ಬ್ರಿಜ್ ಭೂಷಣ್ ಬಂಧನದ ವರೆಗೆ ಪ್ರತಿಭಟನೆ, FIR ಪ್ರತಿ ತೋರಿಸುವಂತೆ ಪಟ್ಟು!

By Suvarna NewsFirst Published Apr 29, 2023, 10:55 AM IST
Highlights

ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ದ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ಸುಪ್ರೀ ಕೋರ್ಟ್‌ನಲ್ಲಿ ಪೊಲೀಸರು ನೀಡಿದ ಹೇಳಿಕೆ ಹಾಗೂ ಇದೀಗ ನಡೆದುಕೊಳ್ಳುತ್ತಿರುವ ರೀತಿಯಿಂದ ಮತ್ತೆ ಅನುಮಾನ ಮೂಡುವಂತಾಗಿದೆ.ಹೀಗಾಗಿ ಬಂಧನದವರಗೆ ಹೋರಾಟ ಮಾಡುವುದಾಗಿ ಕುಸ್ತಿಪಟುಗಳು ಎಚ್ಚರಿಕೆ ನೀಡಿದ್ದಾರೆ.

ನವ​ದೆ​ಹ​ಲಿ(ಏ.29): ಲೈಂಗಿಕ ಕಿರು​ಕುಳ ಸೇರಿ​ ಹಲವು ಗಂಭೀರ ಪ್ರಕ​ರ​ಣ​ಗ​ಳಿಗೆ ಸಂಬಂಧಿ​ಸಿ​ದಂತೆ ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌(ಡ​ಬ್ಲ್ಯು​ಎ​ಫ್‌​ಐ) ಮಾಜಿ ಅಧ್ಯ​ಕ್ಷ ಬ್ರಿಜ್‌​ಭೂ​ಷಣ್‌ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಮುಂದುವರಿಸುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ. ಬ್ರಿಜ್‌ಭೂಷಣ್ ಬಂಧನದವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಕುಸ್ತಿಪಟುಗಳು ಎಚ್ಚರಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸುವುದಾಗಿ ಹೇಳಿದರೂ, ದೂರು ದಾಖಲಾಗಿರುವ ಬಗ್ಗೆ ಅನುಮಾನವಿದೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ. ಇತ್ತ ಕುಸ್ತಿಪಟುಗಳ ಪ್ರತಿಭಟನೆ ನಡೆಸುತ್ತಿರುವ ಜಂತರ್ ಮಂತರ್‌ಗೆ ತೆರಳಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ದೆಹಲಿ ಪೊಲೀಸರು ದಾಖಲಿಸಿರುವ ಎಫ್‍‌ಐಆರ್ ಪ್ರತಿ ತೋರಿಸುವಂತೆ ಆಗ್ರಹಿಸಿದ್ದಾರೆ. ದೆಹಲಿ ಪೊಲೀಸರ ನಡೆ ಅನುಮಾನ ಬರುತ್ತಿದೆ. ಇದುವರೆಗೂ ಎಫ್ಐಆರ್ ದಾಖಲಿಸಿದೆ ಇದೀಗ ಸುಪ್ರೀಂ ಕೋರ್ಟ್ ಮುಂದೆ ದಾಖಲು ಮಾಡುತ್ತೇವೆ ಎಂದಿದೆ. ಆದರೆ ಇನ್ನೂ ದಾಖಲಾಗಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ದೂರು ಸಲ್ಲಿ​ಕೆ​ಯಾದ 7 ದಿನ​ಗಳ ಬಳಿಕ ಕೊನೆಗೂ ದೆಹಲಿ ಪೊಲೀ​ಸರು ಬ್ರಿಜ್‌​ಭೂ​ಷಣ್‌ ವಿರುದ್ಧ ಎಫ್‌​ಐ​ಆರ್‌ ದಾಖ​ಲಿ​ಸು​ವು​ದಾಗಿ ಸುಪ್ರೀಂ ಕೋರ್ಚ್‌ಗೆ ತಿಳಿ​ಸಿ​ದ್ದಾ​ರೆ.ಬ್ರಿಜ್‌ ವಿರುದ್ಧ ದೂರು ನೀಡಿ​ದ್ದರೂ ದೆಹಲಿ ಪೊಲೀ​ಸರು ಎಫ್‌​ಐ​ಆರ್‌ ದಾಖ​ಲಿ​ಸಿಲ್ಲ ಎಂದು 7 ಕುಸ್ತಿ​ಪ​ಟು​ಗಳು ಸುಪ್ರೀಂಗೆ ಅರ್ಜಿ ಸಲ್ಲಿ​ಸಿ​ದ್ದರು. ಶುಕ್ರ​ವಾರ ವಿಚಾರಣೆ ವೇಳೆ ಸಾಲಿ​ಸಿ​ಟರ್‌ ಜನ​ರಲ್‌ ತುಷಾರ್‌ ಮೆಹ್ತಾ, ಪೊಲೀ​ಸರು ಬ್ರಿಜ್‌ ವಿರುದ್ಧ ಎಫ್‌​ಐ​ಆರ್‌ ದಾಖ​ಲಿ​ಸಲಿ​ದ್ದಾರೆ ಎಂದು ನ್ಯಾಯಾ​ಲ​ಯಕ್ಕೆ ಮಾಹಿತಿ ನೀಡಿ​ದರು. ಇದೇ ವೇಳೆ ಕುಸ್ತಿ​ಪ​ಟು​ಗಳ ಪರ ವಕೀಲ ಕಪಿಲ್‌ ಸಿಬಲ್‌, ದೂರು​ದಾರೆ ಕುಸ್ತಿ​ಪ​ಟು​ವಿನ ಜೀವಕ್ಕೆ ಅಪಾ​ಯ​ವಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾ. ಪಿ.ಎಸ್‌. ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಗಮನ ಸೆಳೆ​ದರು. ಇದಕ್ಕೆ ಪ್ರತಿ​ಕ್ರಿ​ಯಿ​ಸಿದ ನ್ಯಾಯಪೀಠವು, ಕುಸ್ತಿಪಟುಗಳಿಗೆ ಬೆದರಿಕೆ ಹಾಕಿರುವ ಕುರಿತು ತನಿಖೆ ನಡೆಸಿ ಅಗತ್ಯವಿದ್ದರೆ ಭದ್ರತೆ ಒದಗಿಸುವಂತೆ ದೆಹಲಿ ಪೊಲೀಸ್‌ ಆಯುಕ್ತರಿಗೆ ನಿರ್ದೇಶನ ನೀಡಿ, ಮುಂದಿನ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿತು.

Wrestlers Protest ಕುಸ್ತಿಪಟುಗಳ ನಡೆಯಿಂದ ದೇಶದ ಘನತೆಗೆ ಧಕ್ಕೆ: PT ಉಷಾ

ಎಫ್‌ಐಆರ್‌ ಪರಿಶೀಲಿಸಿ: ಮುಂದಿನ ನಿರ್ಧಾರ: ಪೊಲೀ​ಸರು ಬ್ರಿಜ್‌ ವಿರುದ್ಧ ಎಫ್‌​ಐ​ಆರ್‌ ದಾಖ​ಲಿ​ಸಲು ನಿರ್ಧ​ರಿ​ಸಿದ್ದು ತಮ್ಮ ಹೋರಾ​ಟಕ್ಕೆ ಸಿಕ್ಕ ಮೊದಲ ಜಯ ಎಂದು ಕುಸ್ತಿ​ಪ​ಟು​ಗಳು ಹೇಳಿ​ದ್ದಾರೆ. ‘ಇದು ಮೊದಲ ಜಯ. ಆದರೆ ಪ್ರತಿ​ಭ​ಟನೆ ನಿಲ್ಲು​ವು​ದಿ​ಲ್ಲ’ ಎಂದು ಸಾಕ್ಷಿ ಮಲಿಕ್‌ ನುಡಿ​ದಿ​ದ್ದಾರೆ. ವಿನೇ​ಶ್‌ ಫೋಗಾಟ್‌ ಕೂಡಾ ಪ್ರತಿ​ಕ್ರಿಯೆ ನೀಡಿದ್ದು, ಪೊಲೀಸರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇಲ್ಲ. ಅವರು ದುರ್ಬಲ ಎಫ್‌​ಐ​ಆರ್‌ ದಾಖ​ಲಿ​ಸ​ಬ​ಹುದು. ಹೀಗಾಗಿ ಎಫ್‌ಐಆರ್‌ ದಾಖಲಾದ ಮೇಲೆ ಅದರ ವಿವರಗಳನ್ನು ಪರಿಶೀಲಿಸಿ ಪ್ರತಿಭಟನೆ ಕೈಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಬ್ರಿಜ್‌​ರನ್ನು ಬಂಧಿಸಿ, ಎಲ್ಲಾ ಹುದ್ದೆ​ಗ​ಳಿಗೆ ಮುಕ್ತ​ಗೊ​ಳಿ​ಸ​ಬೇ​ಕು’ ಎಂದು ಒತ್ತಾ​ಯಿ​ಸಿ​ದ್ದಾರೆ.

ಕ್ರೀಡಾ ತಾರೆಗಳ ಬೆಂಬ​ಲ: ಕುಸ್ತಿಪಟುಗಳ ಪ್ರತಿಭಟನೆಗೆ ವಿವಿಧ ಕ್ರೀಡೆಗಳ ತಾರೆಯರು ಬೆಂಬಲ ಸೂಚಿ​ಸಿ​ದ್ದಾರೆ. ಒಲಿಂಪಿಕ್ಸ್‌ ಚಾಂಪಿ​ಯನ್‌ ನೀರಜ್‌ ಚೋಪ್ರಾ, ಮಾಜಿ ಕ್ರಿಕೆ​ಟಿ​ಗ​ರಾದ ಹರ್ಭಜನ್‌, ಸೆಹ್ವಾಗ್‌, ಇರ್ಫಾನ್‌, ಮದನ್‌ ಲಾಲ್‌, ಟೆನಿಸ್‌ ತಾರೆ ಸಾನಿಯ ಮಿರ್ಜಾ, ಬಾಕ್ಸರ್‌ ನಿಖಾ​ತ್‌ ಜರೀ​ನ್‌, ಹಾಕಿ ಪಟು ರಾಣಿ ರಾಂಪಾಲ್‌ ಸೇರಿ​ದಂತೆ ಹಲ​ವರು ಕುಸ್ತಿ​ಪ​ಟು​ಗ​ಳಿಗೆ ನ್ಯಾಯ ದೊರ​ಕ​ಬೇಕು ಎಂದು ಒತ್ತಾ​ಯಿ​ಸಿ​ದ್ದಾರೆ.

ದೆಹಲಿಯಲ್ಲಿ ಮುಂದುವರಿದ ಕುಸ್ತಿಪಟುಗಳ ಪ್ರತಿಭಟನೆ!

ಅನು​ರಾಗ್‌, ಉಷಾ ವಿರುದ್ಧ ಆಕ್ರೋ​ಶ: ಘಟ​ನೆಗೆ ಸಂಬಂಧಿ​ಸಿ​ದಂತೆ ಕುಸ್ತಿಪಟುಗಳ ಜೊತೆ 12 ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದೇನೆ, 14 ಸಭೆ ನಡೆಸಿದ್ದೇನೆ ಎಂದಿದ್ದ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಬಗ್ಗೆ ಕುಸ್ತಿಪಟುಗಳು ಅಸಮಾಧಾನ ವ್ಯಕ್ತ​ಪ​ಡಿ​ಸಿ​ದ್ದಾರೆ. ‘ಸಚಿ​ವರು 2-4 ನಿಮಿಷ ಅಷ್ಟೇ ನಮ್ಮ ಜೊತೆ ಸಚಿವರು ಮಾತನಾಡಿದ್ದಾರೆ’ ಎಂದು ಭಜ​ರಂಗ್‌ ಕಿಡಿ​ಕಾ​ರಿ​ದ್ದಾರೆ. ‘ಅ​ನು​ರಾಗ್‌ 12 ನಿಮಿಷ ಕೂಡಾ ಜೊತೆ​ಗಿ​ರ​ಲಿಲ್ಲ. ಸಭೆ​ಯಲ್ಲಿ ನಮ್ಮನ್ನೇ ಬೆದ​ರಿ​ಸು​ತ್ತಿ​ದ್ದ​ರು’ ಎಂದು ವಿನೇಶ್‌ ಆರೋಪಿಸಿದ್ದಾರೆ. ಇನ್ನು ಕುಸ್ತಿಪಟುಗಳ ನಡೆಯಿಂದ ದೇಶದ ಘನತೆಗೆ ಧಕ್ಕೆಯಾಗುತ್ತಿದೆ ಎಂದಿದ್ದ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷೆ ಪಿ.ಟಿ. ಉಷಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿನೇಶ್‌, ‘ಅವರಿಗೆ ಯಾರಾದರೂ ಕಿರುಕುಳ ನೀಡಿದ್ದರೆ ಆಗಲೂ ಇದೇ ರೀತಿ ವರ್ತಿಸುತ್ತಿದ್ದರೆ’ ಎಂದು ಪ್ರಶ್ನಿಸಿದ್ದಾರೆ.

click me!