
ಮೈಸೂರು(ಮಾ.27): ನಂಜನಗೂಡು ಗುಂಡ್ಲುಪೇಟೆ ಉಪಚುನಾವಣಾ ಕಣಗಳು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬೇಸಿಗೆಯ ಬಿರು ಬಿಸಿಲನ್ನು ಲೆಕ್ಕಿಸದೇ ಕಾಂಗ್ರೆಸ್ ಮತ್ತು ಬಿಜೆಪಿ ಸತಾಯಗತಾಯ ಗೆಲುವು ಸಾಧಿಸಲೇ ಬೇಕು ಅಂತಾ ಬಿರುಸಿನ ಪ್ರಚಾರ ಕೈಗೊಂಡಿವೆ. ಈ ಚುನಾವಣೆ ಎರಡೂ ಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದು, ಉಭಯ ಪಕ್ಷಗಳು ಗೆಲುವಿನ ಕುದುರೆಯ ಹಿಂದೆ ಬಿದ್ದಿವೆ.
ಮಹಿಳೆಯರನ್ನೇ ಟಾರ್ಗೆಟ್ ಮಾಡಿರುವ ಉಭಯ ಪಕ್ಷಗಳು, ಒಬ್ಬರ ನ್ಯೂನ್ಯತೆಗಳನ್ನು ಮತ್ತೊಬ್ಬರು ಎತ್ತಿ ತೋರಿಸುತ್ತಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಬಿಜೆಪಿಯಂತು ಮಹಿಳೆಯರಿಗಾಗಿಯೇ ಬರಗಿ ಹಾಗೂ ಹಂಗಳ ಗ್ರಾಮದಲ್ಲಿ ಮಹಿಳಾ ಸಮಾವೇಶ ನಡೆಸಿ, ಮಹಿಳೆಯರ ಮತಯಾಚನೆಗೆ ದೊಡ್ಡ ವೇದಿಕೆಯನ್ನೇ ನಿರ್ಮಿಸಿತ್ತು.
ಗೆಲುವು ಸಾಧಿಸಲು ಕಾಂಗ್ರೆಸ್-ಬಿಜೆಪಿ ರಣತಂತ್ರ ಹೆಣೆಯುತ್ತಿರುವಾಗಲೇ ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಮಕ್ಕಳು ಪ್ರಚಾರ ಕದನ ಆರಂಭಿಸಿದ್ದಾರೆ. ನಿನ್ನೆ ಹುಲ್ಲಹಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರಚಾರ ನಡೆಸಿದ್ರೆ, ಇಂದು ಅದಕ್ಕೆ ಪ್ರತಿತಂತ್ರ ಎನ್ನುವಂತೆ ಬಿಎಸ್ವೈ ಪುತ್ರ ರಾಘವೇಂದ್ರ ಅಖಾಡಕ್ಕಿಳಿದಿದ್ರು. ಜೊತೆಗೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ನಂಜನಗೂಡು ಪಟ್ಟಣದಲ್ಲಿ ಪ್ರಚಾರ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ಮತ ಬೇಟೆಗೆ ಮುಂದಾದರು.
ನಂಜನಗೂಡು ಕ್ಷೇತ್ರದ ಉಪ ಚುನಾವಣೆ ಕದನ ತೀವ್ರಗೊಳ್ಳುತ್ತಿದ್ದು, ಅಧಿವೇಶನ ಮುಗಿಯುತ್ತಿದ್ದಂತೆ ಸಿಎಂ ಸೇರಿ ಎಲ್ಲಾ ಸಂಪುಟ ಸದಸ್ಯರು ಇಲ್ಲಿಯೇ ವಾಸ್ಯವ್ಯ ಹೂಡಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಒಟ್ನಲ್ಲಿ ಕೈ ಮತ್ತು ಕಮಲ ಪಾಳಯದ ಜಿದ್ದಾ ಜಿದ್ದಿನ ಹೋರಾಟಕ್ಕೆ ಈ ಬೈ ಎಲೆಕ್ಷನ್ ಸಾಕ್ಷಿಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.