Published Sep 28, 2022, 2:00 AM IST
Highlights

ಭಾರತ ಐಕ್ಯತಾ ಯಾತ್ರೆ 30ರಂದು ತಮಿಳುನಾಡಿನ ಗೂಡ್ಲುರಿನಿಂದ ಬೆಳಗ್ಗೆ 9ಕ್ಕೆ ಗುಂಡ್ಲುಪೇಟೆ ಪ್ರವೇಶ 

ಚಾಮರಾಜನಗರ(ಸೆ. 28):  ಅ.30 ರಿಂದ ಅ 23ರವರೆಗೆ ರಾಜ್ಯದಲ್ಲಿ 21 ದಿನ ಭಾರತ ಐಕ್ಯತಾ ಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ತಿಳಿಸಿದರು. ಭಾರತ ಐಕ್ಯತಾ ಯಾತ್ರೆ 30ರಂದು ತಮಿಳುನಾಡಿನ ಗೂಡ್ಲುರಿನಿಂದ ಬೆಳಗ್ಗೆ 9ಕ್ಕೆ ಗುಂಡ್ಲುಪೇಟೆ ಪ್ರವೇಶಿಸಲಿದ್ದು, ಅಂಬೇಡ್ಕರ್‌ ಭವನದ ಎದುರುಗಡೆ ಸ್ವಾಗತಿಸಲಾಗುವುದು. ರಾಜ್ಯದ ಮೊದಲ ದಿನದ ಕಾರ್ಯಕ್ರಮ ಗುಂಡ್ಲುಪೇಟೆಯಿಂದ ಆರಂಭವಾಗಲಿದ್ದು, ಸೋಲಿಗರ ಗೊರುಕಾನ ಕುಣಿತ, ಗೊರವರ ಕುಣಿತ, ಡೊಳ್ಳುಕುಣಿತ, ವೀರಗಾಸೆ ವಿವಿಧ ಕಲಾ ತಂಡಗಳು ಸ್ವಾಗತಿಸಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ, ಐಕ್ಯತಾ ಯಾತ್ರೆ ದೇಶದ ಉಸ್ತುವಾರಿ ದಿಗ್ವಿಜಯ್‌ಸಿಂಗ್‌, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಹರಿಪ್ರಸಾದ್‌, ಕೆ.ಎಚ್‌. ಮುನಿಯಪ್ಪ, ರೆಹಮಾನ್‌ಖಾನ್‌ ಭಾಗವಹಿಸಲಿದ್ದಾರೆ. ಗುಂಡ್ಲುಪೇಟೆಯ ಶನೇಶ್ವರ ದೇವಸ್ಥಾನದ ಮುಂಭಾಗದಿಂದ ಬೇಗೂರಿನ ತೊಂಡವಾಡಿ ತನಕ ರಾಹುಲ್‌ಗಾಂಧಿ ಭಾರತ ಐಕ್ಯತಾ ಯಾತ್ರೆ ಅಂಗವಾಗಿ ಪಾದಯಾತ್ರೆ ನಡೆಸಲಿದ್ದಾರೆ.

ಭಾರತ ಜೋಡೋ ಯಾತ್ರೆಯನ್ನು ವಿಭಜಿಸುವ ಯತ್ನ: BJP - RSS ವಿರುದ್ಧ Rahul Gandhi ವಾಗ್ದಾಳಿ

ಯಾತ್ರೆಯಲ್ಲಿ ಜಿಲ್ಲೆಯ 50 ಸಾವಿರ ಮಂದಿ ಕಾರ್ಯಕರ್ತರು ರಾಹುಲ್‌ಗಾಂಧಿ ಅವರೊಂದಿಗೆ ಹೆಜ್ಜೆಯಾಕಲಿದ್ದಾರೆ. ಬೆಂಗಳೂರು ದಕ್ಷಿಣ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರು ಸಹ ಭಾಗವಹಿಸಲಿದ್ದಾರೆ.ಮಧ್ಯಾಹ್ನ ಜಿಲ್ಲೆಯ ಬುಡಕಟ್ಟು ಜನಾಂಗ, ಆಕ್ಸಿಜನ್‌ ದುರಂತದಲ್ಲಿ ಮೃತರಾದವರ ಕುಟುಂಬದವರ ಜೊತೆ ಸಂವಾದ ನಡೆಸಲಿದ್ದಾರೆ.

ಅ. 1ರಂದು ತೊಂಡವಾಡಿಗೇಟ್‌ನಿಂದ 6. 30ಕ್ಕೆ ಪಾದಯಾತ್ರೆ ಆರಂಭವಾಗಲಿದ್ದು, ಕಳಲೆಗೇಟ್‌ನಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸುವರು. ನಂತರ ಚಿಕ್ಕಯ್ಯನಛತ್ರದವರಗೆ ಪಾದಯಾತ್ರೆ ನಡೆಸಿ, ವಾಸ್ತವ್ಯ ಹೂಡಲಿದ್ದಾರೆ. 1927ರಲ್ಲಿ ಬದನವಾಳಿಗೆ ಮಹಾತ್ಮ ಗಾಂಧಿಜಿ ಭೇಟಿ ನೀಡಿದ್ದ ನೆನಪಿಗೆ ಅ. 2ರಂದು ಗಾಂಧಿ ಜಯಂತಿ ಆಚರಣೆಯನ್ನು ಭಜನೆ ಮೂಲಕ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಸ್‌. ಜಯಣ್ಣ, ಎಸ್‌. ಬಾಲರಾಜು, ಡಿಸಿಸಿ ಅಧ್ಯಕ್ಷ ಪಿ. ಮರಿಸ್ವಾಮಿ, ಯುವ ಮುಖಂಡ ಎಚ್‌.ಎಂ. ಗಣೇಶ್‌ ಪ್ರಸಾದ್‌ ಇದ್ದರು.
 

click me!