ಸ್ವಚ್ಛ ಭಾರತ ಅಭಿಯಾನಕ್ಕೆ ಡಬ್ಲ್ಯೂಹೆಚ್ ಓ ಶ್ಲಾಘನೆ! ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಯೋಜನೆ! ಯೋಜನೆಯಿಂದ ಮೂರು ಲಕ್ಷ ಜೀವ ಉಳಿಸಲು ಸಾಧ್ಯ! ಕಾಯಿಲೆ ಮುಕ್ತ ಭಾರತ ನಿರ್ಮಾಣಕ್ಕೆ ಮುನ್ನುಡಿ
ವಾಷಿಂಗ್ಟನ್[ಆ.4]: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸ್ವಚ್ಛ ಭಾರತ ಯೋಜನೆಯಿಂದ ವರ್ಷಕ್ಕೆ ಮೂರು ಲಕ್ಷ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ ಎಂದು ಡಬ್ಲ್ಯೂಹೆಚ್ ಓ ಹೇಳಿದೆ. ಆರೋಗ್ಯಕರ ಭಾರತದೆಡೆಗೆ ಸಾಗುವ ಈ ಯೋಜನೆಯನ್ನು ಬಹುವಾಗಿ ಮೆಚ್ಚಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. 2019ರೊಳಗೆ ದೇಶವನ್ನು ಬಯಲು ಶೌಚ ಮುಕ್ತವಾಗಿರಿಸುವ ಗುರಿಯನ್ನು ಈ ಮಹತ್ವಾಕಾಂಕ್ಷಿ ಯೋಜನೆಯು ಹೊಂದಿದೆ.
2019ರ ಗುರಿಯ ಪ್ರಕಾರ ಭಾರತವು ಬಯಲು ಶೌಚ ಮುಕ್ತವಾದರೆ ಜನರು ಡಯೋರಿಯಾ ಮುಂತಾದ ಕಾಯಿಲೆಗಳಿಗೆ ಗುರಿಯಾಗುವುದನ್ನು ತಪ್ಪಿಸಬಹುದಾಗಿದೆ. ಮಾತ್ರವಲ್ಲದೆ ವರ್ಷಕ್ಕೆ ಮೂರು ಲಕ್ಷ ಜನರು ಸಾಯುವುದನ್ನು ತಪ್ಪಿಸಬಹುದಾಗಿದೆ.
ಜೊತೆಗೆ 1.40 ಕೋಟಿ ಜನರು ಆರೋಗ್ಯಕರ ಜೀವನ ನಡೆಸುವುದು ಸಾಧ್ಯವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ಸ್ವಚ್ಛ ಭಾರತ ಗ್ರಾಮೀಣ ಅಭಿಯಾನದಿಂದ ಹಳ್ಳಿಗರ ಆರೋಗ್ಯ ಸುಧಾರಿಸುವುದಲ್ಲದೆ ಅವರು ದೀರ್ಘಾಯುಗಳಾಗಲು ಸಾಧ್ಯ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.