ಪತ್ರಿಕೋದ್ಯಮದ ಬಗ್ಗೆ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಇರುವುದರ ಬಗ್ಗೆ ವಿಜಯಲಕ್ಷ್ಮೀ ವಿಷಾದ ವ್ಯಕ್ತಪಡಿಸಿದರು.
ಕಾರವಾರ(ಜ. 08): ಸುವರ್ಣನ್ಯೂಸ್'ನ ಪತ್ರಕರ್ತೆ, ಕವರ್ ಸ್ಟೋರಿ ಖ್ಯಾತಿಯ ವಿಜಯಲಕ್ಷ್ಮೀ ಶಿಬರೂರು ಅವರಿಗೆ ಕರಾವಳಿ ರತ್ನ ಪ್ರಶಸ್ತಿ ಸಿಕ್ಕಿದೆ. ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಕಾರ್ಯಕ್ರಮದಂದು ವಿಜಯಲಕ್ಷ್ಮೀಗೆ ಈ ಗೌರವ ಲಭಿಸಿದೆ. ಈ ವೇಳೆ ಮಾತನಾಡಿದ ವಿಜಯಲಕ್ಷ್ಮೀ, ಪತ್ರಿಕೋದ್ಯಮದ ಬಗ್ಗೆ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಇರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಪತ್ರಕರ್ತರ ಈಗಿನ ಸ್ಥಿತಿಯನ್ನು ರಾಮಾಯಣದಲ್ಲಿನ ಸೀತೆಗೆ ಹೋಲಿಸಿದ ಅವರು, ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕಾದ ಸ್ಥಿತಿ ಪತ್ರಕರ್ತರಿಗೆ ಬಂದಿದೆ ಎಂದು ಖೇದ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ, ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ನಡೆದ ಬೆಳ್ಳಿಹಬ್ಬಕ್ಕೆ ನಾಡಿನ ಹಿರಿಯ ಕವಿ ನಾಡೋಜ ಕೆಎಸ್ ನಿಸಾರ್ ಅಹ್ಮದ್ ಚಾಲನೆ ನೀಡಿದರು. ನಟ ನೆನಪಿರಲಿ ಪ್ರೇಮ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಕವಿ ನಿಸಾರ್ ಅಹ್ಮದ್, ಭಾಷೆಯ ಬೆಳವಣಿಗೆಯಲ್ಲಿ ಪತ್ರಿಕೆಯ ಪಾತ್ರದ ಮಹತ್ವವನ್ನು ತಿಳಿಹೇಳಿದರು.
- ಕಡತೋಕಾ ಮಂಜು, ಸುವರ್ಣನ್ಯೂಸ್, ಕಾರವಾರ