ಕೇಂದ್ರದ ಈ ನಿರ್ಧಾರ ರಾಜ್ಯಕ್ಕೆ ಮರಣ ಶಾಸನ

By Web DeskFirst Published Jul 23, 2018, 11:44 AM IST
Highlights

ಕೇಂದ್ರ ಸರ್ಕಾರದ ಈ ನಿರ್ಧಾರವು ರಾಜ್ಯಕ್ಕೆ ಮರಣ ಶಾಸನವಾಗಿದೆ. ಆದ್ದರಿಂದ ಎಲ್ಲಾ ಸಂಸದರೂ ಸೇರಿ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಯಾಗದಂತೆ ನೋಡಿಕೊಳ್ಳಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. 

ಮಂಡ್ಯ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಇನ್ನೂ ಗೆಜೆಟ್‌ನಲ್ಲಿ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ ರಾಜ್ಯದ ಎಲ್ಲಾ ಸಂಸದರು ಒಗ್ಗಟ್ಟು ಪ್ರದರ್ಶಿಸಿ ಪ್ರಾಧಿಕಾರಕ್ಕೆ ಅನುಮೋದನೆಯಾಗದಂತೆ ನೋಡಿಕೊಳ್ಳಬೇಕು ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಕೃಷ್ಣರಾಜ ಸಾಗರ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿದ ಅವರ 101 ಈಡುಗಾಯಿ ಒಡೆದು ಹರಕೆ ತೀರಿಸಿ ಸುದ್ದಿ ಗಾರರೊಂದಿಗೆ ಮಾತನಾಡಿದರು.

ಸುಪ್ರೀಂ ಕೋರ್ಟ್ ಆದೇಶದ ನೆಪವೊಡ್ಡಿ ಕೇಂದ್ರ ಸರ್ಕಾರ ರಚಿಸಿರುವ ಕಾವೇರಿ ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಮರಣ ಶಾಸನವಾಗಿದೆ. ಎಲ್ಲಾ ಸಂಸದರು ಈ ಪ್ರಾಧಿಕಾರದ ವಿರುದ್ಧ ಹೋರಾಟ ನಡೆಸಬೇಕೆಂದು ಒತ್ತಾಯಿಸಿದರು. 

ದುರಂತಗಳೇ ಹೆಚ್ಚು: ಪ್ರಾಧಿಕಾರ ರಚನೆಯಾದರೆ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ. ಆಗ ನಮ್ಮ ರಾಜ್ಯದ ಯಾವುದೇ ಕೆರೆ-ಕಟ್ಟೆ, ನಾಲೆಗಳಿಗೆ ನೀರು ಬಿಟ್ಟುಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರಿಗೆ ಕುಡಿಯಲು ನೀರು ಸಿಗುವುದಿಲ್ಲ, ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೂ ಅವಕಾಶ ಆಗುವುದಿಲ್ಲ. ಆದ್ದರಿಂದ ರಾಜ್ಯದ ಸಂಸದರು ಯಾವುದೇ ಕಾರಣಕ್ಕೂ ಪ್ರಾಧಿಕಾರ ರಚನೆ ಆಗಲು ಬಿಡಬಾರದು. ಲೋಕಸಭೆಯಲ್ಲಿ ಹೋರಾಟ ನಡೆಸಬೇಕು. ಈ ಪ್ರಾಧಿಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲು ನಾನು ಸಿದ್ಧನಿದ್ದೇನೆ. ಲಕ್ಷಾಂತರ ಮಂದಿ ಜೈಲಿಗೆ ಹೋದರೂ ಸರಿ, ಯಾವುದನ್ನೂ ಲೆಕ್ಕಿಸುವುದಿಲ್ಲ ಎಂದರು. 

click me!