
ನವದೆಹಲಿ: ಕೊಡಗು ಹಾಗೂ ಕೇರಳದಲ್ಲಿ ಭಾರಿ ಪ್ರವಾಹ, ಭೂಕುಸಿತ ಸೃಷ್ಟಿಸಿದ ಮಾರಣಾಂತಿಕ ಮಳೆಗೆ ಏನು ಕಾರಣ ಎಂಬುದನ್ನು ಹವಾಮಾನ ತಜ್ಞರು ಕೊನೆಗೂ ಭೇದಿಸಿದ್ದಾರೆ.
ಕೊಡಗು ಹಾಗೂ ಕೇರಳವನ್ನು ಒಳಗೊಂಡಿರುವ ಪಶ್ಚಿಮಘಟ್ಟಶ್ರೇಣಿಯಲ್ಲಿ ಮುಂಗಾರು ತೀವ್ರಗೊಂಡಿದ್ದ ಸಂದರ್ಭದಲ್ಲೇ ಕೊಂಕಣದಿಂದ ಕೇರಳದವರೆಗಿನ ಪಶ್ಚಿಮಘಟ್ಟದಲ್ಲಿ ಹಾಗೂ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ ಮತ್ತು ‘ಸೋಮಾಲಿ ಜೆಟ್’ನಿಂದಾಗಿ ಭಾರಿ ಮಳೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಆಫ್ರಿಕಾ ಖಂಡದ ಪೂರ್ವ ಭಾಗದ ಬಳಿ ಇರುವ ಮಡಗಾಸ್ಕರ್ ಎಂಬ ದ್ವೀಪದೇಶದ ಬಳಿ ಎದ್ದ ಮಾರುತ ಉತ್ತರಾಭಿಮುಖವಾಗಿ ಸಾಗುತ್ತದೆ. ಮರುತಿರುವು ಪಡೆದು ಪಶ್ಚಿಮಘಟ್ಟದತ್ತ ಬರುತ್ತದೆ. ಅದೇ ಸೋಮಾಲಿ ಜೆಟ್ ಬೆಳವಣಿಗೆ. ಅಷ್ಟರಲ್ಲಾಗಲೇ ಪಶ್ಚಿಮಘಟ್ಟಶ್ರೇಣಿಯಲ್ಲಿ ಮುಂಗಾರು ತೀವ್ರಗೊಂಡಿತ್ತು. ವಾಯುಭಾರ ಕುಸಿತವೂ ಉಂಟಾಗಿತ್ತು. ಇದರಿಂದ ಮಳೆ ಬಿರುಸುಪಡೆದಿತ್ತು. ಇಂತಹ ಸಂದರ್ಭದಲ್ಲಿ ಒಡಿಶಾ ಬಳಿ ವಾಯುಭಾರ ಕುಸಿತ ಉಂಟಾಗಿ ಅರಬ್ಬೀ ಸಮುದ್ರದಿಂದ ಭಾರಿ ಗಾಳಿಯನ್ನು ಸೆಳೆದಿದೆ.
ಹೀಗೆ ಸಾಗಿದ ಗಾಳಿಗೆ ಪಶ್ಚಿಮಘಟ್ಟದಲ್ಲಿ ತಡೆಯುಂಟಾಗಿ ಆಗಲೇ ಸುರಿಯುತ್ತಿದ್ದ ಮಳೆಗೆ ಮತ್ತಷ್ಟುವೇಗ ಕೊಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಅಧಿಕಾರಿಗಳು ವಿವರಿಸಿದ್ದಾರೆ.
ಜಲಪ್ರಳಯಕ್ಕೆ ಕಾರಣ ‘ಸೋಮಾಲಿ ಜೆಟ್’!
ಕೊಡಗು, ಕೇರಳದ ಅನಾಹುತಕಾರಿ ಮಳೆಯ ರಹಸ್ಯ ಭೇದಿಸಿದ ಹವಾಮಾನ ತಜ್ಞರು
1. ಆಫ್ರಿಕಾ ಬಳಿಯ ಮಡಗಾಸ್ಕರ್ ದ್ವೀಪ ಬಳಿ ಎದ್ದ ಮಾರುತ
2. ದಕ್ಷಿಣ ಭೂಗೋಳದಿಂದ ಉತ್ತರಾಭಿಮುಖವಾಗಿ ಸಂಚಾರ
3. ದಿಕ್ಕು ಬದಲಿಸಿ ಭಾರತದತ್ತ: ಇದಕ್ಕೆ ಸೋಮಾಲಿ ಜೆಟ್ ಹೆಸರು
4. ಇದೇ ವೇಳೆಗೆ ಒಡಿಶಾ ಕರಾವಳಿಯಲ್ಲಿ ವಾಯುಭಾರ ಕುಸಿತ
5. ಸೆಳೆತದಿಂದಾಗಿ ದಿಕ್ಕು ಬದಲಿಸಿ ಪಶ್ಚಿಮಘಟ್ಟಕ್ಕೆ ಅಪ್ಪಳಿಸಿದ ಗಾಳಿ
6. ಇದರಿಂದಾಗಿ ಮುಂಗಾರು ಜೋರಾಗಿದ್ದ ಕಡೆ ಪ್ರಚಂಡ ಮಳೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.