Pro Kabaddi League: ಹರ್ಯಾಣ ಸ್ಟೀಲರ್ಸ್‌ಗೆ ಮಣಿದ ಬೆಂಗಾಲ್‌ ವಾರಿಯರ್ಸ್‌..!

By Suvarna NewsFirst Published Jan 8, 2022, 8:40 AM IST
Highlights

* ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳಿದ ಹರ್ಯಾಣ ಸ್ಟೀಲರ್ಸ್‌

* ಟೂರ್ನಿಯಲ್ಲಿ 4ನೇ ಸೋಲು ಕಂಡ ಹಾಲಿ ಚಾಂಪಿಯನ್ ಬೆಂಗಾಲ್‌ ವಾರಿಯರ್ಸ್

* ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವು ಕಂಡ ಜೈಪುರ ಪಿಂಕ್ ಪ್ಯಾಂಥರ್ಸ್‌

ಬೆಂಗಳೂರು(ಜ.08): 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಹಾಲಿ ಚಾಂಪಿಯನ್‌ ಬೆಂಗಾಲ್‌ ವಾರಿಯ​ರ್ಸ್ (Bengal Warriors) ನಾಲ್ಕನೇ ಸೋಲು ಕಂಡಿದೆ. ಶುಕ್ರವಾರದ ಪಂದ್ಯದಲ್ಲಿ ಬೆಂಗಾಲ್‌, ಹರ್ಯಾಣ ಸ್ಟೀಲ​ರ್ಸ್‌ (Haryana Steelers) 37-41 ಅಂಕಗಳಿಂದ ಶರಣಾಯಿತು. ಹ್ಯಾಟ್ರಿಕ್‌ ಸೋಲಿನ ಬಳಿಕ ಕಳೆದ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿದ್ದ ಬೆಂಗಾಲ್‌, ಈ ಸೋಲಿನೊಂದಿಗೆ 8ನೇ ಸ್ಥಾನಕ್ಕೆ ಕುಸಿದಿದ್ದು, ಹರ್ಯಾಣ 6ನೇ ಸ್ಥಾನಕ್ಕೇರಿತು. 

ತಾರಾ ರೈಡರ್‌ ಮಣೀಂದರ್‌ ಸಿಂಗ್‌ ಈ ಆವೃತ್ತಿಯಲ್ಲಿ 5ನೇ ‘ಸೂಪರ್‌ 10’ ಸಾಧನೈಗೈದರೂ, ತಂಡವನ್ನು ಗೆಲ್ಲಿಸಲು ವಿಫಲರಾದರು. ನಬೀಭಕ್ಷ್‌  6 ರೈಡ್‌, 3 ಟ್ಯಾಕಲ್‌ ಅಂಕ ಪಡೆದರು. ಮೊದಲಾರ್ಧದ ಹಿನ್ನಡೆಯನ್ನು ಮೆಟ್ಟಿನಿಂತ ಹರ್ಯಾಣ 3ನೇ ಗೆಲುವು ದಾಖಲಿಸಿತು. ಮೀತು 10, ನಾಯಕ ವಿಕಾಶ್‌ ಕಂಡೋಲಾ 9 ರೈಡ್‌ ಅಂಕ ಕಲೆಹಾಕಿದರು.

ಸೋಲಿನ ಸುಳಿಯಿಂದ ಹೊರಬಂದ ಜೈಪುರ

8ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ಸೋಲು ಕಂಡಿದ್ದ ಜೈಪುರ ಪಿಂಕ್‌ ಪ್ಯಾಂಥ​ರ್ಸ್‌(Jaipur Pink Panthers) ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ಜೈಪುರ, ಪುಣೇರಿ ಪಲ್ಟನ್‌ ವಿರುದ್ಧ 31-26 ಅಂಕಗಳಿಂದ ಗೆಲುವು ಸಾಧಿಸಿತು. ಈ ಆವೃತ್ತಿಯ ಸತತ 7ನೇ ಪಂದ್ಯದಲ್ಲೂ ‘ಸೂಪರ್‌ 10’ ಅಂಕ ಗಳಿಸಿದ ಅರ್ಜುನ್‌ ದೇಶ್ವಾಲ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಂದಿನ ಪಂದ್ಯಗಳು

ಯು.ಪಿ.ಯೋಧಾ-ಡೆಲ್ಲಿ, ಸಂಜೆ 7.30ಕ್ಕೆ
ಮುಂಬಾ-ಟೈಟಾನ್ಸ್‌, ರಾತ್ರಿ 8.30ಕ್ಕೆ
ಗುಜರಾತ್‌-ಪಾಟ್ನಾ, ರಾತ್ರಿ 9.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಮಂಗ್ಳೂರು ವಿವಿ ಸತತ 4ನೇ ಬಾರಿಗೆ ಚಾಂಪಿಯನ್‌

ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಮುಕ್ತಾಯಗೊಂಡ 81ನೇ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯಗಳ ಪುರುಷರ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿ ಚಾಂಪಿಯನ್‌ ಪಟ್ಟಮುಡಿಗೇರಿಸಿಕೊಂಡಿದ್ದು, ಈ ಮೂಲಕ ಸತತ 4ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

Pro Kabaddi League: ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ತಿವಿದ ಬೆಂಗಳೂರು ಬುಲ್ಸ್ ಮತ್ತೆ ನಂ.1

ಕೂಟದಲ್ಲಿ ಒಟ್ಟು 105 ಅಂಕ ಪಡೆದ ಮಂಗಳೂರು ವಿವಿ ಅಗ್ರಸ್ಥಾನ ಪಡೆದಿದ್ದು, 42 ಅಂಕ ಗಳಿಸಿದ ಲವ್ಲಿ ಪ್ರೊಫೆಶನಲ್‌ ಯುನಿವರ್ಸಿಟಿ ದ್ವಿತೀಯ ಹಾಗೂ 37 ಅಂಕಗಳೊಂದಿಗೆ ರೋಟಕ್‌ನ ಮಹಾರಿಷಿ ದಯಾನಂದ ಸಾಗರ್‌ ವಿವಿ ತೃತೀಯ ಸ್ಥಾನ ಪಡೆಯಿತು. ಮಂಗಳೂರು ವಿವಿ ಒಟ್ಟು 6 ಚಿನ್ನ, 6 ಬೆಳ್ಳಿ, 4 ಕಂಚಿನ ಪದಕ ಜಯಿಸಿತು. 1077 ಅಂಕದೊಂದಿಗೆ ಪಟಿಯಾಲದ ಪಂಜಾಬಿ ಯುನಿವರ್ಸಿಟಿಯ ಅಕ್ಷಾದೀಪ್‌ ಸಿಂಗ್‌ ಈ ಬಾರಿಯ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದರು.

* ಕೂಟ ದಾಖಲೆ ನಿರ್ಮಿಸಿದ ರಿಲೇ ತಂಡಕ್ಕೆ ವಿಶೇಷ ನಗದು ಪುರಸ್ಕಾರ

4*100 ರಿಲೇ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ನೂತನ ಕೂಟ ದಾಖಲೆ ನಿರ್ಮಿಸಿದೆ. ಈ ನಿಟ್ಟಿನಲ್ಲಿ ನಾಲ್ಕು ಸದಸ್ಯರನ್ನೊಳಗೊಂಡ ತಂಡಕ್ಕೆ 1,25,000 ರು. ನಗದು ಪುರಸ್ಕಾರ ನೀಡಲಾಗಿದೆ.

ಸಂತೋಷ್‌ ಟ್ರೋಫಿ: ‘ಬಿ’ ಗುಂಪಿನಲ್ಲಿ ಕರ್ನಾಟಕ

ನವದೆಹಲಿ: ಮುಂಬರುವ 75ನೇ ಆವೃತ್ತಿಯ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯಲ್ಲಿ ನಾಲ್ಕು ಬಾರಿಯ ಚಾಂಪಿಯನ್‌ ಕರ್ನಾಟಕ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಟೂರ್ನಿ ಫೆಬ್ರವರಿ 20ರಿಂದ ಕೇರಳದಲ್ಲಿ ಆರಂಭವಾಗಲಿದ್ದು, ಕರ್ನಾಟಕ ತಂಡ ಒಡಿಶಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. 

ರಾಜ್ಯ ತಂಡವಿರುವ ಗುಂಪಿನಲ್ಲಿ ಹಾಲಿ ಚಾಂಪಿಯನ್‌ ಸವೀರ್‍ಸಸ್‌, ಮಣಿಪುರ ಹಾಗೂ ಗುಜರಾತ್‌ ಕೂಡಾ ಸ್ಥಾನ ಪಡೆದಿವೆ. 32 ಬಾರಿಯ ಚಾಂಪಿಯನ್‌ ವೆಸ್ಟ್‌ ಬೆಂಗಾಲ್‌, ಕೇರಳ, ಪಂಜಾಬ್‌, ಮೇಘಾಲಯ ಹಾಗೂ ರಾಜಸ್ಥಾನ ತಂಡಗಳು ‘ಎ’ ಗುಂಪಿನಲ್ಲಿವೆ. ಪ್ರ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

click me!