ಗೆದ್ದರೆ ಶ್ರೇಯಸ್ಸು, ಸೋತಾಗೇಕೆ ದೂರು? ಪ್ರಕಾಶ್ ಪಡುಕೋಣೆ ವಿರುದ್ಧ ಅಶ್ವಿನಿ ಕಿಡಿ

By Kannadaprabha NewsFirst Published Aug 7, 2024, 11:46 AM IST
Highlights

ಭಾರತದ ದಿಗ್ಗಜ ಶಟ್ಲರ್ ಪ್ರಕಾಶ್ ಪಡುಕೋಣೆ, ಭಾರತೀಯ ಕ್ರೀಡಾಪಟುಗಳ ಮೇಲೆ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಕನ್ನಡತಿ ಅಶ್ವಿನಿ ಪೊನ್ನಪ್ಪ ತಿರುಗೇಟು ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: ಒಲಿಂಪಿಕ್ಸ್‌ ಪದಕ ಗೆಲ್ಲಬೇಕಿದ್ದರೆ ಆಟಗಾರರು ಹೆಚ್ಚು ಜವಾಬ್ದಾರಿಯಿಂದ ಆಡಬೇಕು ಎಂದಿದ್ದ ದಿಗ್ಗಜ ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ ಅವರ ಹೇಳಿಕೆಗೆ ತಾರಾ ಶಟ್ಲರ್‌ ಅಶ್ವಿನಿ ಪೊನ್ನಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಟಗಾರರು ಗೆದ್ದಾಗ ಅದರ ಶ್ರೇಯಸ್ಸು ಕೋಚ್‌ಗಳಿಗೂ ಸಲ್ಲುತ್ತದೆ, ಸೋತಾಗ ಏಕೆ ಕೋಚ್‌ಗಳು ಹೊಣೆ ಹೊರುವುದಿಲ್ಲ ಎಂದು ಅಶ್ವಿನಿ ಪ್ರಶ್ನಿಸಿದ್ದಾರೆ.

ಸೋಮವಾರ ಕಂಚಿನ ಪದಕ ಪಂದ್ಯದಲ್ಲಿ ಲಕ್ಷ್ಯ ಸೇನ್‌ ಸೋತ ಬಳಿಕ ಮಾತನಾಡಿದ್ದ ಪ್ರಕಾಶ್‌ ಅವರು, ‘ಸೋತರೆ ಕ್ರೀಡಾಪಟುಗಳು ಜವಾಬ್ದಾರಿ ಹೊರಬೇಕೇ ಹೊರತು, ಕ್ರೀಡಾ ಒಕ್ಕೂಟಗಳಲ್ಲ’ ಎಂದಿದ್ದರು. ಈ ಬಗ್ಗೆ ಇನ್‌ಸ್ಟಾಗ್ರಾಂ ಪೋಸ್ಟ್‌ ಮಾಡಿರುವ ಅಶ್ವಿನಿ, ‘ಸೋತರೆ ಅದು ಆಟಗಾರನ ತಪ್ಪು ಮಾತ್ರ ಏಕೆ ಆಗುತ್ತದೆ? ಅಭ್ಯಾಸದ ಕೊರತೆಯ ಕಾರಣಕ್ಕೆ ಕೋಚ್‌ಗಳು ಯಾಕೆ ಹೊಣೆ ಹೊರುವುದಿಲ್ಲ? ಗೆದ್ದಾಗ ಅದು ತಂಡದ ಗೆಲುವಾದರೆ, ಸೋತರೂ ಅದು ತಂಡದ ಸೋಲೇ ಆಗಿರುತ್ತದೆ. ಎಲ್ಲವನ್ನೂ ಆಟಗಾರನ ಮೇಲೆ ಹೊರಿಸುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos

ಪ್ಯಾರಾ ಅಥ್ಲೀಟ್‌ಗೆ ಅವಾಚ್ಯವಾಗಿ ನಿಂದಿಸಿದ ಕೋಚ್‌ ಸತ್ಯ: ಆರೋಪ

ಬೆಂಗಳೂರು: ಅರ್ಜುನ ಪ್ರಶಸ್ತಿ ವಿಜೇತ ಪ್ಯಾರಾ ಈಜು ಪಟು ಪ್ರಶಾಂತ್‌ ಕರ್ಮಕಾರ್‌ ವಿರುದ್ಧ ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ(ಪಿಸಿಐ)ಯ ಅಥ್ಲೆಟಿಕ್ಸ್‌ ವಿಭಾಗದ ಮುಖ್ಯಸ್ಥ, ಪ್ಯಾರಾ ಅಥ್ಲೆಟಿಕ್ಸ್‌ ಕೋಚ್‌ ಸತ್ಯನಾರಾಯಣ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸತ್ಯ ವಿರುದ್ಧ ಕ್ರಮಕೈಗೊಳ್ಳಲು ಭಾರತೀಯ ಕ್ರೀಡಾ ಇಲಾಖೆ, ಪ್ಯಾರಾಲಿಂಪಿಕ್ಸ್‌ ಸಮಿತಿಗೆ ಕರ್ನಾಟಕ ರಾಜ್ಯ ವಿಕಲಾಂಗ ಕ್ರೀಡಾಪಟುಗಳ ಸಂಸ್ಥೆ(ಕೆಎಸ್‌ಎಪಿಎಚ್‌) ಆಗ್ರಹಿಸಿದೆ.

ಬೀದಿಯಲ್ಲಿ ಪ್ರತಿಭಟಿಸಿದಳು, ಮೃಗದಂತೆ ಎಳೆದಾಡಿದರು: ವಿನೇಶ್ ಫೊಗಾಟ್, ನೀನು ಹೆಣ್ಣಲ್ಲ, ಹೆಣ್ಣು ಹುಲಿ!

‘ಅಧಿಕಾರ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಹರ್ಯಾಣದ ಪ್ರಶಾಂತ್‌ ಅವರು ಸತ್ಯನಾರಾಯಣರನ್ನು ಪ್ರಶ್ನಿಸಿದ್ದರು. ಈ ವೇಳೆ ಪ್ರಶಾಂತ್‌, ಅವರ ಕುಟುಂಬಸ್ಥರ ಬಗ್ಗೆ ಸತ್ಯನಾರಾಯಣ ಹಾಗೂ ಪಿಸಿಐ ಜಂಟಿ ಕಾರ್ಯದರ್ಶಿ ದಿವಾಕರ್‌ ನಿಂದನಾತ್ಮಕ ಮಾತುಗಳನ್ನಾಡಿದ್ದಾರೆ ಎಂದು ಕೆಎಸ್‌ಎಪಿಎಚ್‌ ಅಧ್ಯಕ್ಷ, ಪದ್ಮಶ್ರೀ ವಿಜೇತ ಕೆ.ವೈ. ವೆಂಕಟೇಶ್‌ ಅವರು ದೂರಿದ್ದಾರೆ. ಅಲ್ಲದೆ ಸತ್ಯನಾರಾಯಣರನ್ನು ಕೆಎಸ್‌ಎಪಿಎಚ್‌ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಿ, ನೋಟಿಸ್‌ ಜಾರಿಗೊಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸತ್ಯನಾರಾಯಣರನ್ನು ‘ಕನ್ನಡಪ್ರಭ’ ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಟಿಟಿ: ಪ್ರಿ ಕ್ವಾರ್ಟರ್‌ನಲ್ಲೇ ಸೋತ ಭಾರತ ಪುರುಷರು

ಒಲಿಂಪಿಕ್ಸ್‌ನ ಟೇಬಲ್‌ ಟೆನಿಸ್‌ ಪುರುಷರ ತಂಡ ವಿಭಾಗದಲ್ಲಿ ಭಾರತ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ಹೊರಬಿದ್ದಿದೆ. ಮಂಗಳವಾರ ನಡೆದ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಭಾರತಕ್ಕೆ ಚೀನಾ ವಿರುದ್ಧ 0-3 ಅಂತರದಲ್ಲಿ ಸೋಲು ಎದುರಾಯಿತು. ಮೊದಲ ಡಬಲ್ಸ್‌ನಲ್ಲಿ ಹರ್ಮೀತ್‌ ದೇಸಾಯಿ-ಮಾನವ್‌ ಥಾಕರ್‌ ಸೋತರೆ, ಬಳಿಕ ಸಿಂಗಲ್ಸ್‌ನಲ್ಲಿ ಕ್ರಮವಾಗಿ ಶರತ್‌ ಕಮಾಲ್‌ ಹಾಗೂ ಮಾನವ್‌ ಪರಾಭವಗೊಂಡರು. ಇದರೊಂದಿಗೆ ಪುರುಷರ ತಂಡದ ಅಭಿಯಾನ ಅಂತ್ಯಗೊಂಡಿತು. ಮಹಿಳಾ ತಂಡ ಸೋಮವಾರ ಕ್ವಾರ್ಟರ್‌ಗೇರಿತ್ತು.
 

click me!