ಕೇಂದ್ರ ಕ್ರೀಡಾ ಕಾರ‍್ಯದರ್ಶಿಗೆ ಕ್ರೀಡೆಯ ಗಂಧಗಾಳಿ ಗೊತ್ತಿಲ್ಲ: ಟೆನಿಸ್ ಸಂಸ್ಥೆ ಬೇಸರ

By Suvarna NewsFirst Published Apr 18, 2020, 8:04 AM IST
Highlights

ಕೇಂದ್ರ ಕ್ರೀಡಾ ಕಾರ್ಯದರ್ಶಿಗೆ ಹೇಳುವುದು ಮಾತ್ರ ಗೊತ್ತು, ಕೇಳಿಸಿಕೊಳ್ಳುವ ವ್ಯವಧಾನವಿಲ್ಲ ಎಂದು ಭಾರತೀಯ ಟೆನಿಸ್ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ. ಯಾಕೆ ಹೀಗೆ ಅಂದ್ರು? ಏನಿವರ ಕಥೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ನವದೆಹಲಿ(ಏ.18): ಕೇಂದ್ರ ಕ್ರೀಡಾ ಕಾರ‍್ಯದರ್ಶಿ ರಾಧೆಶ್ಯಾಮ್‌ ಜುಲಾನಿಯಾ ನಡೆ ಬಗ್ಗೆ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜುಲಾನಿಯಾ ಅವರಿಗೆ ಕ್ರೀಡೆಯ ಬಗ್ಗೆ ಗಂಧಗಾಳಿ ಗೊತ್ತಿಲ್ಲ ಎಂದು ಎಐಟಿಎ ಪ್ರಧಾನ ಕಾರ‍್ಯದರ್ಶಿ ಹಿರಣ್ಮೋಯ್‌ ಚಟರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ. 

ಗುರುವಾರ ಎಐಟಿಎ ಸೇರಿದಂತೆ 10 ರಾಷ್ಟ್ರೀಯ ಫೆಡರೇಷನ್‌ಗಳ ಮುಖ್ಯಸ್ಥರ ಜತೆ ಜುಲಾನಿಯಾ ವಿಡಿಯೋ ಕಾನ್ಫರೆನ್ಸ್‌ ನಡೆಸಿದರು. ಈ ವೇಳೆ ಅವರು ನೀಡಿದ ಸಲಹೆಗಳ ಬಗ್ಗೆ ಎಐಟಿಎ ಪ್ರಧಾನ ಕಾರ‍್ಯದರ್ಶಿ ಹಿರಣ್ಮೋಯ್‌ ಚಟರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕ್ರಿಕೆಟರ್ ಅಥವಾ ಟೆನಿಸ್ ಪಟು? ಪುತ್ರನ ಕರಿಯರ್ ಕುತೂಹಲಕ್ಕೆ ಉತ್ತರ ನೀಡಿದ ಸಾನಿಯಾ

‘ಜುಲಾನಿಯಾ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಸಿದ್ಧರಿರಲಿಲ್ಲ. ಅವರಷ್ಟೇ ಮಾತನಾಡಬೇಕು ಎಂದು ತಾಕೀತು ಮಾಡಿದರು. ಯುವ ಟೆನಿಸ್‌ ಪ್ರತಿಭೆಗಳನ್ನು ಹುಡುಕಲು ಶಾಲೆಗಳಲ್ಲಿನ ದೈಹಿಕ ಶಿಕ್ಷಕರನ್ನು ಬಳಸಿಕೊಳ್ಳಿ ಎಂದರು. 2024, 2028ರ ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಒಂದು ಪುಟದ ಪ್ರಸ್ತಾಪ ನೀಡಿ, ಪುಟಗಟ್ಟಲೆ ಬರೆದು ಕಳುಹಿಸಬೇಡಿ ಎಂದರು. ಜತೆಗೆ ಒಲಿಂಪಿಕ್ಸ್‌ ಬಗ್ಗೆ ಮಾತ್ರ ಚರ್ಚಿಸಿ, ಏಷ್ಯನ್‌ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ನಂತಹ ಸ್ಥಳೀಯ ಕ್ರೀಡಾಕೂಟಗಳ ಬಗ್ಗೆ ಸರ್ಕಾರ ಚಿಂತಿಸುವುದಿಲ್ಲ ಎಂದು ಉಡಾಫೆಯಿಂದ ಮಾತನಾಡಿದರು’ ಎಂದು ಚಟರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಹೇಳಿದ್ದು ಇಷ್ಟವಾಗಿಲ್ಲ ಎಂದರೆ ಅದು ಅವರ ಸಮಸ್ಯೆಯೇ ಹೊರತು ನನ್ನದಲ್ಲ. ಸರ್ಕಾರದ ಭಾಗವಾಗಿ ಕ್ರೀಡೆಯನ್ನು ಅಭಿವೃದ್ದಿ ಪಡಿಸುವುದಷ್ಟೇ ನಮ್ಮ ಕೆಲಸ ಎಂದು ಕೇಂದ್ರ ಕ್ರೀಡಾ ಕಾರ‍್ಯದರ್ಶಿ ರಾಧೆಶ್ಯಾಮ್‌ ಜುಲಾನಿಯಾ ಪ್ರತಿಕ್ರಿಯಿಸಿದ್ದಾರೆ.
 

click me!