Indonesia Open Badminton: ಸಿಂಧು ಸೋಲಿನೊಂದಿಗೆ ಭಾರತದ ಹೋರಾಟ ಅಂತ್ಯ

Suvarna News   | Asianet News
Published : Nov 28, 2021, 08:54 AM IST
Indonesia Open Badminton: ಸಿಂಧು ಸೋಲಿನೊಂದಿಗೆ ಭಾರತದ ಹೋರಾಟ ಅಂತ್ಯ

ಸಾರಾಂಶ

* ಇಂಡೋನೇಷ್ಯಾ ಓಪನ್‌ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯ * ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು * ಇನ್ನು ಪುರುಷರ ಡಬಲ್ಸ್‌ನಲ್ಲಿ ಚಿರಾಗ್-ಸಾತ್ವಿಕ್‌ರಾಜ್ ಜೋಡಿಗೆ ಸೋಲು

ಬಾಲಿ(ನ.28): ಟೋಕಿಯೋ ಒಲಿಂಪಿಕ್ಸ್‌(Tokyo Olympics) ಯಶಸ್ಸಿನ ಬಳಿಕ ಪದಕದ ಬರ ಎದುರಿಸುತ್ತಿರುವ ಭಾರತದ ತಾರಾ ಶಟ್ಲರ್‌ ಪಿ ವಿ ಸಿಂಧು (PV Sindhu) ಮತ್ತೊಮ್ಮೆ ಸೆಮಿಫೈನಲ್‌ನಲ್ಲಿ ಸೋತು ಪದಕದ ಕನಸನ್ನು ಭಗ್ನಗೊಳಿಸಿದ್ದಾರೆ. ಶನಿವಾರ ನಡೆದ ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ (Indonesia Open Badminton) ಟೂರ್ನಿಯ ಮಹಿಳಾ ಸಿಂಗಲ್ಸ್‌ನ ಸೆಮೀಸ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಸಿಂಧು, ಥಾಯ್ಲೆಂಡ್‌ನ ರಾಚನೋಕ್‌ ಇಂಟನಾನ್‌ ವಿರುದ್ಧ 21​-15, 9-​21, 14-​21 ಗೇಮ್‌ಗಳಿಂದ ಸೋಲನುಭವಿಸಿದರು. 

ಮೊದಲ ಗೇಮ್‌ನಲ್ಲಿ ಸಿಂಧು ಜಯಗಳಿಸಿದರೂ ಮುಂದಿನ 2 ಗೇಮ್‌ಗಳಲ್ಲಿ ರಾಚನೋಕ್‌ ಮೇಲುಗೈ ಸಾಧಿಸಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಸಿಂಧು ಬಳಿಕ ಯಾವುದೇ ಪದಕ ಗೆಲ್ಲಲು ವಿಫಲರಾಗಿದ್ದಾರೆ. ಡೆನ್ಮಾರ್ಕ್ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದ ಅವರು, ಇಂಡೋನೇಷ್ಯಾ ಮಾಸ್ಟ​ರ್ಸ್‌ ಹಾಗೂ ಫ್ರೆಂಚ್‌ ಓಪನ್‌ನಲ್ಲಿ ಸೆಮೀಸ್‌ನಲ್ಲಿ ನಿರ್ಗಮಿಸಿದ್ದರು. ಸಿಂಧು ಕೊನೆಯ ಬಾರಿ ಸ್ವಿಸ್‌ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದರು.

ಇನ್ನು, ಶನಿವಾರ ನಡೆದ ಪುರುಷರ ಡಬಲ್ಸ್‌ನಲ್ಲಿ ರಂಕಿರೆಡ್ಡಿ-ಚಿರಾಗ್‌ ಶೆಟ್ಟಿಜೋಡಿ ಇಂಡೋನೇಷ್ಯಾದ ಮಾರ್ಕಸ್‌ ಫೆರ್ನಾಲ್ಡಿ-ಕೆವಿನ್‌ ಸಂಜಯ ಜೋಡಿ ವಿರುದ್ಧ ಸೆಮೀಸ್‌ನಲ್ಲಿ ಸೋತು ನಿರ್ಗಮಿಸಿತು. ಇದರೊಂದಿಗೆ ಇಂಡೋನೇಷ್ಯಾ ಓಪನ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.

ಜೂನಿಯರ್ ಹಾಕಿ ವಿಶ್ವಕಪ್‌: ಕ್ವಾರ್ಟರ್ ತಲುಪಿದ ಭಾರತ

ಭುವನೇಶ್ವರ: ಜೂನಿಯರ್ ಹಾಕಿ ವಿಶ್ವಕಪ್ (Junior Hockey World Cup) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಕ್ವಾರ್ಟರ್ ಫೈನಲ್‌ ಸುತ್ತಿಗೆ ಲಗ್ಗೆಯಿಟ್ಟಿದೆ. ಶನಿವಾರ ನಡೆದ ಪೋಲೆಂಡ್ ವಿರುದ್ದದ ಪಂದ್ಯದಲ್ಲಿ ಭಾರತ 8-2 ಗೋಲುಗಳಿಂದ ಜಯ ಸಾಧಿಸಿದೆ. ಇದರೊಂದಿಗೆ 'ಬಿ' ಗುಂಪಿನಲ್ಲಿ 6 ಅಂಕಗಳೊಂದಿಗೆ ಎರಡನೇ ಸ್ಥಾನಿಯಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. 

Indonesia Open Badminton: ಸೆಮಿಫೈನಲ್‌ಗೆ ಪಿ ವಿ ಸಿಂಧು ಲಗ್ಗೆ

ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ದ ಸೋತಿದ್ದ ಭಾರತ, ಎರಡನೇ ಪಂದ್ಯದಲ್ಲಿ ಕೆನಡಾ ವಿರುದ್ದ 13-1 ಗೋಲುಗಳ ಅಂತರದ ಭರ್ಜರಿ ಗೆಲುವನ್ನು ಸಾಧಿಸಿತ್ತು. ಇದೀಗ ಭಾರತ ತಂಡವು ಡಿಸೆಂಬರ್ 01ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ತಂಡದ ವಿರುದ್ದ ಕಣಕ್ಕಿಳಿಯಲಿದೆ.

ವಿಶ್ವ ಟಿಟಿ: ಮನಿಕಾ ಬಾತ್ರಾ-ಅರ್ಚನಾ, ಸತ್ಯನ್‌-ಮನಿಕಾ ಜೋಡಿ ಕ್ವಾರ್ಟರ್‌ಗೆ

ಹೌಸ್ಟನ್‌(ಅಮೆರಿಕಾ): ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ (World Table Tennis Championship) ಭಾರತ ಮಹಿಳಾ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಶುಕ್ರವಾರ ನಡೆದ ಮಹಿಳಾ ಡಬಲ್ಸ್‌ ಅಂತಿಮ 16ರ ಸುತ್ತಿನ ಸ್ಪರ್ಧೆಯಲ್ಲಿ ಮನಿಕಾ ಬಾತ್ರಾ-ಅರ್ಚನಾ ಕಾಮತ್‌ ಜೋಡಿ, ಹಂಗೇರಿಯ ಡೊರಾ ಮಡಾರಸ್‌-ಜಾರ್ಜಿನಾ ಪೊಟ ವಿರುದ್ಧ 11-​4, 11-​9, 6​-11, 11​-7 ಅಂತರದಲ್ಲಿ ಗೆಲುವು ಸಾಧಿಸಿತು. 

Junior Hockey World Cup: ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ..!

ಕ್ವಾರ್ಟರ್‌ನಲ್ಲಿ ಈ ಜೋಡಿ ಲಕ್ಸೆಂಬರ್ಗ್‌ನ ಸರಾಹ್‌-ಕ್ಸಿಯಾ ಲಿಯಾನ್‌ ಜೋಡಿ ವಿರುದ್ಧ ಸ್ಪರ್ಧಿಸಲಿದೆ. ಮಿಶ್ರ ಡಬಲ್ಸ್‌ನಲ್ಲಿ ಮನಿಕಾ-ಜಿ.ಸತ್ಯನ್‌ ಜೋಡಿ ಅಮೆರಿಕಾ-ಚೀನಾದ ಕನಕ್‌ ಝಾ-ವ್ಯಾಂಗ್‌ ಮಾನ್ಯು ಜೋಡಿ ವಿರುದ್ಧ 15-​17, 10-​12, 12​-10, 11​-6, 11​-7 ಅಂತರದಲ್ಲಿ ಗೆಲುವು ಸಾಧಿಸಿತು. ಈ ಜೋಡಿ ಜಪಾನಿನ ಹರಿಮೊಟೊ-ಹಯಾತ ಹಿನಾ ವಿರುದ್ಧ ಕ್ವಾರ್ಟರ್‌ನಲ್ಲಿ ಸೆಣಸಾಡಲಿದೆ. ಆದರೆ, ಮಿಶ್ರ ಡಬಲ್ಸ್‌ನಲ್ಲಿ ಶರತ್‌-ಅರ್ಚನಾ ಜೋಡಿ ಅಂತಿಮ 16ರ ಸುತ್ತಿನ ಸ್ಪರ್ಧೆಯಲ್ಲಿ ಸೋತು ನಿರ್ಗಮಿಸಿತು.

ಸಂತೋಷ್‌ ಟ್ರೋಫಿ: ಮುಂದಿನ ಸುತ್ತಿಗೆ ಪ್ರವೇಶಿಸಿದ ಕರ್ನಾಟಕ

ಬೆಂಗಳೂರು: ಗುಂಪು ಹಂತದ ಅಂತಿಮ ಪಂದ್ಯದಲ್ಲಿ 2-0 ಗೋಲುಗಳ ಅಂತರದಿಂದ ತೆಲಂಗಾಣವನ್ನು ಮಣಿಸಿದ ಕರ್ನಾಟಕ ತಂಡವು, 75ನೇ ಆವೃತ್ತಿಯ ಸಂತೋಷ್‌ ಟ್ರೋಫಿ ದಕ್ಷಿಣ ವಲಯ ಅರ್ಹತಾ ಸುತ್ತಿನಲ್ಲಿ ಜಯಭೇರಿ ಬಾರಿಸಿ ಮುಂದಿನ ಹಂತ ಪ್ರವೇಶಿಸಿತು. ಗುಂಪು ಹಂತದ ಮೂರೂ ಪಂದ್ಯಗಳಲ್ಲೂ ಅಜೇಯವಾಗಿ ಉಳಿದ ಕರ್ನಾಟಕ 9 ಅಂಕಗಳೊಂದಿಗೆ, ಅಗ್ರಸ್ಥಾನ ಗಳಿಸಿ ಮುಂದಿನ ಹಂತಕ್ಕೇರಿತು.

ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಆರಂಭದಿಂದಲೂ ಮೇಲುಗೈ ಸಾಧಿಸಿತು. 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಕರ್ನಾಟಕ ಮೊದಲ ಮುನ್ನಡೆ ಸಾಧಿಸಿತು. ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಸೋಲೈಮಲೈ, ಕರ್ನಾಟಕಕ್ಕೆ 1-0 ಮುನ್ನಡೆ ಒದಗಿಸಿದರು. 74ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದ ಬಾವು ನಿಶಾದ್‌ ಗೋಲುಗಳ ಅಂತರವನ್ನು 2-0ಗೆ ಏರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!