Korea Open 2022‌: ಪಿವಿ ಸಿಂಧು, ಕಿದಂಬಿ ಶ್ರೀಕಾಂತ್‌ 2ನೇ ಸುತ್ತಿಗೆ ಲಗ್ಗೆ

By Kannadaprabha NewsFirst Published Apr 7, 2022, 8:16 AM IST
Highlights

* ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಿಂಧು, ಶ್ರೀಕಾಂತ್ ಶುಭಾರಂಭ

* ಅಮೆರಿಕದ ಲಾರೆನ್‌ ಲ್ಯಾಮ್‌ ವಿರುದ್ಧ ಸಿಂಧು ಜಯಭೇರಿ

* ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಮಲೇಷ್ಯಾದ ಡ್ಯಾರೆನ್‌ ಲೀವ್‌ ಎದುರು ಜಯ

ಸಿಂಚೊನ್‌(ದ.ಕೊರಿಯಾ): 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ.ಸಿಂಧು (PV Sindhu) ಹಾಗೂ ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತ ಕಿದಂಬಿ ಶ್ರೀಕಾಂತ್‌ (Kidambi Srikanth) ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಿಂಧು, ಅಮೆರಿಕದ ಲಾರೆನ್‌ ಲ್ಯಾಮ್‌ ವಿರುದ್ಧ 21-15, 21-14 ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಅವರು ಜಪಾನಿನ ಆಯಾ ಒಹೊರಿ ವಿರುದ್ಧ ಸ್ಪರ್ಧಿಸಲಿದ್ದಾರೆ. 

ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಮಲೇಷ್ಯಾದ ಡ್ಯಾರೆನ್‌ ಲೀವ್‌ ಅವರನ್ನು 22-20, 21-11 ನೇರ ಸೆಟ್‌ಗಳಲ್ಲಿ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅವರಿಗೆ ಇಸ್ರೇಲ್‌ನ ಮಿಶಾ ಜಿಲ್ಬೆರ್‌ಮನ್‌ ಎದುರಾಗಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಅರ್ಜುನ್‌-ಧ್ರುವ್‌ ಕಪಿಲ್‌, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸುಮತ್‌ ರೆಡ್ಡಿ ಕೂಡಾ 2ನೇ ಸುತ್ತು ಪ್ರವೇಶಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಶ್ರೀ ಕೃಷ್ಣ ಪ್ರಿಯಾ ಸೋಲನುಭವಿಸಿದರು.

ಇದಕ್ಕೂ ಮೊದಲು ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಭಾರತದ ಯುವ ಶಟ್ಲರ್‌ ಲಕ್ಷ್ಯ ಸೆನ್‌ (Lakshya Sen) ಹಾಗೂ ಮಾಳವಿಕಾ ಬನ್ಸೋದ್‌ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Korea Open Badminton Tournament) ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿ 20 ವರ್ಷದ ಸೆನ್‌, ದ.ಕೊರಿಯಾದ ಚೊಯಿ ಜಿ ಹೂನ್‌ ವಿರುದ್ಧ 14-21, 21-16, 21-18 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಅವರು ಇಂಡೋನೇಷ್ಯಾದ ಶೇಸರ್‌ ಹಿರೇನ್‌ ವಿರುದ್ಧ ಸ್ಪರ್ಧಿಸಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಚೀನಾದ ಹಾನ್‌ ಯೂ ವಿರುದ್ಧ 20​-22, 22​-20, 21​-10 ಸೆಟ್‌ಗಳಲ್ಲಿ ಜಯ ಗಳಿಸಿದರು.

ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಬಾತ್ರಾಗೆ ಸಿಬಿಐ ಸಂಕಷ್ಟ

ನವದೆಹಲಿ: ಹಾಕಿ ಇಂಡಿಯಾದ (Hockey India) ಹಣವನ್ನು ದುರ್ಬಳಕೆ ಮಾಡಿರುವ ಆರೋಪ ಎದುರಿಸುತ್ತಿರುವ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (Indian Olympic Association) ಅಧ್ಯಕ್ಷ ನರೇಂದ್ರ ಬಾತ್ರಾ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಸಿಬಿಐ) ಪ್ರಾಥಮಿಕ ತನಿಖೆ ಆರಂಭಿಸಿದೆ. ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಅಧ್ಯಕ್ಷರೂ ಆಗಿರುವ ಬಾತ್ರಾ ಹಾಕಿ ಇಂಡಿಯಾದ 35 ಲಕ್ಷ ರು. ಹಣವನ್ನು ತಮ್ಮ ವೈಯಕ್ತಿಕ ಕಾರಣಕ್ಕೆ ಬಳಸಿದ ಆರೋಪವಿದೆ. ಹೀಗಾಗಿ ಅವರ ವಿರುದ್ಧ ತನಿಖೆ ಆರಂಭಿಸಿದ್ದೇವೆ ಎಂದು ಬುಧವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 1975ರ ಹಾಕಿ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ಅಸ್ಲಂ ಶೇರ್‌ ಖಾನ್‌, ಹಾಕಿ ಇಂಡಿಯಾದಲ್ಲಿ ಬಾತ್ರಾ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಇತ್ತೀಚೆಗೆ ಆರೋಪಿಸಿದ್ದರು.

Sports Awards: ಕರುಣ್ ನಾಯರ್, ಅಶ್ವಲ್ ರೈ, ಪ್ರಶಾಂತ್ ಕುಮಾರ್ ರೈಗೆ ಒಲಿದ ಏಕಲವ್ಯ ಪ್ರಶಸ್ತಿ

ಫೆಡರೇಶನ್‌ ಕಪ್‌: ಕಂಚು ಗೆದ್ದ ರಾಜ್ಯದ ಪ್ರಿಯಾ

ಕಲ್ಲಿಕೋಟೆ: 25ನೇ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಕೂಟದ ಕೊನೆ ದಿನವಾದ ಬುಧವಾರ ಕರ್ನಾಟಕದ ಪ್ರಿಯಾ ಮೋಹನ್‌ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳಾ ವಿಭಾಗದ 200 ಮೀ. ಓಟದಲ್ಲಿ ಅವರು 23.85 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಜಯಿಸಿದರು. ಕರ್ನಾಟಕ 7 ಪದಕ(1 ಚಿನ್ನ, 2 ಬೆಳ್ಳಿ, 4 ಕಂಚು)ದೊಂದಿಗೆ ಅಭಿಯಾನ ಕೊನೆಗೊಳಿಸಿತು.

click me!