ಕರ್ನಾಟಕದಲ್ಲಿ ನೂರಕ್ಕೆ ನೂರು ಮುಖ್ಯಮಂತ್ರಿ ಬದಲಾವಣೆ: ಎಂ. ಲಕ್ಷ್ಮಣ

By Kannadaprabha NewsFirst Published Aug 13, 2022, 1:12 PM IST
Highlights

ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳುತ್ತಲೇ ಇದ್ದ ಬಿಜೆಪಿ ನಾಯಕರು, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರು: ಲಕ್ಷ್ಮಣ 

ಮೈಸೂರು(ಆ.13):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನೂರಕ್ಕೆ ನೂರು ಬದಲಾವಣೆ ಮಾಡಲಾಗುತ್ತಿದೆ. ಈ ವಿಚಾರವನ್ನು ಕಾಂಗ್ರೆಸ್‌ ಹೇಳುತ್ತಿಲ್ಲ, ಬಿಜೆಪಿ ನಾಯಕರು ಹೇಳಿದ್ದನ್ನೇ ನಾವು ಹೇಳುತ್ತಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು. ಮೈಸೂರು ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳುತ್ತಲೇ ಇದ್ದ ಬಿಜೆಪಿ ನಾಯಕರು, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಇದೀಗ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸಿ ಮುಂದೆ ಅಧಿಕಾರ ಹಿಡಿಯುವ ಕನಸನ್ನು ಬಿಜೆಪಿಯವರು ಕಾಣುತ್ತಿದ್ದಾರೆ ಎಂದು ಕುಟುಕಿದರು.

ಅತಿವೃಷ್ಟಿ, ನೆರೆ ನಿರ್ವಹಣೆಯಯಲ್ಲಿ ಮುಖ್ಯಮಂತ್ರಿಯವರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದ 14 ಜಿಲ್ಲೆಗಳಲ್ಲಿ ಅತಿವೃಷ್ಠಿಯಾಗಿದ್ದರೂ ಮುಖ್ಯಮಂತ್ರಿ, ಸಚಿವರು ಹೋಗಿಲ್ಲ. ಆಸ್ತಿ, ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಯಾರನ್ನೋ ಮೆಚ್ಚಿಸಲು ಎಚ್‌ಡಿಕೆ ಕಣ್ಣೀರು ಹಾಕೋ ನಾಟಕವಾಡಿಲ್ಲ: ಪುಟ್ಟರಾಜು

ಬಿಜೆಪಿ ಸರ್ಕಾರದಲ್ಲಿ ಎಷ್ಟುಜನ ಸಿಎಂ ಆದರೂ ಬದಲಾವಣೆ ಮಾಡಿಕೊಂಡರು ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ 150 ಹೆಚ್ಚು ಸ್ಥಾನ ಪಡೆದು ಸರ್ಕಾರ ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಶ್‌ ಬರದಿದ್ದರೆ ಕಲ್ಲೇಟು ಬೀಳುತ್ತಿತ್ತು

ಮೈಸೂರು ವಿವಿ ಆಯೋಜಿಸಿದ್ದ ಯುವಜನೋತ್ಸವಕ್ಕೆ ನಟ ಯಶ್‌ ಬರದಿದ್ದರೆ, ಯುವಕರಿಗೆ ಉದ್ಯೋಗ ಸೃಷ್ಟಿಸದ ಬಿಜೆಪಿ ಸರ್ಕಾರದ ನಾಯಕರಿಗೆ ಕಲ್ಲೇಟು ಬೀಳುತ್ತಿತ್ತು. ಕಾಲೇಜುಗಳಿಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಉತ್ಸವಕ್ಕೆ ಕರೆ ತರಲಾಗಿತ್ತು. ಯುವ ಜನರ ಸಮಸ್ಯೆ ಬಗೆ ಹರಿಸುವ ಮಾತುಗಳನ್ನು ಮುಖ್ಯಮಂತ್ರಿ ಹೇಳಲಿಲ್ಲ. ವಿದ್ಯಾರ್ಥಿ ವೇತನವನ್ನೇ ಸಮರ್ಪಕವಾಗಿ ವಿತರಿಸದ ಸರ್ಕಾರದಿಂದ ಉದ್ಯೋಗ ಸೃಷ್ಟಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಗಾಂಧಿ, ನೆಹರೂ, ಅಂಬೇಡ್ಕರ್‌ ಭಾವಚಿತ್ರಗಳನ್ನು ಎಲ್ಲಿಯೂ ಬಳಸಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ನೆನಪಿಸುವ ಕೆಲಸವನ್ನು ಮಾಡುತ್ತಿಲ್ಲ. ಬಿಜೆಪಿ ನಾಯಕರ ಆದರ್ಶಗಳಾದ ಹಿಂದೂ ಮಹಾಸಭಾದ ವಿ.ಡಿ. ಸಾವರ್ಕರ್‌, ಆರ್‌ಎಸ್‌ಎಸ್‌ನ ಗೋಳ್ವಲ್ಕರ್‌ ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿಲ್ಲ. ಆದರೆ, ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಬಿಜೆಪಿಯು ಜನರಿಂದ ಬ್ಯಾಂಕ್‌, ಅಂಚೆ ಕಚೇರಿ ಮೂಲಕ . 20 ವಸೂಲು ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಎಚ್‌ಡಿಕೆ ವಿರುದ್ಧ ಕಿಡಿ

ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಯಶಸ್ವಿಯಾದ ಮೇಲೆ ಎಚ್‌.ಡಿ. ಕುಮಾರಸ್ವಾಮಿ ಅವರು ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೊಗಲಾಡಿ ಎನ್ನುತ್ತಿದ್ದಾರೆ. ಆದರೆ, ನೀವು ಯಾವ ಸೋಗಲಾಡಿ ಎಂಬುದು ನಮಗೆ ಗೊತ್ತಿದೆ. ನೀವು ಒಕ್ಕಲಿಗ ಸಮುದಾಯವನ್ನು ಗುತ್ತಿಗೆ ತೆಗೆದುಕೊಂಡಿದ್ದೀರಿ? ಒಕ್ಕಲಿಗರು ಜೆಡಿಎಸ್‌ಗೆ ಮತ ನೀಡಲ್ಲ. ಕಾಂಗ್ರೆಸ್‌ ಪಕ್ಷದಲ್ಲೂ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಮಂದಿ ಒಕ್ಕಲಿಗ ನಾಯಕರಾಗಿದ್ದಾರೆ ಎಂದು ಅವರು ಕಿಡಿಕಾರಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯವರು ಜೆಡಿಎಸ್‌, ಎಸ್‌ಡಿಪಿಐ, ಎಂಐಎಂ, ಬಿಎಸ್ಪಿ ಸೇರಿದಂತೆ ವಿವಿಧ ಪಕ್ಷಗಳನ್ನು ಬೆಳೆಸುತ್ತಿದೆ. ಈ ಪಕ್ಷಗಳು ಬಿಜೆಪಿಯ ಬಿ ಟೀಂ ಆಗಿವೆ. ಅದೇ ರೀತಿ ಬಿಜೆಪಿಯಿಂದ ಜೆಡಿಎಸ್‌ ಸುಪಾರಿ ಪಡೆದು ಕಾಂಗ್ರೆಸ್‌ ಅನ್ನು ಟೀಕೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಸರ್ಕಾರದಲ್ಲಿ ಉದ್ಯೋಗ ಬೇಕೆಂದರೆ ಮಹಿಳೆಯರು ಮಂಚ ಹತ್ತಬೇಕು: ಪ್ರಿಯಾಂಕ ಖರ್ಗೆ ವಾಗ್ದಾಳಿ

ಬಿಜೆಪಿಯಿಂದ 9 ಮಂದಿ, ಜೆಡಿಎಸ್‌ ಪಕ್ಷದಿಂದ 11 ಮಂದಿ ಕಾಂಗ್ರೆಸ್‌ ಪಕ್ಷಕ್ಕೆ ಬರಲು ಅನಧಿಕೃತವಾಗಿ ಈಗಾಗಲೇ ಅರ್ಜಿ ಹಾಕಿಕೊಂಡಿದ್ದಾರೆ. ಬರುವ ಎಲ್ಲರನ್ನೂ ಪಕ್ಷ ಸೇರಿಸಿಕೊಳ್ಳುವುದಿಲ್ಲ. ಅವರ ಪೂರ್ವ ಪರವನ್ನು ವಿಚಾರಿಸಿಕೊಂಡು, ಅರ್ಹರನ್ನು ಸೇರಿಸಿಕೊಳ್ಳಲಾಗುವುದು. ಅವರಾರ‍ಯರು ಎಂಬುದನ್ನು ಮುಂದಿನ ದಿನಗಳಲ್ಲಿ ಹೆಸರು ಸಮೇತ ತಿಳಿಸುವುದಾಗಿ ಅವರು ಹೇಳಿದರು. ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಮಹೇಶ್‌ ಇದ್ದರು.

ಎಸಿಬಿ ರದ್ದು ಸ್ವಾಗತ

ಎಸಿಬಿಯನ್ನು ರದ್ದುಪಡಿಸಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಕಾಂಗ್ರೆಸ್‌ ಸ್ವಾಗತಿಸುತ್ತದೆ. ಲೋಕಾಯುಕ್ತಕ್ಕೆ ಎಫ್‌ಐಆರ್‌ ದಾಖಲಿಸುವ, ಆರೋಪಿಗಳನ್ನು ಬಂಧಿಸುವ ಅಧಿಕಾರ ಇರಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಸರ್ಕಾರ ಎಸಿಬಿ ರಚಿಸಿದ್ದರು. ಈಗ ಎಸಿಬಿಯನ್ನು ರದ್ದುಗೊಳಿಸಿದ್ದು, ಹೈಕೋರ್ಟ್‌ ತೀರ್ಪನ್ನು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಹೋಗಬೇಡಿ. ಹೈಕೋರ್ಟ್‌ ಆದೇಶವನ್ನು ಅನುಷ್ಠಾನಗೊಳಿಸಲಿ ಅಂತ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದ್ದಾರೆ.  
 

click me!