ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ ರೇಸ್‌ನಲ್ಲಿ ಚಿನ್ನದ ಹುಡುಗ ನೀರಜ್ ಚೋಪ್ರಾ..!

By Kannadaprabha NewsFirst Published Feb 3, 2022, 5:57 PM IST
Highlights

* ಜಾಗತಿಕ ಪ್ರಶಸ್ತಿ ರೇಸ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ 

*  ಪ್ರತಿಷ್ಠಿತ ಲಾರೆಸ್‌ ‘ವರ್ಲ್ಡ್ ಬ್ರೇಕ್‌ಥ್ರೂ ಆಫ್‌ ದ ಇಯರ್‌‘ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನೀರಜ್

*  ನೀರಜ್‌ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 3ನೇ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ

ಲಂಡನ್(ಫೆ.03)‌: ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಐತಿಹಾಸಿಕ ಚಿನ್ನದ ಪದಕ ಗೆದ್ದ ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ(Neeraj Chopra), ಪ್ರತಿಷ್ಠಿತ ಲಾರೆಸ್‌ ‘ವರ್ಲ್ಡ್ ಬ್ರೇಕ್‌ಥ್ರೂ ಆಫ್‌ ದ ಇಯರ್‌‘ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನೀರಜ್‌ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 3ನೇ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದು, ಇದಕ್ಕೂ ಮೊದಲು ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ (Sachin Tendulkar) ಹಾಗೂ ಕುಸ್ತಿ ಪಟು ವಿನೇಶ್‌ ಫೋಗಟ್‌ (Vinesh Phogat) ನಾಮನಿರ್ದೇಶನಗೊಂಡಿದ್ದರು. ಈ ಪೈಕಿ ಸಚಿನ್‌ ‘ಲಾರೆಸ್‌ ಸ್ಪೋರ್ಟಿಂಗ್‌ ಮೋಮೆಂಟ್‌’ ಪ್ರಶಸ್ತಿ ಗೆದ್ದುಕೊಂಡಿದ್ದರು.

ವರ್ಷದ ಶ್ರೇಷ್ಠ ಕ್ರೀಡಾ ಸಾಧನೆಗಾಗಿ ಕೊಡಲಾಗುವ ಈ ಪ್ರಶಸ್ತಿಗೆ ನೀರಜ್‌ ಜೊತೆ ಟೆನಿಸ್‌ ತಾರೆಗಳಾದ ಡ್ಯಾನಿಲ್‌ ಮೆಡ್ವೆಡೆವ್‌ ಹಾಗೂ ಎಮ್ಮಾ ರಾಡುಕಾನು ಸೇರಿ ಇತರರು ನಾಮನಿರ್ದೇಶನಗೊಂಡಿದ್ದಾರೆ. ವಿಶ್ವದ 1300 ಕ್ರೀಡಾ ಪತ್ರಕರ್ತರು 7 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶಿತರನ್ನು ಆಯ್ಕೆ ಮಾಡಿದ್ದು, ಏಪ್ರಿಲ್‌ನಲ್ಲಿ ವಿಜೇತರನ್ನು ಘೋಷಿಸಲಿದೆ.

ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದರೊಂದಿಗೆ ಶತಮಾನಗಳ ಬಳಿಕ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಒಲಿಂಪಿಕ್ಸ್‌ನಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

A special feeling to be nominated along with some exceptional athletes for the Laureus World Breakthrough of the Year award.

Congratulations to , , , and Ariarne Titmus on their nominations. 🇮🇳 pic.twitter.com/16pUMmvQBE

— Neeraj Chopra (@Neeraj_chopra1)

ಚಳಿಗಾಲದ ಒಲಿಂಪಿಕ್ಸ್‌: ಭಾರತ ತಂಡದ ಮ್ಯಾನೇಜರ್‌ಗೆ ಸೋಂಕು

ಬೀಜಿಂಗ್‌: ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಬೀಜಿಂಗ್‌ಗೆ ತೆರಳಿದ್ದ ಭಾರತೀಯ ತಂಡದ ಮ್ಯಾನೇಜರ್‌ ಮೊಹಮದ್‌ ಅಬ್ಬಾಸ್‌ ವಾನಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ವಿಚಾರನ್ನು ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ) ಅಧ್ಯಕ್ಷ ನರೇಂದ್ರ ಬಾತ್ರಾ ಖಚಿತಪಡಿಸಿದ್ದಾರೆ. 

IPL Auction 2022: ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡು ಅದೃಷ್ಟ ಪರೀಕ್ಷೆಗೆ ಮುಂದಾದ ಬಂಗಾಳ ಕ್ರೀಡಾ ಸಚಿವ..!

ಈ ಒಲಿಂಪಿಕ್ಸ್‌ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿರುವ ಸ್ಕೀಯಿಂಗ್‌ ಪಟು, ಜಮ್ಮು ಮತ್ತು ಕಾಶ್ಮೀರದ ಆರಿಫ್‌ ಖಾನ್‌ ಹಾಗೂ ಸಿಬ್ಬಂದಿ ಜೊತೆ ಅಬ್ಬಾಸ್‌ ಅವರು ಬೀಜಿಂಗ್‌ಗೆ ತೆರಳಿದ್ದು, ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಸೋಂಕು ಪತ್ತೆಯಾಗಿದೆ. ಒಲಿಂಪಿಕ್ಸ್‌ ಫೆ.4ರಿಂದ 20ರ ವರೆಗೆ ನಡೆಯಲಿದೆ. ಆರಿಫ್‌ ಅವರು ಸ್ಲಾಲೊಮ್‌ ಹಾಗೂ ಜೈಂಟ್‌ ಸ್ಲಾಲೊಮ್‌ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

ಐಎಸ್‌ಎಲ್‌ ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಮಾರ್ಗೋ: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಪರಿಷ್ಕೃತ ವೇಳಾಪಟ್ಟಿಯನ್ನು ಆಯೋಜಕರು ಪ್ರಕಟಿಸಿದ್ದು, ಫೆಬ್ರವರಿ 9ರಿಂದ ಮಾರ್ಚ್‌ 7ರ ವರೆಗೆ 25 ಪಂದ್ಯಗಳು ನಡೆಯಲಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಹಲವು ಪಂದ್ಯಗಳು ಮುಂದೂಡಿಕೆಯಾಗಿರುವುದರಿಂದ ಆಯೋಜಕರು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದಾರೆ. 

ಎಟಿಕೆ ಮೋಹನ್‌ ಬಗಾನ್‌ ಹಾಗೂ ಜಮ್ಶೇಡ್‌ಪುರ ಎಫ್‌ಸಿ ನಡುವೆ ಮಾ.7ಕ್ಕೆ ಕೊನೆ ಪಂದ್ಯ ನಡೆಯಲಿದೆ. ಫೆಬ್ರವರಿ 19, ಫೆಬ್ರವರಿ 26 ಮತ್ತು ಮಾರ್ಚ್‌ 5ಕ್ಕೆ ಎರಡೆರಡು ಪಂದ್ಯಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಭಾರತಕ್ಕೆ ಆಗಮಿಸಿದ ವಿಂಡೀಸ್‌ ಆಟಗಾರರು

ಅಹಮದಾಬಾದ್‌: ಭಾರತ ವಿರುದ್ಧದ ಸರಣಿಗಾಗಿ ವೆಸ್ಟ್‌ಇಂಡೀಸ್‌ ಆಟಗಾರರು ಅಹಮದಾಬಾದ್‌ಗೆ ಆಗಮಿಸಿದರು. ಈ ಬಗ್ಗೆ ವಿಂಡೀಸ್‌ ಕ್ರಿಕೆಟ್‌ ಮಂಡಳಿಯ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಮಾಹಿತಿ ನೀಡಲಾಗಿದ್ದು, ಆಟಗಾರರ ಫೋಟೋ, ವಿಡಿಯೋ ಹಂಚಿಕೊಂಡಿದೆ. 

ಕೀರನ್‌ ಪೊಲ್ಲಾರ್ಡ್‌ ನಾಯಕತ್ವದ ತಂಡ ಇನ್ನು 3 ದಿನ ಕ್ವಾರಂಟೈನ್‌ನಲ್ಲಿ ಇರಲಿದ್ದು, ಬಳಿಕ ಏಕದಿನ ಸರಣಿಗೆ ಅಭ್ಯಾಸ ಆರಂಭಿಸಲಿದೆ. ಏಕದಿನ ಸರಣಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಫೆ.6ರಿಂದ ಆರಂಭವಾಗಲಿದೆ. ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಅವಕಾಶ ನಿರಾಕರಿಸಲಾಗಿದ್ದು, ಖಾಲಿ ಕ್ರೀಡಾಂಗಣದಲ್ಲಿ ಸರಣಿ ನಡೆಯಲಿದೆ. ಸರಣಿಯ ಇನ್ನುಳಿದ ಪಂದ್ಯಗಳು ಫೆಬ್ರವರಿ 9 ಮತ್ತು 11ಕ್ಕೆ ನಡೆಯಲಿವೆ. ಬಳಿಕ 3 ಪಂದ್ಯಗಳ ಸರಣಿಗೆ ಕೋಲ್ಕತಾ ಆತಿಥ್ಯ ವಹಿಸಲಿದ್ದು, ಫೆ.16, 18 ಮತ್ತು 20ಕ್ಕೆ ಪಂದ್ಯಗಳು ನಡೆಯಲಿವೆ.
 

click me!