ಅನೇಕರು ವಾಹಿನಿ ಕಚೇರಿಗೂ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಯಕ್ಷಗಾನ ಹಾಡು ಬಳಸಿ, ಯಕ್ಷಗಾನದ ಆಖ್ಯಾನಗಳನ್ನು ಬಳಸಿ ಅನ್ಯ ರಂಗದತ್ತ ಈ ಕಲೆಯನ್ನು ಕೊಂಡೊಯ್ಯುವುದು ಸರಿಯಲ್ಲ. ಇದರಿಂದ ವೀಕ್ಷಕರಿಗೆ ಯಕ್ಷಗಾನವನ್ನು ಹೇಗೂ ಬಳಕೆ ಮಾಡಬಹುದು ಎನ್ನುವ ತಪ್ಪು ಸಂದೇಶ ಹೋಗುತ್ತದೆ.
ಮಂಗಳೂರು[ಜು.24]: ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ‘ಮುಕಾಬಲಾ’ ಸಿನಿಮಾ ಹಾಡಿಗೆ ಕಲಾ ತಂಡವೊಂದು ಯಕ್ಷಗಾನ ವೇಷ ಧರಿಸಿ ನೃತ್ಯ ಪ್ರದರ್ಶನ ನೀಡಿದ್ದು ಇದೀಗ ಕರಾವಳಿಯ ಯಕ್ಷಗಾನ ಅಭಿಮಾನಿ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಕ್ಷಗಾನದ ಆರಾಧನಾ ಪರಂಪರೆಯ ಹಿರಿಮೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕಲೆಗೆ ಅಪಚಾರ ಎಸಗಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲೂ ಬಿರುಸಿನ ಚರ್ಚೆಗೆ ಕಾರಣವಾಗಿದೆ. ಯಕ್ಷಗಾನಕ್ಕೇ ಮೀಸಲಾಗಿರುವ ಅನೇಕ ವಾಟ್ಸಪ್ ಗ್ರೂಪ್’ಗಳಲ್ಲಿ ಅಭಿಮಾನಿಗಳು ಕೆಂಡ ಕಾರತೊಡಗಿದ್ದಾರೆ. ಕಳೆದೆರಡು ದಿನಗಳಿಂದ ಈ ಕುರಿತು ಭಾರಿ ಚರ್ಚೆಯೇ ಆರಂಭವಾಗಿದೆ.
ಅನೇಕರು ವಾಹಿನಿ ಕಚೇರಿಗೂ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಯಕ್ಷಗಾನ ಹಾಡು ಬಳಸಿ, ಯಕ್ಷಗಾನದ ಆಖ್ಯಾನಗಳನ್ನು ಬಳಸಿ ಅನ್ಯ ರಂಗದತ್ತ ಈ ಕಲೆಯನ್ನು ಕೊಂಡೊಯ್ಯುವುದು ಸರಿಯಲ್ಲ. ಇದರಿಂದ ವೀಕ್ಷಕರಿಗೆ ಯಕ್ಷಗಾನವನ್ನು ಹೇಗೂ ಬಳಕೆ ಮಾಡಬಹುದು ಎನ್ನುವ ತಪ್ಪು ಸಂದೇಶ ಹೋಗುತ್ತದೆ. ಮೂಲ ಸಂಸ್ಕೃತಿಯನ್ನು ನಮ್ಮ ತೆವಲಿಗೆ ಬೇಕಾದಂತೆ ಬಳಸಿಕೊಳ್ಳುವುದು ಹೇಯ ಕಾರ್ಯ’ ಎಂದು ಯಕ್ಷಗಾನ ಸಂಘಟಕ ಭಾಗವತ ಸುರೇಂದ್ರ ಪಣಿಯೂರು ‘ಕನ್ನಡಪ್ರಭ’ದೊಂದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.