ಕಾಂಗ್ರೆಸ್ ಗೆ ಕೈ ಕೊಡ್ತಾರ 11 ಶಾಸಕರು ..? ಇಬ್ಬರು ಬಿಜೆಪಿ ತೆಕ್ಕೆಗೆ

By Web DeskFirst Published Jan 19, 2019, 7:10 AM IST
Highlights

ಕರ್ನಾ​ಟಕ ರಾಜ​ಕೀಯ ವಿಪ್ಲವ ಮಹ​ತ್ವದ ತಿರು​ವು ಪಡೆ​ದಿದೆ. ಒಗ್ಗಟ್ಟು ಪ್ರದ​ರ್ಶಿ​ಸಲು ಕಾಂಗ್ರೆಸ್‌ ಆಯೋ​ಜಿ​ಸಿದ್ದ ಶಾಸ​ಕಾಂಗ ಪಕ್ಷದ ಸಭೆಗೆ ನಾಲ್ವರು ಅತೃಪ್ತ ಶಾಸ​ಕರು ಗೈರು ಹಾಜ​ರಾದರು. ಅಷ್ಟೇ ಅಲ್ಲ, ಸಭೆಗೆ ಹಾಜ​ರಾದ ಅತೃ​ಪ್ತರ ಪೈಕಿ ಐವರು ಮತ್ತೆ ಬಿಜೆ​ಪಿಯ ತೆಕ್ಕೆಗೆ ಹಾರುವ ಭೀತಿ ತೀವ್ರ​ವಾಗಿ ಕಾಡಿದೆ.

ಬೆಂಗ​ಳೂರು :  ದಿನೇ ದಿನೇ ರೋಚಕವಾಗುತ್ತಿರುವ ಕರ್ನಾ​ಟಕ ರಾಜ​ಕೀಯ ವಿಪ್ಲವ ಶುಕ್ರ​ವಾರ ಮಹ​ತ್ವದ ತಿರು​ವು ಪಡೆ​ದಿದ್ದು, ಬಿಜೆಪಿ ಶಾಸ​ಕರ ರೆಸಾ​ರ್ಟ್‌ ವಾಸ್ತ​ವ್ಯಕ್ಕೆ ಪ್ರತಿ​ಯಾಗಿ ಕಾಂಗ್ರೆಸ್‌ ಕೂಡ ರೆಸಾ​ರ್ಟ್‌ ರಾಜ​ಕಾ​ರ​ಣಕ್ಕೆ ಶರ​ಣಾ​ಗಿದೆ. ಒಗ್ಗಟ್ಟು ಪ್ರದ​ರ್ಶಿ​ಸಲು ಕಾಂಗ್ರೆಸ್‌ ಆಯೋ​ಜಿ​ಸಿದ್ದ ಶಾಸ​ಕಾಂಗ ಪಕ್ಷದ ಸಭೆಗೆ ನಾಲ್ವರು ಅತೃಪ್ತ ಶಾಸ​ಕರು ಗೈರು ಹಾಜ​ರಾದರು. ಅಷ್ಟೇ ಅಲ್ಲ, ಸಭೆಗೆ ಹಾಜ​ರಾದ ಅತೃ​ಪ್ತರ ಪೈಕಿ ಐವರು ಮತ್ತೆ ಬಿಜೆ​ಪಿಯ ತೆಕ್ಕೆಗೆ ಹಾರುವ ಭೀತಿ ತೀವ್ರ​ವಾಗಿ ಕಾಡಿದ ಹಿನ್ನೆ​ಲೆ​ಯಲ್ಲಿ ಕಾಂಗ್ರೆಸ್‌ ನಾಯ​ಕರು ಈ ರೆಸಾ​ರ್ಟ್‌ ವಾಸ್ತ​ವ್ಯಕ್ಕೆ ಮುಂದಾ​ಗಿ​ದ್ದಾ​ರೆ.

ತನ್ಮೂ​ಲಕ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆ ಆಪ​ರೇ​ಷನ್‌ ಕಮಲ ಪ್ರಹ​ಸ​ನಕ್ಕೆ ಇತಿಶ್ರೀ ಹಾಡು​ತ್ತದೆ ಎಂಬ ನಿರೀಕ್ಷೆ ಸಂಪೂರ್ಣ ಹುಸಿ​ಹೋ​ಗಿದೆ. ಅಷ್ಟೇ ಅಲ್ಲ, ಆಪ​ರೇ​ಷನ್‌ ಕಮಲ ಕಮ​ರಿದೆ ಎಂಬುದು ಸಂಪೂರ್ಣ ಸತ್ಯ​ವಲ್ಲ. ಸಮ್ಮಿಶ್ರ ಸರ್ಕಾ​ರ​ವನ್ನು ಅಸ್ಥಿ​ರ​ಗೊ​ಳಿ​ಸುವ ಕಾರ್ಯ​ತಂತ್ರ ಇನ್ನು ಗುಪ್ತ​ಗಾ​ಮಿ​ನಿ​ಯಾಗಿದೆ ಎಂಬ ಭಾವವನ್ನು ಸಾರ್ವ​ತ್ರಿ​ಕ​ವಾಗಿ ಬಿತ್ತಿದೆ.

ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ನೇತೃ​ತ್ವ​ದಲ್ಲಿ ಶುಕ್ರ​ವಾರ ಮಧ್ಯಾಹ್ನ 3.30ಕ್ಕೆ ಆಯೋ​ಜ​ನೆ​ಯಾ​ಗಿದ್ದ ಕಾಂಗ್ರೆಸ್‌ ಶಾಸ​ಕಾಂಗ ಸಭೆ ಶಾಸ​ಕರ ಆಗ​ಮ​ನದ ವಿಳಂಬ​ದಿಂದಾಗಿ ಸಂಜೆ ಐದಕ್ಕೆ ಆರಂಭ​ವಾ​ಯಿತು. ಈ ಸಭೆ​ಯಲ್ಲಿ ಪಕ್ಷದ 80 ಶಾಸ​ಕರ ಪೈಕಿ 76 ಮಂದಿ ಪಾಲ್ಗೊಂಡರು. ಶಾಸ​ಕಾಂಗ ಪಕ್ಷದ ಸಭೆಗೆ ಗೈರು ಹಾಜ​ರಾ​ದರೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊ​ಳ್ಳುವ ಸ್ಪಷ್ಟಎಚ್ಚ​ರಿ​ಕೆ​ಯನ್ನು ನೀಡ​ಲಾ​ಗಿ​ದ್ದರೂ ಗೋಕಾಕ್‌ ಶಾಸಕ ರಮೇಶ್‌ ಜಾರ​ಕಿ​ಹೊಳಿ, ಚಿಂಚೋಳಿ ಶಾಸಕ ಉಮೇಶ್‌ ಜಾಧವ್‌, ಅಥಣಿ ಶಾಸಕ ಮಹೇಶ್‌ ಕುಮ​ಟಳ್ಳಿ ಮತ್ತು ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರು ಗೈರು ಹಾಜ​ರಾ​ದ​ರು.

ಈ ಪೈಕಿ ಉಮೇಶ್‌ ಜಾಧವ್‌ ಅವರು ಅನಾ​ರೋ​ಗ್ಯದ ಕಾರಣ ತಾವು ಸಭೆಗೆ ಹಾಜ​ರಾ​ಗು​ವು​ದಿಲ್ಲ ಎಂದು ಫ್ಯಾಕ್ಸ್‌ ಸಂದೇ​ಶ​ವನ್ನು ಕಾಂಗ್ರೆಸ್‌ ನಾಯ​ಕ​ರಿಗೆ ರವಾ​ನಿ​ಸಿ​ದ್ದರೆ, ಬಿ. ನಾಗೇಂದ್ರ ಅವರು ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಅವ​ರಿಗೆ ದೂರ​ವಾಣಿ ಕರೆ ಮಾಡಿ ನ್ಯಾಯಾ​ಲ​ಯ​ದಲ್ಲಿ ತಮ್ಮ ವಿರುದ್ಧದ ಪ್ರಕ​ರ​ಣ​ಗಳಿಗೆ ಸಂಬಂಧಿ​ಸಿ​ದಂತೆ ತಾವು ವ್ಯಸ್ತರಾ​ಗಿದ್ದು, ಸಭೆಗೆ ಹಾಜ​ರಾ​ಗು​ವು​ದಿಲ್ಲ ಎಂಬ ಮಾಹಿತಿಯನ್ನು ನೀಡಿ​ದ್ದಾರೆ. ಆದರೆ, ಉಳಿದ ಇಬ್ಬರು ಶಾಸ​ಕ​ರಾದ ರಮೇಶ್‌ ಜಾರ​ಕಿ​ಹೊಳಿ ಹಾಗೂ ಮಹೇಶ್‌ ಕುಮ​ಟಳ್ಳಿ ಅವರು ತಮ್ಮ ಗೈರು ಹಾಜ​ರಾತಿ ಬಗ್ಗೆ ನಾಯ​ಕ​ರಿಗೆ ಯಾವುದೇ ಮಾಹಿ​ತಿ​ಯನ್ನು ನೀಡದೇ ಸ್ಪಷ್ಟ​ವಾಗಿ ಬಂಡಾ​ಯದ ಬಾವುಟ ಹಾರಿ​ಸಿ​ದ್ದಾ​ರೆ.

ಈ ಹಿನ್ನೆ​ಲೆ​ಯಲ್ಲಿ ಕಾಂಗ್ರೆಸ್‌ ನಾಯ​ಕತ್ವವು ತನ್ನ ಎಲ್ಲಾ ಶಾಸ​ಕ​ರನ್ನು ಬಿಡದಿ ಬಳಿಯ ಈಗಲ್‌ಟನ್‌ ರೆಸಾ​ರ್ಟ್‌ಗೆ ಸ್ಥಳಾಂತ​ರಿ​ಸಲು ತೀರ್ಮಾ​ನಿ​ಸಿದ್ದು, ಶಾಸ​ಕಾಂಗ ಪಕ್ಷದ ಸಭೆ​ಯಿಂದ ನೇರ​ವಾಗಿ ಶಾಸ​ಕ​ರನ್ನು ರೆಸಾ​ರ್ಟ್‌ ಸಾಗಿ​ಸಲು ಮುಂದಾ​ಗಿ​ಯಿತು. ಇದಕ್ಕೆ ಶಾಸ​ಕಾಂಗ ಪಕ್ಷದ ಸಭೆಗೆ ಹಾಜ​ರಾ​ಗಿದ್ದ ಅತೃ​ಪ್ತರ ಪೈಕಿ ವಿಜ​ಯ​ನ​ಗರ ಶಾಸಕ ಆನಂದ್‌​ ಸಿಂಗ್‌, ಕಾಗ​ವಾಡ ಶಾಸಕ ಶ್ರೀಮಂತ ಪಾಟೀಲ್‌, ಮಸ್ಕಿ ಶಾಸಕ ಪ್ರತಾ​ಪ​ ಗೌಡ ಪಾಟೀಲ್‌, ರಾಯ​ಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಮತ್ತು ಕಂಪ್ಲಿ ಜೆ.ಎನ್‌. ಗಣೇಶ್‌ ಸೇರಿ​ದಂತೆ ಕೆಲ​ವರು ಸಭೆಯ ನಂತರ ಮತ್ತೆ ಬಿಜೆ​ಪಿಯ ತೆಕ್ಕೆಗೆ ಹಿಂತಿ​ರು​ಗು​ತ್ತಾರೆ ಹಾಗೂ ಕೆಲವೇ ದಿನ​ಗ​ಳಲ್ಲಿ ರಾಜೀ​ನಾಮೆ ಪ್ರಹ​ಸನ ಮತ್ತೆ ಆರಂಭ​ವಾ​ಗು​ತ್ತದೆ ಎಂಬ ಆತಂಕ ಕಾಂಗ್ರೆಸ್‌ ನಾಯ​ಕ​ರನ್ನು ಕಾಡಿದ್ದು ಕಾರಣ ಎನ್ನ​ಲಾ​ಗು​ತ್ತಿದೆ.

ಗೈರು ಹಾಜ​ರಾ​ದ​ವ​ರಿಗೆ ನೋಟಿ​ಸ್‌:

ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆಯ ನಂತರ ಸುದ್ದಿ​ಗೋಷ್ಠಿ ನಡೆ​ಸಿದ ಸಿದ್ದ​ರಾ​ಮಯ್ಯ ಅವರು, ಸಭೆಗೆ ಗೈರು ಹಾಜ​ರಾ​ದವರ ಪೈಕಿ ಉಮೇಶ್‌ ಜಾಧವ್‌ ಅವರು ಅನಾ​ರೋ​ಗ್ಯದ ಕಾರಣ ಸಭೆಗೆ ಹಾಜ​ರಾ​ಗು​ವು​ದಿಲ್ಲ ಎಂದು ಪತ್ರ ಬರೆ​ದಿ​ದ್ದಾರೆ. ಮತ್ತೊಬ್ಬ ಶಾಸಕ ಬಿ. ನಾಗೇಂದ್ರ ಅವರು ರಾಜ್ಯ ಉಸ್ತು​ವಾರಿ ವೇಣು​ಗೋ​ಪಾ​ಲ್‌ಗೆ ಕರೆ ಮಾಡಿ ನ್ಯಾಯಾ​ಲ​ಯದ ಸಬೂಬು ನೀಡಿ ಗೈರು ಹಾಜ​ರಾ​ಗಿ​ದ್ದಾರೆ. ಉಳಿದ ಇಬ್ಬರಾದ ರಮೇಶ್‌ ಜಾರ​ಕಿ​ಹೊಳಿ ಹಾಗೂ ಮಹೇಶ್‌ ಕುಮ​ಟಳ್ಳಿ ಅವರು ಯಾವುದೇ ಕಾರಣ ನೀಡಿಲ್ಲ. ಹೀಗಾಗಿ ಈ ಇಬ್ಬ​ರಿಗೆ ಸಭೆಗೆ ಏಕೆ ಹಾಜ​ರಾ​ಗಿಲ್ಲ ಎಂದು ಕಾರಣ ಕೇಳಿ ನೋಟಿಸ್‌ ನೀಡ​ಲಾ​ಗು​ವುದು ಎಂದ​ರು.

ಅಲ್ಲದೆ, ಸಬೂಬು ನೀಡಿ ಗೈರು ಹಾಜ​ರಾದ ನಾಗೇಂದ್ರ ಹಾಗೂ ಉಮೇಶ್‌ ಜಾಧವ್‌ ಅವರು ನೀಡಿ​ರುವ ಕಾರ​ಣ​ಗಳು ವಾಸ್ತ​ವವೇ ಎಂಬು​ದನ್ನು ಪರಿ​ಶೀ​ಲಿ​ಸ​ಲಾ​ಗು​ವುದು. ಒಂದು ವೇಳೆ ಅವರು ನೀಡಿದ ಕಾರ​ಣ​ಗಳು ಸರಿ​ಯಲ್ಲ ಎಂದು ಕಂಡು ಬಂದರೆ ಅವ​ರಿಗೂ ನೋಟಿಸ್‌ ನೀಡಿ ಮುಂದಿನ ಕ್ರಮ ಜರು​ಗಿ​ಸ​ಲಾ​ಗು​ವುದು ಎಂದು ತಿಳಿ​ಸಿ​ದ​ರು.

ಅಲ್ಲದೆ, ಬಿಜೆ​ಪಿಯು ಸತ​ತ​ವಾಗಿ ಕಾಂಗ್ರೆಸ್‌ ಶಾಸ​ಕ​ರಿಗೆ ಹಣ, ಮಂತ್ರಿ​ಗಿರಿ ಹಾಗೂ ಭವಿ​ಷ್ಯ​ದಲ್ಲಿ ಚುನಾ​ವ​ಣೆ​ಯಲ್ಲಿ ಗೆಲ್ಲಲು ನೆರವು ನೀಡು​ವು​ದಾಗಿ ಆಮಿಷ ನೀಡಿ ಪಕ್ಷಕ್ಕೆ ಸೆಳೆ​ಯಲು ಯತ್ನಿ​ಸು​ತ್ತಿದೆ. ಹೀಗಾಗಿ ಪಕ್ಷದ ಶಾಸ​ಕ​ರನ್ನು ಭದ್ರ​ಪ​ಡಿ​ಸಿ​ಕೊ​ಳ್ಳಲು ಕಾಂಗ್ರೆಸ್‌ ಪಕ್ಷವು ತನ್ನ ಶಾಸ​ಕ​ರನ್ನು ಬಿಡದಿ ಬಳಿ ಈಗ​ಲ್‌​ಟನ್‌ ರೆಸಾ​ರ್ಟ್‌ಗೆ ಸ್ಥಳಾಂತರ ಮಾಡಲು ನಿರ್ಧ​ರಿ​ಸಿದೆ ಎಂದು ತಿಳಿ​ಸಿ​ದ​ರು.

ಬಿಲ​ದಿಂದ ಬಿಜೆಪಿ ಶಾಸ​ಕ​ರನ್ನು ಹೊರ​ಗೆ​ಳೆವ ತಂತ್ರ?

ಇಷ್ಟಕ್ಕೂ ಕಾಂಗ್ರೆಸ್‌ ತರಾ​ತು​ರಿ​ಯಲ್ಲಿ ತನ್ನ ಶಾಸ​ಕ​ರನ್ನು ರೆಸಾ​ರ್ಟ್‌ಗೆ ಸಾಗಿ​ಸುವ ಕಾರ್ಯ​ತಂತ್ರದ ಹಿಂದೆ ಬಿಜೆ​ಪಿಯ ಆಪ​ರೇ​ಷನ್‌ ಕಮಲ ತಂತ್ರ​ಗಾ​ರಿ​ಕೆಗೆ ಸಡ್ಡು ಹೊಡೆ​ಯುವ ಚಿಂತ​ನೆಯೂ ಇದೆ ಎನ್ನ​ಲಾ​ಗು​ತ್ತಿ​ದೆ. ಬಿಜೆಪಿ ನಡೆ​ಸು​ತ್ತಿ​ರುವ ಆಪ​ರೇ​ಷ​ನ್‌ಗೆ ಪ್ರತಿ​ಯಾಗಿ ಆ ಪಕ್ಷದ ಕೆಲ ಶಾಸ​ಕ​ರನ್ನು ಸೆಳೆ​ಯಲು ಮೈತ್ರಿ​ಕೂ​ಟ ಸನ್ನ​ದ್ಧ​ವಾ​ಗಿದೆ. ಆದರೆ, ಬಿಜೆ​ಪಿಯು ತನ್ನ ಶಾಸ​ಕ​ರನ್ನು ರೆಸಾ​ರ್ಟ್‌​ನಲ್ಲಿ ಜೋಪಾನ ಮಾಡಿ​ರು​ವುದು ಈ ಉದ್ದೇಶ ಸಾಧ​ನೆಗೆ ಕಷ್ಟ​ವಾ​ಗು​ತ್ತಿದೆ.

ಹೀಗಾಗಿ, ಕಾಂಗ್ರೆಸ್‌ ತಾನು ಕೂಡ ಶಾಸ​ಕ​ರನ್ನು ರೆಸಾ​ರ್ಟ್‌ಗೆ ಸಾಗಿ​ಸುವ ಮೂಲಕ ತನ್ನ ಶಾಸ​ಕ​ರನ್ನು ಭದ್ರ​ಪ​ಡಿ​ಸಿ​ಕೊ​ಳ್ಳು​ವುದು ಹಾಗೂ ಬಿಜೆ​ಪಿಯ ಶಾಸ​ಕರು ಹೊರ ಬರು​ವ​ವ​ರೆಗೂ ಆಪ​ರೇ​ಷನ್‌ ಕಮಲ ಪ್ರಯತ್ನ ಚಾಲ್ತಿ​ಯಿದೆ ಎಂದು ಬಿಂಬಿಸಿ ಎಲ್ಲಿ​ಯ​ವ​ರೆಗೂ ಬಿಜೆಪಿ ರೆಸಾ​ರ್ಟ್‌ ರಾಜ​ಕಾ​ರಣ ನಿಲ್ಲಿ​ಸು​ವು​ದಿ​ಲ್ಲವೋ ಅಲ್ಲಿ​ಯ​ವ​ರೆಗೂ ತನ್ನ ಶಾಸ​ಕ​ರನ್ನು ರೆಸಾ​ರ್ಟ್‌​ನಲ್ಲಿ ಇರು​ವಂತೆ ಮಾಡು​ವುದು. ಬಿಜೆ​ಪಿಯು ತನ್ನ ಶಾಸ​ಕ​ರನ್ನು ರೆಸಾ​ರ್ಟ್‌​ನಿಂದ ‘ಬಿಡು​ಗ​ಡೆ​’ ಮಾಡಿದ ನಂತರ ತಾನೂ ರಿವ​ರ್ಸ್‌ ಆಪ​ರೇ​ಷ​ನ್‌ಗೆ ಕೈಹಾಕುವ ಉದ್ದೇಶ ಹೊಂದಿದೆ ಎಂದು ಹೇಳ​ಲಾ​ಗು​ತ್ತಿ​ದೆ.

11 ಶಾಸಕರ ಬಗ್ಗೆ ಕಾಂಗ್ರೆಸ್‌ ಪಾಳಯದಲ್ಲಿ ಆತಂಕ

2 ಪಕ್ಷೇತರರು ಬಿಜೆಪಿ ತೆಕ್ಕೆಗೆ

ರಾಣೆಬೆನ್ನೂರಿನ ಪಕ್ಷೇತರ ಶಾಸಕ, ಪದಚ್ಯುತ ಸಚಿವ ಆರ್‌.ಶಂಕರ್‌, ಮುಳಬಾಗಿಲಿನ ಪಕ್ಷೇತರ ಶಾಸಕ ನಾಗೇಶ್‌ ಈಗಾಗಲೇ ಬಿಜೆಪಿ ತೆಕ್ಕೆಗೆ

4 ಶಾಸಕರು ಸಭೆಗೆ ಗೈರು

ಶಾಸಕಾಂಗ ಸಭೆಗೆ ಗೈರಾದ ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ, ಚಿಂಚೋಳಿ ಶಾಸಕ ಉಮೇಶ್‌ ಜಾಧವ್‌, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ ಬಿಜೆಪಿಯತ್ತ ವಾಲಿದ ಬಗ್ಗೆ ಬಲವಾದ ಶಂಕೆ

5 ಅತೃಪ್ತ ಶಾಸಕರ ಭೀತಿ

ಶಾಸಕಾಂಗ ಸಭೆಗೆ ಹಾಜರಾಗಿದ್ದರೂ ವಿಜಯನಗರ (ಹೊಸಪೇಟೆ) ಶಾಸಕ ಆನಂದ್‌ ಸಿಂಗ್‌, ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌, ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್‌, ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಬಿಜೆಪಿ ತೆಕ್ಕೆಗೆ ಬೀಳುವ ಭೀತಿ

2-3 ಸಚಿವರೂ ಅತ್ತ ಕಡೆ?

ರಾಜೀ​ನಾಮೆ ಪ್ರಹ​ಸನ ಆರಂಭವಾದ ನಂತರ ಇಬ್ಬರು ಅಥವಾ ಮೂವರು ಹಾಲಿ ಸಚಿ​ವರು ಸೇರಿ​ದಂತೆ ‘ಬೇಲಿ ಮೇಲೆ ಕುಳಿ​ತಿ​ರುವ’ ಇನ್ನೂ ಕೆಲವು ಶಾಸ​ಕರು ಪಕ್ಷಾಂತರ ಮಾಡುವ ಭೀತಿ ಕಾಂಗ್ರೆಸ್‌ನಲ್ಲಿದೆ

click me!
Last Updated Jan 19, 2019, 7:13 AM IST
click me!