
ಮೆಕ್ಸಿಕೋ ಸಿಟಿ(ಫೆ.24): ಪಂದ್ಯದಲ್ಲಿ ಸೋತ ಬಳಿಕ ವಿಶ್ವ ನಂ.3 ಟೆನಿಸಿಗ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ (Alexander Zverev) ಅಂಪೈರ್ ಮೇಲೆ ದಾಳಿಗೆ ಯತ್ನಿಸಿದ ಆಘಾತಕಾರಿ ಘಟನೆ ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ (Mexican Open) ನಡೆದಿದೆ. ಬುಧವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಜ್ವೆರೆವ್ ಹಾಗೂ ಬ್ರೆಜಿಲ್ನ ಮಾರ್ಸೆಲೋ ಮೆಲೊ ಜೋಡಿ ಬ್ರಿಟನ್ನ ಲಾಯ್ಡ್ ಗ್ಲಾಸ್ಪೂಲ್, ಫಿನ್ಲ್ಯಾಂಡ್ನ ಹ್ಯಾರಿ ಜೋಡಿ ವಿರುದ್ಧ ಸೋಲುನುಭವಿಸಿತು. ಇದರಿಂದ ತಾಳ್ಮೆ ಕಳೆದುಕೊಂಡ ಜ್ವೆರೆವ್, ಅಂಪೈರ್ ಕುಳಿತಿದ್ದ ಕುರ್ಚಿಗೆ ರಾಕೆಟ್ನಿಂದ ಸತತವಾಗಿ ಬಡಿದಿದ್ದಾರೆ.
ಅಲ್ಲದೇ, ಅಂಪೈರ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ವಿಶ್ವದ ಅಗ್ರ ಆಟಗಾರನ ಅನುಚಿತ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಿಂಗಲ್ಸ್ ಸ್ಪರ್ಧೆಯಿಂದ ವಜಾಗೊಳಿಸಿದ ಆಯೋಜಕರು ಅವರನ್ನು ಟೂರ್ನಿಯಿಂದಲೇ ಹೊರ ಹಾಕಿದ್ದಾರೆ. 24 ವರ್ಷದ ಜ್ವೆರೆವ್ಗೆ ಟೆನಿಸ್ ವೃತ್ತಿಪರರ ಸಂಸ್ಥೆ (ಎಟಿಪಿ)ಯಿಂದ ಭಾರೀ ದಂಡ ಹಾಗೂ ನಿಷೇಧಕ್ಕೊಳಪಡಿಸುವ ಸಾಧ್ಯತೆಯಿದೆ.
ರಾಡಕಾನು ಬೆನ್ನು ಬಿದ್ದಿದ್ದ ಭಾರತೀಯ ಮೂಲದ ವ್ಯಕ್ತಿಗೆ ಕೋರ್ಟ್ ಶಿಕ್ಷೆ!
ಲಂಡನ್: ಬ್ರಿಟನ್ನ ಯುವ ಟೆನಿಸ್ ತಾರೆ ಎಮ್ಮಾ ರಾಡುಕಾನು ಅವರನ್ನು ಹಿಂಬಾಲಿಸುತ್ತಿದ್ದ ಭಾರತೀಯ ಮೂಲದ ಅಮ್ರಿತ್ ಮಗರ್ ಒಂಬ ವ್ಯಕ್ತಿಗೆ ಸ್ಥಳೀಯ ಕೋರ್ಟ್ 18 ತಿಂಗಳ ಸಾರ್ವಜನಿಕ ಸೇವೆ ಶಿಕ್ಷೆ ವಿಧಿಸಿದೆ. ಇದರಲ್ಲಿ 200 ಗಂಟೆಗಳ ಕಾಲ ವೇತನ ರಹಿತ ಕೆಲಸ ಮಾಡಬೇಕಿದೆ.
Pro Kabaddi League : ಬೆಂಗಳೂರು ಬುಲ್ಸ್ ಗೆ ನಿರಾಸೆ, ಪಟನಾ-ದೆಹಲಿ ಪ್ರಶಸ್ತಿ ಕಾದಾಟ!
ಅಮ್ರಿತ್ ರಾಡುಕಾನುರ 3 ಬಾರಿ ರಾಡುಕಾನು ಮನೆಗೆ ಭೇಟಿ ನೀಡಿದ್ದು, ನೆನಪಿಗಾಗಿ ಮನೆ ಮುಂದೆ ಇದ್ದ ಒಂದು ಶೂ ಕದ್ದಿದ್ದಾರೆ. ಜೊತೆಗೆ ಮನೆ ಅಂಗಳದಲ್ಲಿ ಉಡುಗೊರೆಗಳು, ಹೂಗುಚ್ಛ, ಗ್ರೀಟಿಂಗ್ ಕಾರ್ಡ್ಗಳನ್ನು ಬಿಟ್ಟು ಹೋಗಿದ್ದಾರೆ. ಸಿಸಿಟೀವಿಯಲ್ಲಿ ಅಮ್ರಿತ್ ಮುಖ ಸೆರೆಯಾಗಿದ್ದು, ರಾಡುಕಾನು ಅವರ ತಂದೆ ನೀಡಿದ ದೂರನ್ನು ಆಧರಿಸಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ರಾಡುಕಾನು ಅವರ ಮನೆ ಇರುವ ರಸ್ತೆ, ಅವರು ಅಭ್ಯಾಸ ನಡೆಸುವ ಸ್ಥಳ, ಆಡುವ ಕ್ರೀಡಾಂಗಣದ ಬಳಿ 5 ವರ್ಷಗಳ ಕಾಲ ಸುಳಿಯದಂತೆ ಕೋರ್ಟ್ ಆದೇಶ ನೀಡಿದೆ.
ಟಾಫ್ಸ್ಗೆ ಕರ್ನಾಟಕದ ಪ್ಯಾರಾ ಅಥ್ಲೀಟ್ ರಾಧಾ ಸೇರ್ಪಡೆ
ನವದೆಹಲಿ: 2024ರ ಪ್ಯಾರಾಲಿಂಪಿಕ್ಸ್ ಹಾಗೂ ಇತರ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಆರು ಪ್ಯಾರಾ ಕ್ರೀಡಾಪಟುಗಳನ್ನು ಕೇಂದ್ರ ಕ್ರೀಡಾ ಸಚಿವಾಲಯವು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯ(ಟಾಪ್) ಯೋಜನೆಗೆ ಸೇರ್ಪಡೆಗೊಳಿಸಿದೆ. 6 ಮಂದಿ ಪೈಕಿ ಕರ್ನಾಟಕ ಅಂಧ ಅಥ್ಲೀಟ್ ರಾಧಾ ವೆಂಕಟೇಶ್ ಸಹ ಇದ್ದಾರೆ. ರಾಧಾ 400 ಮೀ., 1500 ಮೀ., ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. 2018ರ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ರಾಧಾ 2 ಪದಕ ಜಯಿಸಿದ್ದರು.
ಡೆಲ್ಲಿ vs ಪಾಟ್ನಾ ಪ್ರೊ ಕಬಡ್ಡಿ ಫೈನಲ್
ರೈಡ್ ಮಷಿನ್ ಪವನ್ ಕುಮಾರ್ರ ಏಕಾಂಗಿ ಹೋರಾಟ ಬೆಂಗಳೂರು ಬುಲ್ಸ್ ಫೈನಲ್ಗೇರಲು ಸಾಕಾಗಲಿಲ್ಲ. ನಿರ್ಣಾಯಕ ಪಂದ್ಯದಲ್ಲಿ ಡಿಫೆಂಡರ್ಗಳು, ಸಹಾಯಕ ರೈಡರ್ಗಳು ವೈಫಲ್ಯ ಅನುಭವಿಸಿದ ಪರಿಣಾಮ, 8ನೇ ಆವೃತ್ತಿಯ ಪ್ರೊ ಕಬಡ್ಡಿ ಸೆಮಿಫೈನಲ್ನಲ್ಲಿ ಬೆಂಗಳೂರು ತಂಡ ದಬಾಂಗ್ ಡೆಲ್ಲಿ ವಿರುದ್ಧ 35-40ರಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿತ್ತು.
7ನೇ ಆವೃತ್ತಿಯ ಸೆಮಿಫೈನಲ್ನಲ್ಲೂ ಬುಲ್ಸ್, ಡೆಲ್ಲಿಗೆ ಶರಣಾಗಿತ್ತು. ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಡೆಲ್ಲಿ, ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಮತ್ತೊಂದು ಸೆಮಿಫೈನಲ್ನಲ್ಲಿ ಯು.ಪಿ.ಯೋಧಾಗೆ ಸೋಲುಣಿಸಿದ ಪಾಟ್ನಾ ಪೈರೇಟ್ಸ್ 4ನೇ ಬಾರಿಗೆ ಫೈನಲ್ಗೇರಿತು.
ನಾಳೆ ಫೈನಲ್ ಹಣಾಹಣಿ
ಪಾಟ್ನಾ ಹಾಗೂ ದಬಾಂಗ್ ಡೆಲ್ಲಿ ನಡುವಿನ ಫೈನಲ್ ಪಂದ್ಯ ಶುಕ್ರವಾರ ನಡೆಯಲಿದೆ. ಪಂದ್ಯ ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ. ಪಾಟ್ನಾ 4ನೇ ಬಾರಿಗೆ ಚಾಂಪಿಯನ್ ಆಗಲು ಎದುರು ನೋಡುತ್ತಿದ್ದರೆ, ಡೆಲ್ಲಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.