Junior Hockey World Cup: ಒಡಿಶಾದಲ್ಲಿ ಇಂದಿನಿಂದ ಜೂನಿಯರ್ ಹಾಕಿ ವಿಶ್ವಕಪ್ ಆರಂಭ

By Kannadaprabha NewsFirst Published Nov 24, 2021, 10:07 AM IST
Highlights

* ಭುವನೇಶ್ವರ್‌ದಲ್ಲಿಂದು 12ನೇ ಆವೃತ್ತಿಯ ಪುರುಷರ ಜೂನಿಯರ್‌ ಹಾಕಿ ವಿಶ್ವಕಪ್‌ ಟೂರ್ನಿಗೆ ಚಾಲನೆ

* ಉದ್ಘಾಟನಾ ಪಂದ್ಯದಲ್ಲಿ ಭಾರತಕ್ಕೆ ಫ್ರಾನ್ಸ್ ಎದುರಾಳಿ

* ಹಾಲಿ ಚಾಂಪಿಯನ್ ಭಾರತಕ್ಕೆ ಮೂರನೇ ಟ್ರೋಫಿ ಮೇಲೆ ಕಣ್ಣು

ಭುವನೇಶ್ವರ(ನ.24): 12ನೇ ಆವೃತ್ತಿಯ ಪುರುಷರ ಜೂನಿಯರ್‌ ಹಾಕಿ ವಿಶ್ವಕಪ್‌ಗೆ (Junior Hockey World Cup) ಮಂಗಳವಾರದಿಂದ ಚಾಲನೆ ಲಭಿಸಲಿದ್ದು, ಒಡಿಶಾ (Odisha) ಆತಿಥ್ಯ ವಹಿಸಲಿದೆ. ಹಾಲಿ ಚಾಂಪಿಯನ್‌ ಭಾರತ ತಂಡ ಫ್ರಾನ್ಸ್‌ ವಿರುದ್ಧ ತನ್ನ ಚೊಚ್ಚಲ ಪಂದ್ಯವನ್ನು ಆಡಲಿದ್ದು, ಈ ಮೂಲಕ ಅಭಿಯಾನ ಆರಂಭಿಸಲಿದೆ. ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ (Kalinga Stadium) ಡಿ.5ರ ವರೆಗೂ ಟೂರ್ನಿ ನಡೆಯಲಿದ್ದು, ಭಾರತ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 

10ನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ 2001 ಹಾಗೂ 2016ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಆಸ್ಪ್ರೇಲಿಯಾ (Australia) ಹಾಗೂ ಇಂಗ್ಲೆಂಡ್‌ (England) ತಂಡಗಳ ಅನುಪಸ್ಥಿತಿಯಲ್ಲಿ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ವಿವೇಕ್‌ ಸಾಗರ್‌ ಪ್ರಸಾದ್‌ ನಾಯಕತ್ವದ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ.

16 ತಂಡಗಳಿರುವ ಟೂರ್ನಿಯಲ್ಲಿ ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಫ್ರಾನ್ಸ್‌ ಬಳಿಕ ಕೆನಡಾ ಹಾಗೂ ಪೋಲೆಂಡ್‌ ವಿರುದ್ಧ ಕ್ರಮವಾಗಿ ನ.25 ಹಾಗೂ ನ.27ರಂದು ಸೆಣಸಾಡಲಿದೆ. ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.

ಸುಧೀರ್‌ ಹ್ಯಾಟ್ರಿಕ್‌ ಗೋಲಿನ ಕಮಾಲ್‌: ಕರ್ನಾಟಕ ಶುಭಾರಂಭ

ಬೆಂಗಳೂರು: ಸುಧೀರ್‌ ಕೋಟಿಕೆಲ ಹ್ಯಾಟ್ರಿಕ್‌ ಗೋಲಿನ ಕಮಾಲ್‌ನಿಂದ ಕರ್ನಾಟಕ ತಂಡವು ಸಂತೋಷ್‌ ಟ್ರೋಫಿ (Santosh Football Trophy) ಫುಟ್ಬಾಲ್‌ ದಕ್ಷಿಣ ವಲಯ ಅರ್ಹತಾ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ. ಮಂಗಳವಾರ ತಮಿಳುನಾಡು ವಿರುದ್ಧ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕವು (Karnataka Football Team) 4-0 ಗೋಲುಗಳ ಭರ್ಜರಿ ಜಯ ಸಾಧಿಸಿತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಇಳಿದ ಕರ್ನಾಟಕದ ಆಟಗಾರರು, ಪಂದ್ಯದ ಮೇಲೆ ಹಿಡಿತ ಸಾಧಿಸಿದರು. 11ನೇ ನಿಮಿಷದಲ್ಲಿ ಕಮಲೇಶ್‌.ಪಿ ಗೋಲು ಬಾರಿಸುವ ಮೂಲಕ ಕರ್ನಾಟಕಕ್ಕೆ ಮುನ್ನಡೆ ತಂದುಕೊಟ್ಟರು.

64th National Rifle Shooting Championship ಕ್ರೀಡಾಕೂಟಕ್ಕೆ ಮಧ್ಯಪ್ರದೇಶ ಶೂಟಿಂಗ್ ಅಕಾಡಮಿ ಆತಿಥ್ಯ

ಸುಧೀರ್‌ ಹ್ಯಾಟ್ರಿಕ್‌ ಮೋಡಿ:

ಈ ವೇಳೆ ತಮ್ಮ ಕಾಲ್ಚಳಕ ತೋರಿದ ಸುಧೀರ್‌ 42, 53 ಹಾಗೂ 75ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ, ಅಂತರವನ್ನು 4-0ಗೆ ಹೆಚ್ಚಿಸಿದರು. ತಮಿಳುನಾಡು ಆಟಗಾರರು ಸುಧೀರ್‌ ಹ್ಯಾಟ್ರಿಕ್‌ ಹೊಡೆತಕ್ಕೆ ತಬ್ಬಿಬ್ಬುಗೊಂಡರು. ಅಂತಿಮ ಕ್ಷಣದ ತನಕ ಎದುರಾಳಿಗೆ ಒಂದು ಗೋಲು ಗಳಿಸಲು ಅವಕಾಶ ಬಿಟ್ಟುಕೊಡದ ಕರ್ನಾಟಕ ಜಯವನ್ನು ತನ್ನದಾಗಿಸಿಕೊಂಡಿತು.

‘ಎ’ ಗುಂಪಿನಲ್ಲಿ ಕರ್ನಾಟಕದ ಜೊತೆಗೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ತಂಡಗಳಿದ್ದು, ಅಗ್ರಸ್ಥಾನ ಪಡೆಯುವ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಲಿದೆ. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಆಂಧ್ರಪ್ರದೇಶ ವಿರುದ್ಧ ಗುರುವಾರ ಆಡಲಿದೆ.

ಐಎಸ್‌ಎಲ್‌: ಬಿಎಫ್‌ಸಿಗೆ ಇಂದು ಒಡಿಶಾ ಸವಾಲು

ವಾಸ್ಕೊ ಡಾ ಗಾಮ(ಗೋವಾ): 8ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) (Indian Super League) ಫುಟ್ಬಾಲ್‌ ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) (Bengaluru FC) ತಂಡ ಬುಧವಾರ ಒಡಿಶಾ ಎಫ್‌ಸಿ (Odisha FC) ವಿರುದ್ಧ ಸೆಣಸಾಡಲಿದೆ. 

ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಬಿಎಫ್‌ಸಿ (BFC) ತಂಡ ನಾರ್ಥ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ ಗೆದ್ದು ಶುಭಾರಂಭ ಮಾಡಿತ್ತು. ಸದ್ಯ ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಸುನಿಲ್‌ ಚೆಟ್ರಿ (Sunil Chhetri) ಪಡೆ 2ನೇ ಪಂದ್ಯದಲ್ಲೂ ಮೇಲುಗೈ ಸಾಧಿಸುವ ಉತ್ಸಾಹದಲ್ಲಿದೆ. ಇನ್ನು, ಒಡಿಶಾ ತಂಡಕ್ಕೆ ಇದು ಮೊದಲ ಪಂದ್ಯವಾಗಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ.

click me!