
ಬೆಂಗಳೂರು (ಸೆ.01): ಗೃಹ ಖಾತೆಗಾಗಿ ಹಂಬಲಿಸಿ ಸತತ ಪ್ರಯತ್ನ ನಡೆಸಿದ ರಮಾನಾಥ ರೈ ಅವರಿಗೆ ಕಡೆಗೂ ನಿರಾಶೆಯಾಗಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಖಾತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಿಜೆಪಿ ರಮಾನಾಥ ರೈ ವಿರುದ್ಧ ನಡೆಸಲು ಉದ್ದೇಶಿಸಿದ್ದ ಹೋರಾಟ ಹಾಗೂ ರೈ ಸಚಿವರಾದರೇ ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂಬ ಗುಪ್ತಚರ ವರದಿ.
ಹೀಗಾಗಿ, ಈ ಖಾತೆಯನ್ನು ಮತ್ತೊಬ್ಬ ಹಿರಿಯ ಸಚಿವ ರಾಮಲಿಂಗಾರೆಡ್ಡಿಗೆ ನೀಡಲು ಮನಸ್ಸು ಮಾಡಿದರು ಎಂದು ಮೂಲಗಳು ತಿಳಿಸಿವೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಹಿಡಿತ ಬಲಗೊಳಿಸಲು ಹಾಗೂ ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿರುವ ಸಂಘ ಪರಿವಾರಕ್ಕೆ ತಕ್ಕ ಉತ್ತರ ನೀಡಲು ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡಬೇಕು ಎಂಬುದು ಕರಾವಳಿ ಭಾಗದ ಕಾಂಗ್ರೆಸ್ ನಾಯಕರ ಆಗ್ರಹವಾಗಿತ್ತು. ಆರಂಭದಲ್ಲಿ ಇದು ಸಮಂಜಸವೆಂದೇ ಸಿಎಂ ಅವರಿಗೂ ತೋರಿತ್ತು.
ಅಲ್ಲದೆ, ರೈಗೆ ಗೃಹ ಖಾತೆ ನೀಡಿದರೆ ಆ ಖಾತೆಯನ್ನು ಪರೋಕ್ಷವಾಗಿ ಹತೋಟಿಯಲ್ಲಿಟ್ಟುಕೊಳ್ಳಲು ಅನುಕೂಲ ಎಂಬ ಯೋಚನೆಯೂ ಸಿದ್ದರಾಮಯ್ಯ ಆಪ್ತ ಬಳಗಕ್ಕೆ ಇತ್ತು. ಆದರೆ, ಬಿಜೆಪಿ ಹೋರಾಟ ಹಾಗೂ ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂಬ ಗುಪ್ತಚರ ಇಲಾಖೆ ವರದಿ ಹಿನ್ನೆಲೆಯಲ್ಲಿ ಸಿಎಂ ತಮ್ಮ ನಿಲುವು ಬದಲಾಯಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.