ಸಮಾನ ನಾಗರಿಕ ಸಂಹಿತೆ ವಿಚಾರದಲ್ಲಿ ರಾಜಕೀಯ ಯಾಕೆ? ಪ್ರಧಾನಿ ಹೆಸರನ್ನೇಕೆ ಎಳೆದು ತರುತ್ತೀರಿ?

By KP news deskFirst Published Oct 15, 2016, 2:42 AM IST
Highlights

‘‘ಟ್ರಿಪಲ್‌ ತಲಾಖ್‌ ಕೊನೆಯಾಗ​ಬೇ​ಕೆಂ​ಬುದು ದೇಶದ ಒತ್ತಾಸೆ. ನಿಮ್ಮ ವಾದದಲ್ಲಿ ಪ್ರಮುಖ ಅಂಶವಿದ್ದರೆ, ಅದನ್ನು ಜನತೆಯ ಮುಂದಿಡಿ, ಚರ್ಚೆಗೆ ಚಾಲನೆ ನೀಡಿ. ಪ್ರಧಾನಿ ಹೆಸರನ್ನೇಕೆ ತರುತ್ತೀರಿ...?'' ಎಂದು ನಾಯ್ಡು ಹೇಳಿದ್ದಾರೆ.

ನವದೆಹಲಿ: ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿ ಅ​ಖಿ​ಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂ​ನು ಮಂಡಳಿ ನಿರ್ಧಾರಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ಮಹಿಳೆಯರ ವಿರುದ್ಧ​ದ ಧಾರ್ಮಿಕ ತಾರತಮ್ಯ ಅಂತ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಅಲ್ಲದೆ ಈ ವಿಷಯ­ದಲ್ಲಿ ಪ್ರಧಾನಿ ಹೆಸರನ್ನು ಎಳೆದು ತರುತ್ತಿರು­ವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಭಾರತದಲ್ಲಿ ಮದುವೆ, ವಿಚ್ಛೇದನೆ, ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿ ಏಕರೂಪಿ ಕಾನೂನು ರಚನೆ ವಿಷಯ​ವನ್ನು ಪ್ರಭಾವಿ ಮುಸ್ಲಿಂ ಸಂಸ್ಥೆಯೊಂದು ರಾಜಕೀ​​ಕರಣಗೊಳಿಸುತ್ತಿದೆ. ಸಮಾನ ನಾಗರಿಕ ಸಂಹಿ​ತೆಯನ್ನು ಒಮ್ಮತದ ಮೂಲಕ ಜಾರಿ ಮಾಡ­ಲಾಗುತ್ತಿದ್ದು, ತರಾತುರಿಯಲ್ಲಲ್ಲ. ಇಲ್ಲಿ ಎಲ್ಲರೂ ರಾಜಕೀಯ ಹೊರಗಿಡಬೇ​ಕು,'' ಎಂದು ನಾಯ್ಡು ಹೇಳಿದ್ದಾರೆ. ಸಂಹಿತೆಗೆ ಸಂಬಂಧಿಸಿದ ಪ್ರಶ್ನಾವಳಿ​ಯನ್ನು ಬಹಿಷ್ಕರಿಸುವುದಾಗಿ ಮುಸ್ಲಿಂ ಕಾನೂನು ಮಂಡಳಿ ಹೇಳಿದ ಬೆನ್ನಲ್ಲೇ, ನಾಯ್ಡು ಹೇಳಿಕೆ ಹೊರಬಿದ್ದಿದೆ. ‘‘ಸರ್ವಾಧಿ​ಕಾರಿ ಧೋರಣೆ ತೋರಿದವರು ಪ್ರಧಾನಿ​ಯಲ್ಲ. ಪ್ರಶ್ನಾವಳಿ ಬಹಿಷ್ಕರಿಸಿ ನೀವೇ ಹಾಗೆ ವರ್ತಿಸಿ​ದ್ದೀರಿ,'' ಎಂದಿದ್ದಾರೆ ನಾಯ್ಡು.

ತಲಾಖ್‌ ಕೊನೆ​ಯಾ​ಗ​ಲಿ:
‘‘ಟ್ರಿಪಲ್‌ ತಲಾಖ್‌ ಕೊನೆಯಾಗ​ಬೇ​ಕೆಂ​ಬುದು ದೇಶದ ಒತ್ತಾಸೆ. ನಿಮ್ಮ ವಾದದಲ್ಲಿ ಪ್ರಮುಖ ಅಂಶವಿದ್ದರೆ, ಅದನ್ನು ಜನತೆಯ ಮುಂದಿಡಿ, ಚರ್ಚೆಗೆ ಚಾಲನೆ ನೀಡಿ. ಪ್ರಧಾನಿ ಹೆಸರನ್ನೇಕೆ ತರುತ್ತೀರಿ? ಟ್ರಿಪಲ್‌ ತಲಾಖ್‌ ಮತ್ತು ಸಮಾನ ನಾಗರಿಕ ಸಂಹಿತೆಯ ಬಗ್ಗೆ ಗೊಂದಲ ಬೇಡ. ಎರಡೂ ಭಿನ್ನ ವಿಚಾರಗಳು. ಇವೆಲ್ಲ ಮಾನವ ಹಕ್ಕುಗಳ ವಿಷಯ. ಆಕ್ಷೇಪ ಬಗ್ಗೆ ಅರ್ಥವಾಗುತ್ತಿಲ್ಲ. ರಾಜಕೀಯದಲ್ಲಿ ಆಸಕ್ತಿಯಿದ್ದರೆ, ಸೇರ್ಪಡೆಗೊಳ್ಳಿ,'' ಎಂದು ನಾಯ್ಡು ಹೇಳಿದ್ದಾರೆ.

ಧಾರ್ಮಿಕ ನಾಯಕರಿಗೇ ಬಿಡಿ ಎಂದ ಮುಲಾಯಂ:
ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿ ಮುಸ್ಲಿಂ ಸಂಸ್ಥೆಗಳ ವಿರೋಧಕ್ಕೆ ಧ್ವನಿಗೂಡಿಸಿರುವ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌, ‘‘ಇಂಥ ವಿಷಯಗಳನ್ನು ಧಾರ್ಮಿಕ ವಿದ್ವಾಂಸರ ಪಾಲಿಗೆ ಬಿಟ್ಟುಬಿಡಬೇಕು,'' ಎಂದಿದ್ದಾರೆ. ‘‘ಈ ವಿಷಯಕ್ಕೆ ಸಂಬಂಧಿಸಿ ನಾನು ಹೆಚ್ಚಿಗೆ ಹೇಳುವುದಿಲ್ಲ. ಈ ನಿರ್ಧಾರವನ್ನು ಆಯಾ ಧಾರ್ಮಿಕ ನಾಯಕರಿಗೆ ಬಿಡಬೇಕು. ದೇಶ ಮತ್ತು ಮಾನವೀಯತೆ ವಿಷಯದಲ್ಲಿ ಪ್ರತಿ​ಯೊಬ್ಬರೂ ಸಂಘಟಿತರಾಗಿ​ರಬೇಕು,'' ಎಂದು ಮುಲಾಯಂ ಹೇಳಿ​ದ್ದಾ​ರೆ.

(ಏಜೆನ್ಸಿ ವರದಿ)

click me!